ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Friday, June 24, 2011

ಹಾಯ್ ಅಣ್ಣಾ.... ಹೇಗಿದ್ದೀಯ ?

ಹಾಯ್ ಅಣ್ಣಾ.... ಹೇಗಿದ್ದೀಯ ?


"ಜನ್ಮದಿನದ ಹಾರ್ಧಿಕ ಶುಭಾಷಯಗಳು"

ಹಳೆಯ ನೆನಪುಗಳನ್ನ ಸವಿಯೋ ಮುನ್ನ..... ನಿನಗೆ ದೇವರು ನೀನು ಬಯಸಿದ್ದೆಲ್ಲಾ ಕೊಡ್ಲಿ ಅಂತ ಹಾರೈಸ್ತೀನಿ :) ಇವತ್ತು ಯಾಕೋ ಗೊತ್ತಿಲ್ಲ... ನಮ್ಮ ಬಾಲ್ಯದ ಕೆಲವು ಘಟನೆಗಳು ತುಂಬಾ ನೆನಪಾಗ್ತಾ ಇದೆ ಅಣ್ಣಾ....

ವಿ. ಸೂ: ಇಲ್ಲಿ ಕಾಡುವ ನೆನಪುಗಳಿಗೆ ಒಂದಕ್ಕೊಂದು ಸಂಬಂಧ ಇರುವುದಿಲ್ಲ... ಹಾಗೇನಾದರೂ ಇದ್ದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ ;)

ನಾನು ನಿನ್ನೊಡನೆ ಕಳೆದ ಬಾಲ್ಯ ಅಷ್ಟಾಗಿ ನನ್ನ ನೆನಪಿಗೇ ಬರ್ತಾ ಇಲ್ಲ ಮಾರಾಯ.... ಅದ್ ಯಾಕೋ ಗೊತ್ತಿಲ್ಲ..... ಬಹುಷಃ ನಾನು ನನ್ನ ಬಾಲ್ಯವನ್ನ ಅಪ್ಪಯ್ಯನ ಜೊತೆಯೇ ಹೆಚ್ಚಾಗಿ ಕಳೆದೆನೇನೋ...

ನನಗೆ ಅಪ್ಪನಜೊತೆ ಪೇಟೆ ಸುತ್ತಿದ್ದು, ಲುಡೋ ಆಡಿದ್ದು, ಚೌಕಾಬಾರ ಆಡಿದ್ದೇ ನೆನಪಾಗತ್ತೆ. ಮತ್ತೆ ನಿನ್ನೊಡನೆ ಕಳೆದ ಸಮಯಗಳಲ್ಲಿ ಕೆಲವೊಂದೇ ಆಚ್ಚಳಿಯದೇ ಉಳಿದುರುವುದು. ನನಗೆ ಸೈಕಲ್ ಕಲಿಸಿಕೊಟ್ಟದ್ದು, ಅದು ಬಿಟ್ಟರೆ ನಾನು ಮತ್ತೆ ನೀನು ಪಣಿಶೇಖರ್ ಮನೆಯಿಂದ ತಂದ ಅಕ್ವೇರಿಯಂ, ಮತ್ತೆ ಅದರಲ್ಲಿ ಮೀನು ಮರಿ ಹಾಕಿದಾಗ ಅದನ್ನ ಐಯೋಡೆಕ್ಸ್ !!! ಬಾಟಲಿನಲ್ಲಿ ಇಟ್ಟು ಅದು ಸತ್ತು ಹೋದದ್ದು, ಮತ್ತೆ ನಿನ್ನಿಂದ ನನಗೆ ಬೆಳೆದುಬಂದ ಗಿಡಗಳನ್ನು ಬೆಳೆಸುವ ಹವ್ಯಾಸ!!!!

ನೆನಪಿದ್ಯಾ ಅಣ್ಣಾ.... ನಾವು ಆಗ ಹುಣಸೇ ಗಿಡಗಳನ್ನು ಐಯೋಡೆಕ್ಸ್ ಮತ್ತೆ ಸಿಕ್ಕ ಸಿಕ್ಕ ಸಣ್ಣ ಬಾಟಲಿಗಳಲ್ಲೆಲ್ಲಾ ಬೆಳೆಸುತ್ತಿದ್ದದ್ದು ? ನನಗೆ ಗಿಡಗಳಬಗ್ಗೆ ಪ್ರೀತಿ ಮೂಡಿಸಿದ್ದು ನೀನೇ :) ನಾವೆಲ್ಲಾ ಅಂದ್ರೆ ನಾನು, ನೀನು ಮತ್ತೆ ಅಕ್ಕ ಮಹಡಿಯಮೇಲೆ ಕಬ್ಬಿಣದ ಡ್ರಂ ಇಟ್ಟುಕೊಂಡು ಕ್ರಿಕೆಟ್ ಆಡ್ತಾ ಇದ್ದದ್ದು ನೆನ್ಪಿದ್ಯಾ ಅಣ್ಣಾ ? ಆಗಂತೂ ನೀನೇ ಅಂಪೈರ್.... ನಿನ್ನ ನಿರ್ಧಾರಕ್ಕೆ ನಾವು "ನೋ" ಅನ್ನೊಹಾಗೇ ಇರ್ಲಿಲ್ಲ. :)

ಆದರೆ ನನಗೆ ಜೀವನ ಅನ್ನೋದು ಅರ್ಥಾ ಆಗೋಕೆ ಶುರು ಆದಮೇಲೆ ನಡೆದ ಎಲ್ಲಾ ಘಟನೆಗಳು ನನ್ನ ಕಣ್ ಮುಂದೆನೇ ಇದೆ.... ಅಪ್ಪನ ಕಾರ್ಖಾನೆ ಮುಚ್ಚಿದಾಗ ನಮ್ಮ ಸಂಸಾರದ ದೋಣಿಯನ್ನ ಮುನ್ನಡೆಸುವ ಹೊಣೆ ಹೊತ್ಯಲ್ಲ.... ಆ ವಿಷಯಕ್ಕೆ ನಿನಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು. ನಿನ್ನ ಬಗ್ಗೆ ನನಗೆ ಬಹಳ ಅಭಿಮಾನವಿದೆ.


ಅಪ್ಪ ನಮ್ಮ ಓದು ಬರಹಕ್ಕೆಂದು ಸಾಲ ಮಾಡಿದ್ರೆ ನೀನು ನಿನ್ನ ಖರ್ಚನ್ನು ನೋಡಿಕೊಳ್ಳುವ ಸಲುವಾಗಿ ಮನೆಪಾಠ ಶುರುಮಾಡಿದ್ದೆ. ನಾನು ನಿನ್ನ ವಿಧ್ಯಾರ್ಥಿಬಳಗದಲ್ಲೊಬ್ಬ :) ಯಾವಾಗ ನೋಡಿದ್ರೂ ಮಹಡಿ ಮೇಲಿನ ರೂಮಿನಲ್ಲಿ ಬಾಗಿಲು ಹಾಕ್ಕೊಂಡು ಒಬ್ಬನೇ ಇರ್ತಾ ಇದ್ಯಲ್ಲ.... ಎಷ್ಟು ಶ್ರಮ ಪಟ್ಟಿರಬಹುದು ಅಂತ ಈಗ ಅರ್ಥ ಆಗತ್ತೆ :) ಆಗೆಲ್ಲಾ ನಿನ್ನ ಟ್ಯೂಷನ್ ಮಾಡೋದಕ್ಕೆ ಕೆಲವು ಕರಪತ್ರಗಳನ್ನ ಮುದ್ರಿಸಿದ್ದೆ.... ನೆನ್ಪಿದ್ಯಾ ??? ಅದನ್ನ ನಾನು ಮತ್ತೆ ನೀನು ಹರೀಶನ ಸಹಾಯದಿಂದ ಎಲ್ಲಾ ಪೇಪರ್ ಗಳ ಒಳಗೆ ಬೆಳ್ಳಂಬೆಳಿಗ್ಗೆ ಹೋಗಿ ಹಾಕಿ ಬಂದಿದ್ವಿ. ನಂತರ ನೀನು ಮತ್ತೊಬ್ಬ ಟ್ಯೂಷನ್ ಮಾಡೋ ಮೇಷ್ಟರ ಮನೆ ಹತ್ತಿರ ಹಂಚು ಅಂದಿದ್ದೆ..... ನಾನು ಹೋಗಿ ಕೆಲವರಿಗೆ ಹಂಚಿ ಮತ್ತೆ ಅದ್ಯಾರ್ ಹತ್ರನೋ ಬೈಸ್ಕೊಂಡು ಬಂದಿದ್ದೆ. ನಿನ್ನ ಆ ದಿನಗಳ ಶ್ರಮದ ಫಲವೇ ಇಂದು ನೀನು ಮೈಸೂರಿನಲ್ಲಿ "ಬೇರು" ಬಿಡಲು ಕಾರಣ ಮತ್ತು ಆ ನಿನ್ನ ಎರೆಡಕ್ಷರದ ಹೆಸರು ಹಬ್ಬಲು ಕಾರಣ. ನಾನು ನನ್ನ ಜೀವನದಲ್ಲಿ ಎಡವಿದಲ್ಲೇಲ್ಲಾ ನನ್ನ ಹಿಂದೆಯೇ ನೀನಿದ್ದು ನನಗೆ ಪ್ರೂತ್ಸಾಹ ಕೊಟ್ಯಲ್ಲ.... ಅದೇ ನಾನು ಇಂದು ರಾಜಧಾನಿಯಲ್ಲಿ ನೆಲೆಸಲು ಕಾರಣ.

ನಾನು ಚಿಕ್ಕವನಾಗಿದ್ದಾಗ ನಿಜಕ್ಕೂ ನಿನ್ನ ಮೇಲೆ ಹೊಟ್ಟೆ ಕಿಚ್ಚು ಬರ್ತಾ ಇತ್ತು. ಅಮ್ಮ ಅಪ್ಪ ನಿನಗೆ ಮಾತ್ರ ಮೀಸಲಾಗಿ ಇಡ್ತಾ ಇದ್ದ ಕೆಲವು ವಸ್ತುಗಳು, ನಮಗೆ (ನಾನು ಮತ್ತೆ ನನ್ನ ಅಕ್ಕ) ಇಲ್ಲದೇ ನಿನಗೆ ಮಾತ್ರಾ ಓದಿಕೊಳ್ಳಲು ಇದ್ದ ಕೋಣೆ, ಟೆಬಲ್ಲು, ಎಲ್ಲವನ್ನ ನೋಡಿ ಅಪ್ಪ ಮತ್ತೆ ಅಮ್ಮ ಯಾಕೆ ಹೀಗೆ ತಾರತಮ್ಯ ಮಾಡ್ತಾರೆ ಅಂತ ಅನಿಸಿದ್ದು ಸುಳ್ಳಲ್ಲ. ಈ ವಿಷಯವಾಗಿ ನಾನು ಅಪ್ಪ ಮತ್ತೆ ಅಮ್ಮನೊಂದಿಗೆ ಕೆಲವೊಮ್ಮೆ ಕೇಳಿದ್ದೂ ಉಂಟು. "ಅವನು ಹಿರೀ ಮಗ... ನಿನ್ ಹಾಗಲ್ಲ ಸುಮ್ನಿರು.... " ಅಂತ ಬೈಸಿಕೊಂಡದ್ದೂ ಉಂಟು. ಅಪ್ಪ ಸೊಸೈಟಿಯಿಂದ ಅಕ್ಕಿ, ಗೋಧಿ ತಂದ್ರೆ ಅದನ್ನ ಆರಿಸೋ ಕೆಲಸಕ್ಕೂ ನಿನ್ನ ಕರೀತಾ ಇರ್ಲಿಲ್ಲ, ಅದೆಲ್ಲಾ ನಮ್ಮ ಪಾಲಿಗೇ ಮೀಸಲು. ಅಪ್ಪ, ಅಮ್ಮನಜೊತೆ ಅಕ್ಕಿ ಆರಿಸ್ತಾ ಇದ್ವಿ. ಮನೆಗೆ ಹಾಲು ತರ್ಬೇಕಾದ್ರೆ ಒಂದೋ ನಾನು ಇಲ್ಲ ಅಕ್ಕ ಹೋಗ್ತಾ ಇದ್ವಿ. ಮನೆಯಲ್ಲಿ ಬಟ್ಟೆ ಬರೆಗಳಿಂದ ಹಿಡಿದು ಎಲ್ಲದಕ್ಕೂ ನಿನಗೇ ಮೊದಲ ಪ್ರಾಶಸ್ತ್ಯ. ನೀನು ಬಿಟ್ಟದ್ದು ನಮಗೆ.... ಅದು ನೀನು ಸಣ್ಣ ಮಗುವಿದ್ದಾಗಿನಿಂದ ಇದ್ದೇ ಇತ್ತು. ಇಂದಿಗೂ ನಾವು ಸಣ್ಣ ಮಕ್ಕಳಾಗಿದ್ದಾಗಿನ ಚಿತ್ರಗಳಿಗಿಂತಾ ನಿನ್ನ ಚಿತ್ರಗಳೇ ಹೆಚ್ಚು ಇವೆ. ನಾಮಕರಣ, ಉಪನಯನ ಹೀಗೆ ಎಲ್ಲದರಲ್ಲೂ ನಾನು ಕಡೆಯ ಮಗ.... ಹಾಗಾಗಿ ಎಲ್ಲದರಲ್ಲೂ ಕಡೆಯವನೇ ಆದೆ.

ಆದರೆ ಆ ಎಲ್ಲಾ ನೋವನ್ನ ಮೀರಿಸೋ ಹಾಗೆ ನೀನು ನಮ್ಮನ್ನ ನೋಡಿಕೊಂಡಿದ್ದೀಯ. ನಿನ್ನ ಮೇಲೆ ನನಗೆ ಹೆಚ್ಚು ಪ್ರೀತಿ ಮೂಡಿದ್ದು ನಾನು ಬೆಳೆದು ಹೈ ಸ್ಕೂಲಿಗೆ ಬಂದನಂತರವೇ ಇರಬೇಕು. ನೀನು ನನಗೆ ನಿನ್ನ ಬಿ.ಎಸ್.ಏ ಸೈಕಲ್ಲನ್ನು ಓಡಿಸಲು ಕಲಿಸಿದ್ಯಲ್ಲ.... ಆಮೇಲೆ ಒಮ್ಮೊಮ್ಮ ಅದನ್ನ ಬೇಕಾದ್ರೆ ತೊಗೊಂಡ್ ಹೋಗು ಅಂತಾ ಇದ್ಯಾಲ್ಲ... ಆಗಂತೂ ಎಷ್ಟು ಖುಷಿ ಆಗೋದು ಗೊತ್ತಾ ???? ಈಗಲೂ ನೀನು ಒಮ್ಮೊಮ್ಮೆ "ಪಲ್ಸರ್ ತೊಗೊಂಡ್ ಹೋಗು ಅಂತ್ಯಲ್ಲಾ, ಅದೂ ಖುಷಿ ಕೊಡತ್ತೆ" ನಿನ್ನ ಬಗ್ಗೆ ಹೇಳಲು ಪದಗಳು ಸಾಲೋದಿಲ್ಲ ಅಣ್ಣ.... ನನ್ಗೆ ನೀನಂದ್ರೆ ತುಂಬ ತುಂಬಾ ತುಂಬಾ ಇಷ್ಟ!!!

ನಾನು ಈಗಲೂ ನನ್ನ ಆಪ್ತರಲ್ಲಿ ನಿನ್ನ ಗುಣಗಾನ ಮಾಡದೇ ಇರುವುದಿಲ್ಲ, ಯಾಕೆಂದ್ರೆ ಒಂದು ಹಂತದಲ್ಲಿ ಜೀವನದ ಬಗ್ಗೆ ಬೇಸರಿಕೆ ಮೂಡಿದ್ದ ನನಗೆ ಅದರಲ್ಲಿ ಹೊಸ ಉತ್ಸಾಹ ತುಂಬಲು ನೀನು ಕಾರಣನಾದೆ. ಹೊಸ ಕನಸುಗಳನ್ನ ಕಟ್ಟಿಕೊಟ್ಟೆ.... ಅದನ್ನ ಸಾಕಾರಗೊಳಿಸಲು ನನ್ನ ಬೆನ್ನೆಲುಬಾದೆ.... ಮುಂಗೋಪಿಯಾಗಿದ್ದ ನನಗೆ ಜೀವನ ಎದುರಿಸುವ ಕಲೆಯನ್ನು ಹೇಳಿಕೊಟ್ಟೆ. ಸಮಾಧಾನದಿಂದ ಪರಿಸ್ಥಿತಿಯನ್ನ ಎದುರಿಸುವ ಪಾಠ ಹೇಳಿಕೊಟ್ಟೆ. ನಮ್ಮ ಮನೆಗೆ ನೀ ತಂದ ಆ ಪುಟ್ಟ ಹಳೆಯದಾದ ಗಣಕಯಂತ್ರದಿಂದ ನಾನು ಇಂದು ಐದಂಕಿಯ ಸಂಪಾದನೆಯಲ್ಲಿದ್ದೇನೆ. ನಿನ್ನ ಗೆಳೆಯರ ಬಳಗದಿಂದಲೇ ಅಣ್ಣ ನಾನು ಮೇಲೆ ಬಂದದ್ದು. ನಿನಗೆ ನೆನಪಿದ್ಯಾ ? ಅವತ್ತು ನಾವೆಲ್ಲಾ ಬೆಟ್ಟಕ್ಕೆ ಹೋಗಿ ನಮ್ಮ "ಜಿ.ಟಿ.ಆರ್" ನಲ್ಲಿ ತಿಂಡಿ ತಿಂದು ಹೊರಡುವಾಗ ನನಗೆ ಬೆಂಗಳೂರಿನ ಕೆಲಸದ ಬಗ್ಗೆ ಅಣ್ಣಯ್ಯ ಹೇಳಿದ್ದ. ಅಲ್ಲಿಂದ ಮನೆಗೆ ಬಂದಮೇಲೆ ನನ್ನ ಮನಸ್ಸು ಬಹಳ ಗೊಂದಲದಲ್ಲಿತ್ತು. ಬೆಂಗಳೂರಿಗ ಹೋಗುವುದೋ, ಬೇಡವೋ... ಹೋದರೆ ಎಲ್ಲಿ ಉಳಿಯುವುದು ? ಯಾರ ಮನೆ ? ಅವರೊಂದಿಗೆ ಹೇಗೆ ಹೊಂದಿಕೊಳ್ಳುವುದು ???? ಇನ್ನೂ ಸಾವಿರ ಪ್ರಶ್ನೆಗಳು.......... ಅದೆಲ್ಲಕ್ಕೂ ಉತ್ತರ ನೀನಾದೆ. "ಬೆಂಗ್ಗ್ಳೂರಲ್ಲಿ ಮನೆಮಾಡ್ಕೊ, ಆಗ ನಮಗೂ ಊರಿಂದ ಬಂದ್ರೆ ಉಳ್ಕೊಳ್ಳೋಕೆ ಒಂದು ಮನೆ ಇರತ್ತೆ" ಎಂದೆಲ್ಲಾ ಹೇಳಿ ಹುರಿದುಂಬಿಸಿದ್ದೆ. ಆ ನಿನ್ನ ಸ್ಪೂರ್ಥಿ ತುಂಬಿದ ಮಾತುಗಳೇ ನನ್ನ ಕಾಲಿನ ಮೇಲೆ ನಾನು ನಿಲ್ಲುವ ಹಾಗೆ ಮಾಡಿದೆ. ನಿನ್ನ ಸಹಾಯದಿಂದಲೇ ಖರೀದಿಸಿದ್ದ "ಟಿ.ವಿ.ಎಸ್-ಎಕ್ಸ್ ಎಲ್ ಸೂಪರ್" ಗಾಡಿಯಲ್ಲಿ ನಾನು ಮತ್ತು ನೀನು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೆವು. ಆ ಕ್ಷಣಗಳನ್ನ ಎಂದಿಗೂ ನಾನು ಕಳೆದುಕೊಳ್ಳುವುದಿಲ್ಲ. ನೀನು ನನ್ನ ಮುದ್ದಿನ ಗುರು, ಮಾರ್ಗದರ್ಶಿ :)

ಕಳೆದ ಕೆಲವು ವರ್ಷಗಳ ಹಿಂದೆ ನಾನು ಮೈಸೂರಿನಲ್ಲಿ ನನ್ನ Ligament tear ಮಾಡಿಕೊಂಡಾಗ ನೀನು ಮತ್ತೆ ಅತ್ತಿಗೆ ನನ್ನ ನೋಡಿಕೊಂಡದ್ದನ್ನು ಮರೆಯೋದಿಕ್ಕೆ ಆಗೋದಿಲ್ಲ. ಪುಟಾಣಿ ವಿಸ್ಮಯ ಕೂಡಾ ನನ್ನ ಅಷ್ಟೇ ಕಾಳಜಿ ಇಂದ ನೋಡ್ಕೊಂಡ್ಳು. ಆ ಸಮಯದಲ್ಲಿ ಧೈರ್ಯಗೆಟ್ಟು ಕೂತಿದ್ದ ನನಗೆ ಧೈರ್ಯ ಹೇಳಿದವನು ನೀನು..... ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದವನು ನೀನು. ಏನಾದರೂ ಹೆದರದೇ ಮುನ್ನಡೆಯಬೇಕು ಅನ್ನೋದನ್ನ ಹೇಳಿದವನು ನೀನು.... :)

ಇನ್ನೂ ಬಹಳಷ್ಟು ವಿಚಾರಗಳು ನಿನ್ನೊಡನೆ ಮಾತನಾಡುವುದಿದೆ. ಆದರೆ ಸಧ್ಯಕ್ಕೆ ಬೇಡ :) ಮತ್ತೆ ಯಾವಾಗಲಾದರೂ ಕುಳಿತು ಮಾತನಾಡೋಣ :)

ಅಂತೂ ಇಂತೂ ನೋಡ್ತಾ ನೋಡ್ತಾ ಜೀವನದ ಅರ್ಧ ಆಯಸ್ಸು ಕಳದೇ ಹೋಯ್ತಲ್ಲಾ ? ನಾನು ನನ್ನ ಮೊದಲಿನ ಅಣ್ಣನ್ನ, ಆ ದಿನಗಳನ್ನ ತುಂಬಾ ಮಿಸ್ ಮಾಡ್ಕೊತಾ ಇದ್ದೀನಿ ಕಣೋ.... ಜೀವನ ಅಂದ್ ಮೇಲೆ ಎಲ್ಲಾರೂ ಸಮಯಕ್ಕೆ ತಕ್ಕ ಹಾಗೆ ಮತ್ತೆ ತಮಗೆ ತಕ್ಕ ಹಾಗೆ ಬದಲಾಗಲೇ ಬೇಕು ಅನ್ನೋ ಕಟು ಸತ್ಯ ತಿಳಿದೂ ನಾನು ನಿನ್ನಲ್ಲಿ ನನ್ನ ಮೊದಲಿನ ಅಣ್ಣನ್ನ ನೋಡೋಕೆ ಇಷ್ಟ ಪಡ್ತಾ ಇದೀನಿ.... ಆದರೂ ಒಳ ಮನಸ್ಸಿನಲ್ಲಿ ಪದೇ ಪದೇ ಒಂದು ಮಾತು ಮರುಕಳಿಸತ್ತೆ.... "ಬದಲಾವಣೆ ಜಗದ ನಿಯಮ" ಅಲ್ವಾ ??? :)



ಇಂತೀ ನಿನ್ನ ನಲ್ಮೆಯ... ಪ್ರೀತಿಯ.... ತಮ್ಮ.....

ಪ್ರಶಾಂತ ಜಿ ಉರಾಳ (ಪಚ್ಚು)

Thursday, April 7, 2011

ಅಣ್ಣನ ಕೊಡುಗೆ

ನನ್ನ ಜನ್ಮದಿನಕ್ಕೆ ನನ್ನ ಅಣ್ಣನ ಕೊಡುಗೆ :)



ಮುಪ್ಪಿನ ಸುಳಿಯಲಿ ಉಪ್ಪು ಗಂಜಿಯೂ ಸಿಗದ ಸುಳಿವಲಿ
ಮೂರನೇ ಹೂ ಅರಳಿತ್ತು ಮನೆಯಂಗಳದಲಿ

ಹೂವಿನ ದಳದ ಮೃದು ಸ್ಪರ್ಶಕ್ಕಿಂತಾ
ಮಾಲಿಗೆ ಹಠ ಕೋಪವೆಂಬ ಮುಳ್ಳಿನ ಮೇಲೇ ಕೋಪ

ಮಾರಿಗೆ ಸಾಲದು ಮೂರು ಕಟ್ಟಿಗೆ ಸಿಗದು
ತಿಳಿವು ಹೊಳಹು ಕಡಿಮೆ ಎಂಬೆಲ್ಲಾ ಮೂದಲಿಕೆ

ಉಳಿಪೆಟ್ಟು ನೂರಾರು ಶಿಲೆಯ ಮೇಲೆ ಅಟ್ಟಹಾಸದ್ದೇ ಕಾರುಬಾರು
ವಾಸ್ತವದ ಬೆಂಕಿಯಲ್ಲಿ ಹೂವಿಗೆ ಕಳೆಯಿತು ಇಪ್ಪತ್ಮೂರು

ಮಾಲಿ ಮಾರಿದ ಹೂವಿಗೆ ಪರವೂರಲಿ ಬೇಡಿಕೆ
ಅಂತರ್ಜಾಲದ ಲೋಕಕೆ ಅದರ ಒಡಂಬಡಿಕೆ

ಈಗ ಮಾಲಿ ಇಲ್ಲ; ಮೂದಲಿಕೆ ಇಲ್ಲ ಬೇರುಗಳು ಅಲ್ಲೇ; ಬಳ್ಳಿ ಹಬ್ಬಿದೆ ಊರಗಲ
ಹೂ ಶ್ರೇಷ್ಠ ಎಲ್ಲರಿಗೂ ಇಷ್ಟ ನಮ್ಮ ಮನೆಯ ಮಲ್ಲಿಗೆ ಘಮ ಘಮಿಸುತಿದೆ ಮೆಲ್ಲಗೆ

ಬಾಲ್ಯದ ಪೊರೆ ಕಳಚಿದೆ ಯೌವ್ವನ ಕಾಲಿಕ್ಕಿದೆ ಹಳೆನನಪು ಹೊಸಜೀವನಕೆ ಹುರುಪು
ಬೆಳಕು ಚೆಂದ ಹೂವಿಗೆ ಬಿಸಿಲು ಬೇಡ ಒಂಟಿ ಜೀವನ ಚೆಂದ ನೋಡುವವರಿಗಲ್ಲ

ಸಫಲತೆಯ ಜಾಡಲ್ಲಿ ಹಾರಿಸು ಪರಾಗ ಹಾಡು ಹೊಸರಾಗ
ನಿನಗೆ ಸಿಗದ ಬಾಲ್ಯ, ಸುಂದರ ಕನಸುಗಳು ಕಟ್ಟಿಕೊಡು ನಿನ್ನ ಕರುಳ ಬಳ್ಳಿಗೆ

ಹೆಜ್ಜೆ ಇದೆ ನೂರಾರು ಎಡರು ತೊಡರುಗಳು ಸಾವಿರಾರು
ಮರೆಯಬೇಡ, ನೀ ತಬ್ಬಿದ ಆಲದ ಮರ ನಾನೇ

ಆ ನಿಟ್ಟುಸಿರಲ್ಲಿ ನೋವನೆಲ್ಲಾ ಹೊರಗೆ ಬಿಡು, ಕೋಪವದು ನಿನಗೆ ಇಂಗಾಲ
ನಿನ್ನ ಸೌಂದರ್ಯಕ್ಕೆ ಆ ದೃಷ್ಟಿಬೊಟ್ಟೇಕೆ? ಕೋಪಿಸಿಕೊಳ್ಳುವವರಿಗಲ್ಲ ಈ ಕಾಲ

ಬಾಲ್ಯ ನಿನ್ನೆಯಂತೆ, ಭವಿಷ್ಯ ಸುಂದರವಂತೆ
ಬಾಳು ನೀ ಸಾರ್ಥಕದಿ ಧೃವತಾರೆಯಂತೆ

ಜೊತೆಯಿರದೆ ಕಳೆದೆವೆಷ್ಟೋ ದಿನ
ನೆನಪು ಪ್ರತಿ ಕ್ಷಣ ಪ್ರತಿ ದಿನ
ಇಂದು ನಿನ್ನ ಜನುಮದಿನ
ನಿನಗಿದೋ ನನ್ನ ನುಡಿ ನಮನ

-ಜಿ. ಕೃಷ್ಣ (೧೪-೦೨-೨೦೦೯)
ಬರೆದ ಸಮಯ ಮುಂಜಾನೆ ೩.೪೫

ಲವ್ ಅಟ್ ಫಸ್ಟ್ ಸೈಟ್..

ನನ್ನ ಹುಡುಗಿಯನ್ನ ಮೊದಲಸಲ ನೋಡಲು ಹೋದದ್ದು ೧೧ನೇ ಏಪ್ರಿಲ್ ೨೦೧೦. ಆಕೆಯನ್ನು ಕಂಡು ಬಂದಾಗ ಆಕೆಗೆಂದು ಬರೆದ ನಾಲ್ಕು ಸಾಲುಗಳು ಇವು. :)

ಲವ್ ಅಟ್ ಫಸ್ಟ್ ಸೈಟ್..


ಅದು ನನ್ನ ಮೊಟ್ಟ ಮೊದಲ ಖಾಸಗೀ ಇಂಟರ್ವ್ಯು :) ನಮ್ಮ ಜಾತಕ ಕೂಡಿಬಂದು ಮನೆಯವರೆಲ್ಲ ಒಪ್ಪಿದ ಮೇಲೆ ನಿನ್ನನ್ನು ನೋಡಲು ಬಂದಿದ್ದು ನಾನು. ಬಿಸಿಲಿನ ತಾಪದಿಂದ ಬಳಲಿದ್ದ ನಮಗೆ ನಿಮ್ಮ ಮನೆಯಲ್ಲಿ ಕೊಟ್ಟ ಪಾನಕ ದಣಿದಿದ್ದ ದೇಹಕ್ಕೆ ತಂಪನ್ನು ತಂದಿತ್ತು. ನಿನ್ನ ಮನೆಯವರೊಂದಿಗೆ ಮಾತನಾಡಿದ ನಂತರ ನನ್ನ ಕಣ್ಗಳು ನಿನ್ನ ನೋಡುವ ತವಕದಿಂದ ಕಾತರಿಸಿದ್ದವು. ಅದೇ ನನ್ನ ಮೊಟ್ಟ ಮೊದಲ ಇಂಟರ್ವ್ಯೂ ಆದ್ದರಿಂದ ಒಂದುರೀತಿಯ ನಾಚಿಕೆ, ಸಂಕೋಚ ಮತ್ತೊಂದು ಸ್ವಲ್ಪ ಗಡಿಬಿಡಿ.... ಎಲ್ಲವೂ ಒಮ್ಮೆಲೇ ಆಗಿತ್ತು. ಅಂತೂ ಇಂತೂ ನೀನು ಬಂದೇ ಬಿಟ್ಟೆ. ಬಂದವಳೇ ಅನತಿ ದೂರದಲ್ಲಿದ್ದ ಕೆಂಪುಬಣ್ಣದ ಕುರ್ಚಿಯಮೇಲೆ ಕುಳಿತು ಒಮ್ಮೆ ನೆಲವನ್ನೇ ನೋಡುತ್ತಾ, ಮತ್ತೊಮ್ಮೆ ನನ್ನ ಅಣ್ಣನ ಮಗಳು ವಿಸ್ಮಯಳನ್ನು ಮಾತನಾಡಿಸುತ್ತಾ ಇದ್ದೆ.

ನಿನ್ನ ತಂದೆಯವರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ನಾನು ತತ್ತರಿಸಿದ್ದೆ. ನಿನ್ನೊಡನೆ ಇಂದು ಮಾತನಾಡುತ್ತೇನಾ ? ಇಲ್ಲವಾ ? ಅನುಮಾನಗಳಹುತ್ತ ನನ್ನನ್ನು ಆವರಿಸಿತ್ತು. ಅಂತೂ ಇಂತೂ ನಿಮ್ಮ ತಂದೆಯವರ ಗ್ರೀನ್ ಸಿಗ್ನಲ್ ಸಿಕ್ಕೇ ಬಿಟ್ಟಿತು :)


ನಮ್ಮಿಬ್ಬರನ್ನೂ ಒಂದು ಕೊಠಡಿಗೆ ಕಳುಹಿಸಲಾಗಿತ್ತು, ಕೊಠಡಿಯ ಹೊರಗಡೆ ನನ್ನ ಅಣ್ಣ ಅತ್ತಿಗೆ ಮೊದಲಾದವರಿದ್ದರೆ ಕೊಠಡಿಯ ಒಳಗೆ ನಾವಿಬ್ಬರೂ ಕುಳಿತು ಮಾತನಾಡುತ್ತಿದ್ದೆವು. ನನಗೋ ಮನಸ್ಸಲ್ಲೇ ಏನೋ ಒಂದು ರೀತಿಯ ಸಂಕೋಚ. ಆಡಂಭರದ ಸೀರೆಯಿಲ್ಲದಿದ್ದರೂ ಸರಳವಾದ ಚೂಡೀದಾರಿನಲ್ಲಿ ಚೆಂದವಾಗಿ ಕಾಣ್ತಾ ಇದ್ದೆ ನೀನು :) ಆ ನಿನ್ನ ಸರಳತೆ ನನಗೆ ಇಷ್ಟವಾಯ್ತು. ನಾಚುತ್ತಾ ನಗುತ್ತಾ ನೀನು ಮಾತನಾಡುತ್ತಿದ್ದ ಶೈಲಿ... ಅಲೆಗಳಂತೆ ತೇಲಿ ಬಿಡುತ್ತಿದ್ದ ಆ ನಿನ್ನ ನಗು ಎಲ್ಲವೂ ನಾ ಮೇಲು ತಾ ಮೇಲು ಎಂದು ಪೈಪೋಟಿಗಿಳಿದಂತಿದ್ದವು. ಆ ಮಾತಿನ ನಡುವೆಯೂ ನಿನ್ನ ಕಣ್ತುಂಬಾ ನೋಡಿದೆ... ನೋಡಿದ್ರೆ ಹಾಗೇ ನೋಡ್ತಾನೇ ಇರಬೇಕು ಅನ್ನಿಸ್ತಿತ್ತು. ಆ ನೋಟದಲ್ಲಿ, ಆ ಗಡಿಬಿಡಿಯಲ್ಲಿ ಅದೇನೇನು ಮಾತಾಡಿದ್ನೋ ನನಗೇ ಗೊತ್ತಿಲ್ಲ. ನಿನ್ನ ಕಣ್ ಗಳಲ್ಲಿ ಏನೋ ಹೊಳಪಿತ್ತು. ಆ ನಗುವಲ್ಲಿ ಏನೋ ಒಂದು ತುಂಟತನವಿತ್ತು. ಪ್ರತೀ ಸಲವೂ ನಾಚಿ ನಕ್ಕು ನೀನು ನೆಲ ನೋಡುವಾಗ ನಿನ್ನ ನೀಳ ಕೂದಲುಗಳು ಹೊಳೆಯುತ್ತಿದ್ದವು. ಹೌದು... ಬಹುಶಃ ಇದನ್ನೇ ಲವ್ ಅಟ್ ಫಸ್ಟ್ ಸೈಟ್ ಅನ್ನೋದೇನೋ.... ನಿನ್ನೊಡನೆ ಮಾತನಾಡುತ್ತಿದ್ದಾಗ ನನ್ನ ಮನದಲ್ಲಿದ್ದ ನನ್ನ ಕಲ್ಪನೆಯ ಕನ್ಯೆಗೆ ಮತ್ತೆ ನಿನಗೆ ಸ್ಪರ್ಧೆ ಏರ್ಪಟ್ಟಿತ್ತು. ಕಲ್ಪನೆಯ ಕನ್ಯೆಗೆ ನಿರ್ಧಿಷ್ಟವಾದ ರೂಪವಿಲ್ಲದಿದ್ದರಿಂದ ನಿನ್ನ ರೂಪವೇ ಮೇಲ್ಪಂಕ್ತಿಯಲ್ಲಿ ಸಾಗಿತ್ತು. ಸರಿ ಸುಮಾರು ಹತ್ತು ನಿಮಿಷಗಳ ನಂತರ ನಮ್ಮ ಮಾತು ಮುಗಿದಿತ್ತು. ಸಾಮಾನ್ಯವಾಗಿ ಉಪ್ಪಿಟ್ಟು ಮತ್ತು ಕೇಸರೀ ಭಾತಿನಲ್ಲಿ ಎಲ್ಲರ ಇಂಟರ್ವ್ಯು ನಡೆದರೆ ನನಗೆ ಆಲೂಗಡ್ಡೆಯ ಚಿಪ್ಸ್ ಮತ್ತು ಸೋನ್ ಪಾಪಡಿಯಲ್ಲೇ ಅಡ್ಜಸ್ಟ್ ಮಾಡ್ಕೊಳ್ಬೇಕಾಯಿತು. ನಂತರ ನಿಮ್ಮಲ್ಲಿಂದ ಹೊರಡುವಾಗ ಕೊನೇ ಘಳಿಗೆಯಲ್ಲಿ ಎಲ್ಲರ ನಡುವೆ ನೀನು ನನ್ನನ್ನು ಇಣುಕಿನೋಡಿದ ನೋಟ ನನಗೆ ಹಿಡಿಸಿತು :) ಆಗಲೆ ನನ್ನ ಮನಸ್ಸು ಗಟ್ಟಿಯಾಗಿ ಹೇಳುತ್ತಿತ್ತು..... ಕದ್ದು ಕದ್ದು ನನ್ನ ನೋಡೋ ತುಂಟ ಕಣ್ಣು ನಿಂದೇನಾ ಅಂತ.

ನಮ್ಮ ಆ ಭೇಟಿಯ ನಂತರ ಸುಮಾರು ಒಂದು ತಿಂಗಳು ನಿನ್ನನ್ನು ನೋಡಲಾಗಲಿಲ್ಲ. ಆದರೆ ಆ ಮೊದಲ ನೋಟದ ಸವಿ ನೆನಪು ಮನಸ್ಸಿನಿಂದ ಎಂದೂ ಮಾಸುವುದಿಲ್ಲ. ನಂತರ ನಮ್ಮಿಬ್ಬರ ಮನೆಯವರಿಗೂ ಈ ಸಂಭಂಧ ಒಪ್ಪಿಗೆಯಾದಬಳಿಕ ನಿನ್ನ ಜನ್ಮದಿನದಂದು ನಿನಗೆ ಫೋನ್ ಮಾಡುವ ಧೈರ್ಯ ತಂದುಕೊಂಡೆ. ನಿನ್ನ ಮೊಬೈಲಿಗೇ ಹೇಗೆ ಕರೆಮಾಡುವುದು ??? ಮಾಡಲು ನನ್ನ ಬಳಿ ನಿನ್ನ ನಂಬರ್ ಆದರೂ ಇಲ್ಲವಲ್ಲಾ... ಆದಿನ ಎಷ್ಟು ಹೆಣಗಾಡಿದ್ದೆ ಗೊತ್ತಾ??? ಕಡೆಗೆ ಸ್ವಲ್ಪ ಆಲೋಚಿಸಿ ನಿಮ್ಮ ಸ್ಥಿರದೂರವಾಣಿಗೇ ಕರೆನೀಡಿದೆ.

ಅಯ್ಯೋ ಗ್ರಹಚಾರವೇ !!! ಆ ದೂರವಾಣಿ ಅವತ್ತೇ ಕೆಟ್ಟುಹೋಗಬೇಕಿತ್ತೇ... ಮತ್ತೆ ದಾರಿ ಕಾಣದೇ ನಿಮ್ಮ ದೊಡ್ಡಪ್ಪನ ಮೊಬೈಲಿಗೇ ಕರೆನೀಡಿದ್ದೆ. ಆಗ ತಾನೆ ಸವಿ ನಿದ್ರೆಯಿಂದೆದಿದ್ದ ನಿನಗೆ ನನ್ನ ಫೋನ್ ಕಾಲ್ ನಿಂದ ಸ್ವಲ್ಪ ಆಶ್ಚರ್ಯವಾರಿರಬೇಕು!!! ಸರಿಯಾಗಿ ಮಾತನಾಡಲೂ ಬರದೆ ಏನೇನೋ ಬಡಬಡಾಯಿಸಿ ನಿನ್ನ ಮೊಬೈಲ್ ನಂಬರ್ರನ್ನು ಪಡೆದುಕೊಂಡು ಕಾಲ್ ಮುಗಿಸಿದ್ದೆ ನಾನು :)

ಅಂದಿನಿಂದ ನಮ್ಮ SMS ಗಳ ವಿನಿಮಯ ಪ್ರಾರಂಭವಾಯಿತು. ಮೊದ ಮೊದಲು ನಿನಗೆ ಬರೀ SMS ಮಾಡ್ತಾ ಇದ್ದ ನಾನು ನಿಮ್ಮ ತಂದೆ ನನ್ನ ಮನೆಗೆ ಬಂದು ಹೋದ ನಂತರ ಕಾಲ್ ಮಾಡೋ ಧೈರ್ಯ ತಂದುಕೊಂಡೆ. ಪ್ರತೀ ದಿನ ನನ್ನ ಅಮ್ಮನಿಗೆ ತಪ್ಪದೇ ಕರೆ ಮಾಡುತ್ತಿದ್ದ ನಾನು ಅಂದಿನಿಂದ ನಿನಗೂ ನನ್ನ ದಿನಚರಿಯಲ್ಲಿ ಸಮಯ ಮೀಸಲಿಡಲಾರಂಭಿಸಿದೆ. ಅಂದು ನೀನು "ಅಮ್ಮ ಹೇಳ್ತಾ ಇದ್ರು, ಒಂದು ದಿನ ಬರ್ಬೇಕಂತೆ" ಅಂದ್ಯಲ್ಲಾ... ನನ್ಗೆ ತುಂಬಾ ಖುಷಿ ಆಯ್ತು. ನಿನ್ನ ಜೊತೆ ದಿನಾ ನನ್ನ ವೋಡಾಫೋನ್ ನಿಂದ ಕರೆ ಮಾಡಿ ಮಾಡೀ ಯಾವ ತಿಂಗಳೂ ಬಾರದಷ್ಟು ದೊಡ್ಡ ಮೊತ್ತದ ಬಿಲ್ ಬಂದಿತ್ತು. ಅದನ್ನ ಕಷ್ಟ ಆದ್ರೂ ಇಷ್ಟ ಪಟ್ಕೊಂಡು ಎತ್ತಿ ಹಿಡಿದೆ ;) ಆವತ್ತೇ ನನ್ನ ನೆಟ್ವರ್ಕನ್ನ ಬದಲಾಯಿಸ್ಬೇಕು ಅಂತ ನಾವಿಬ್ಬರೂ ಪ್ರಯತ್ನ ಪಟ್ವಿ ಅಲ್ವ... ಅಂತೂ ಇಂತೂ ಐಡಿಯ ನೆಟ್ವರ್ಕನ್ನ ಸೇರಿಕೊಳ್ಳೋದು ಅಂತ ತೀರ್ಮಾನಿಸಿದ್ವಿ. ನಾನೇನೋ ಇಲ್ಲಿ ಒಂದು ಸಿಮ್ ತೊಗೊಂಡು ಅದನ್ನ Active ಮಾಡ್ಕೊಂಡ್ಬಿಟ್ಟೆ. ಆದ್ರೆ ನೀನು ಸಿಮ್ ತೊಗೊಂಡ್ರೂ ಅದು Active ಮಾತ್ರ ಆಗ್ಲಿಲ್ಲ ನೋಡು. ಕೊನೇಗೂ ನಾನೇ ನನ್ನ ಹೆಸರಲ್ಲೇ ಮತ್ತೊಂದು ಸಿಮ್ ತೊಗೊಂಡು ಅದನ್ನ Active ಮಾಡಿಸ್ದೆ.....

ಮಾಡಿಸ್ಬಿಟ್ರೆ ಸಾಕಾ ??? ಅದನ್ನ ನಿನ್ಗೆ ತಲುಪಿಸೋದು ಹೇಗೆ ? ಆ ಸಿಮ್ಮಿಗೆ ಬೇರೇ ಫೋನ್ ಕೂಡಾ ಬೇಕಲ್ವಾ ??

ಅದಿಕ್ಕೇ ಅಂತಾನೇ ನೋಕಿಯ ೫೧೩೦ ಹೊಸಾ ಫೋನ್ ತಂದಿದ್ದಾಯ್ತು. ನಾನು ನಿನ್ನ ಸಿಮ್ Active ಆಗಿದ್ರೂ ಆಗಿಲ್ಲ ಅಂದೆ. ಯಾಕೆ ಹೇಳು... ಅದು ನಿನ್ನ ಕೈ ಸೇರಿದ ಮೇಲೆ ಅದು Active ಆಗಿದೆ ಅಂತ ಗೊತ್ತಾದಾಗ ನಿನ್ನ ಮೊಗದಲ್ಲಿ ಮೂಡುವ ಸಂತಸ ನೋಡ್ಬೇಕು ಅನ್ಸಿತ್ತು. ಅದಿಕ್ಕೆ :)

ಅದೆರಡನ್ನೂ ನಾನೇ ತಂದು ನಿನ್ಗೆ ಕೊಡ್ಬೇಕು ಅಂತ ನಿರ್ಧರಿಸಿದಮೇಲೆ ನಿನ್ನ ಮನೆಗೆ ಗುರುವಾರ ಬರುವುದಾಗಿ ತಿಳಿಸಿದೆ. ಅವತ್ತೋ ಜೋರು ಮಳೆ, ವಿಪರೀತ ಗಾಳಿ. ಆದರೂ ಅದನ್ನ ಲೆಕ್ಕಕ್ಕೆ ಇಡದೇ ನನ್ನ ಕುದುರೆಯನ್ನೇರಿ ಬಂದಿದ್ದೆ :) ನೀನು ಕೆಂಪು ಮತ್ತೆ ಬಿಳಿಯ ಬಣ್ಣದ ಚೂಡೀದಾರಿನಲ್ಲಿ ಅದೇ ಸರಳತೆಯಿಂದ ಸುಂದರವಾಗಿ ಕಾಣ್ತಾ ಇದ್ದೆ. ಬಂದ ತಕ್ಷಣಾ ಒಂದು ತಟ್ಟೆಯಲ್ಲಿ ಶ್ಯಾವಿಗೆ ಉಪ್ಪಿಟ್ಟನ್ನ ನಿನ್ನ ಕೈಯಾರೆ ತಂದು ಕೊಟ್ಟಿದ್ದೆ.

ಅಬ್ಬಾ!!! ಅದೂ ತಟ್ಟೆ ಭರ್ತಿ !!! ಅದಾದ ನಂತರ ಬಿಸಿ ಬಿಸಿ ಹಾರ್ಲಿಕ್ಸ್. ಒಂದು ಕ್ಷಣ ನಾನು ಇದನ್ನ ಯಾವಾಗಪ್ಪಾ ಮುಗಿಸೋದು ಅನ್ನಿಸ್ಬಿಟ್ಟಿತ್ತು. ಹಾಗೋ ಹೀಗೋ ತಿಂದು ಮುಗಿಸಿದ್ದೆ. ಆಮೇಲಷ್ಟೆ ನಮಗೆ ಮಾತನಾಡಲು ಅವಕಾಶ ಸಿಕ್ಕಿದ್ದು. ಮಹಡಿಯ ಮೇಲಿನ ರೂಮಿನಲ್ಲಿ ನಿನ್ನ ತಮ್ಮ, ತಂಗಿಯರ ಪರಿಚಯವಾದಮೇಲೆ ನಾವಿಬ್ಬರೂ ಒಂದು ರೂಮಿನಲ್ಲಿ ಹರಟೆ ಹೊಡೆಯಲು ಬಂದಿದ್ದೆವು. ಅಲ್ಲೂ ಅದೇ ನಾಚಿಕೆ, ಅದೇ ತುಂಟಾಟ, ಅದೇ ನಾಚಿ ರಂಗೇರಿದ ಕೆನ್ನೆ, ಅದೇ ನಗು :) ನಮ್ಮ ಮಾತಿನ ಮಧ್ಯೆ ಸಮಯ ಜಾರಿದ್ದು ಪರಿವೆಗೇ ಬಾರದೇ ಹೋಯಿತು. ಅದರ ಮಧ್ಯೆ ನಿನ್ನ ಬಾಲ್ಯದ ಫೋಟೋ ಗಳನ್ನ ನೋಡ್ತಾ, ನಿನ್ನೊಡನೆ ಹರಟೆ ಹೊಡೆಯುತ್ತಾ ಕಳೆದ ಸಮಯ ಮನಸ್ಸಿನ ಎರಕಕ್ಕೆ ಹೊಯ್ದ ಅಚ್ಚಳಿಯದೇ ಉಳಿದಿದೆ.

ನಿನ್ನೊಂದಿಗೆ ಹಂಚಿಕೊಂಡ ನನ್ನವೇ ಆದ ಕನಸುಗಳಿಗೆ ನಿನ್ನ ಸಹಕಾರ ಇದ್ದೇ ಇರುತ್ತದೆ ಎಂಬ ಅಚಲ ನಂಬಿಕೆ ನನ್ನದು. ನಾನವನ್ನು ಯಾರೊಡನೆಯೂ ಹಂಚಿಕೊಂಡಿಲ್ಲ. ನಿನ್ನೊಂದಿಗೆ ಪ್ರತೀ ದಿನವೂ ಮಾತನಾಡುವಾಗ ನನ್ನದೇ ಆದ ಲೋಕವನ್ನ ಕೊಂಚ ಕೊಂಚವಾಗೇ ತೆರೆದಿಡುತ್ತಿದ್ದೇನೆ. ಆ ಲೋಕಕ್ಕೆ ಬೇರಾರಿಗೂ ಪ್ರವೇಶವಿಲ್ಲ... ಅದು ಕೇವಲ ನನ್ನ ಮತ್ತು ನಿನ್ನ ಪ್ರಪಂಚ :) ನಾನು ನಿನ್ನೊಡನೆ ಅದೆಲ್ಲವನ್ನೂ ಹಂಚಿಕೊಂಡಾಗಲೆಲ್ಲಾ ನಿನ್ನಿಂದ ಸಿಕ್ಕುವ ಪ್ರತಿ ಸ್ಪಂದನದಿಂದ ನನ್ನಲ್ಲಿ ಒಂದು ರೀತಿಯ ಆತ್ಮವಿಶ್ವಾಸ ಹೆಚ್ಚುತ್ತದೆ.

ಇಷ್ಟೆಲ್ಲಾ ಆದದ್ದು ಬರೀ ಒಂದೂವರೆ ತಿಂಗಳಿನಲ್ಲ? ನನ್ನ ಕೈ ನಾನೇ ಚಿವುಟುತ್ತಿದ್ದೇನೆ, ನಾನು ಕನಸು ಕಾಣುತ್ತಿಲ್ಲ ತಾನೇ ?? ಬಹುಶಃ ನಿನ್ನನ್ನು ಮತ್ತೊಮ್ಮೆ ಕಂಡ ಮೇಲೆಯೇ ಈ ಭಾವದಲೆಗೆ ತೃಪ್ತಿಯೇನೋ.. ಆ ದಿನಕ್ಕೆ ಎದುರು ನೋಡುತ್ತಿದ್ದೇನೆ.. ಅದು ಇನ್ನೇನು ಹತ್ತಿರದಲ್ಲೇ ಇದೆ :)

ನೋಡು, ನಿನ್ನ ಯೋಚನೆ ಮನದಲ್ಲಿ ಮೂಡುತ್ತಿದ್ದಂತೇ ಮೊಬೈಲಿನಲ್ಲಿ ನಿನ್ನದೇ ಆ ನಗುಮೊಗ ಮೂಡುತ್ತಿದೆ, ನಿನ್ನದೇ ಸಂದೇಶ... ಇದನ್ನೆಲ್ಲಾ ನಾನು ನಿನಗೆ ಮೊಬೈಲಿನಲ್ಲಿ ಹೇಳಿದರೆ ಮಧುರವಾಗಿತ್ತಾ ??? ಗೊತ್ತಿಲ್ಲ... ಒಮ್ಮೆ ಅಕಸ್ಮಾತ್ ನೀನೇನಾದರೂ "ಅಯ್ಯೋ ಕೊರೀಬೇಡ್ರೀ" ಅಂದ್ರೆ ??? ನಿನಗೆ ತೊಂದರೆ ಕೊಡಲು ನನ್ನ ಮನಸ್ಸು ಒಪ್ಪುವುದಿಲ್ಲ ನನ್ನ ಹುಡುಗೀ :) ಇದನ್ನ ಮುಂದಿನ ಭಾನುವಾರ.. ನಿನ್ನ ಕೈಯಲ್ಲೇ ಕೊಡುತ್ತೇನೆ.. ಅದೇನಾದರೂ ಹೇಳಬೇಕೆಂದಿದ್ದರೆ ಅಲ್ಲೇ ಹೇಳಿಬಿಡು... ನಿನ್ನ ಪಡೆದ ಧನ್ಯತೆಯಲ್ಲಿ ನನ್ನ ಈ ಕೊರೆತವನ್ನ ಸಧ್ಯಕ್ಕೆ ನಿಲ್ಲಿಸುತ್ತೇನೆ :)

ಖಾಲಿ ನೆಲದಲ್ಲಿ ರಂಗು ರಂಗಿನ ರಂಗೋಲಿ

ಮನ ಮಂದಿರದಿ ಉಲ್ಲಾಸದ ಜೋಕಾಲಿ

ಮನದಂಗಳದಿ ಚಿತ್ತಾರ ಮೂಡುತಿದೆ

ಆ ನಿನ್ನ ಹೆಜ್ಜೆ ಗುರುತುಗಳು ಕಾಣತೊಡಗಿವೆ


ಇಂತಿ ನಿನ್ನ,
ಪ್ರಶಾಂತ ಜಿ ಉರಾಳ

Thursday, February 3, 2011

ನೆನಪು

ಇವತ್ತು ಅವಳನ್ನ ಆನ್-ಲೈನ್ ನೋಡಿದೆ. ಮತ್ತೆ ನೆನಪುಗಳಿಗೆ ಜೀವ ಬಂದಂತೆ ಆಯಿತು. ನಮ್ಮ ಆಕಸ್ಮಿಕ ಭೇಟಿ, ಮಾಡುತ್ತಿದ್ದ ಆ ಎಸ್ ಟಿ ಡಿ ಕಾಲ್ ಗಳು, ಚಾಟಿಂಗ್, ಪರಸ್ಪರ ಶುಭಾಷಯ ವಿನಿಮಯ ಎಲ್ಲವೂ ನಾಮುಂದು ತಾಮುಂದು ಅಂತ ನೆನಪಿನ ಪರದೆಯಮೇಲೆ ಸರಿದು ಹೋದವು.

ಒಳ್ಳೆಯ ಸ್ನೇಹಿತರಾಗಿರೋಣ ಅಂದವಳು ಇವತ್ತು ನನ್ನ ಮಾತನಾಡಿಸ್ತಾ ಇಲ್ಲ. ಕಾರಣ ??? ನನಗೆ ತಿಳಿದಿಲ್ಲ ಅಥವಾ ತಿಳಿದೂ ಸುಮ್ಮನಿದ್ದೇನೆ. ನಾಲ್ಕುತಿಂಗಳ ಕೆಳಗೆ ನಾವು ಮಾತನಾಡಿದ್ದೇ ಕಡೆ. ಮತ್ತೊಮ್ಮೆ ಆಕೆಯ ದನಿ ಕೇಳಿಲ್ಲ, ಆಕೆಯ ಮೆಸ್ಸೇಜ್ ಓದಿಲ್ಲ. ಹಿಂದಿನದೆಲ್ಲಾ ಒಂದು ಮಧುರ ಸಿಹಿ ಸ್ವಪ್ನದಂತ ಭಾಸವಾಗುತ್ತಿದೆ. ಜೀವನ ನಿಲ್ಲದ ಪಯಣ, ನಿರಂತರ. ಹಿಂದಿನ ದಿನಗಳಿಗೆ ಹೋಗುವ ಟೈಮ್ ಮಷೀನ್ ನನ್ನ ಬಳಿ ಇದ್ದಿದ್ದರೆ ಎಷ್ಟು ಚೆಂದ ಅಂತ ಅನ್ನಿಸ್ತು.

Thursday, January 6, 2011

ಅಮೇದಿಕೇಲ್ ಚಾರಣ

ಕಳೆದ ಮೂರು ವರ್ಷ ಅನಿವಾರ್ಯ ಕಾರಣಗಳಿಂದ ನಾನು ಚಾರಣಕ್ಕೆ ಹೋಗಲಾಗಿರಲಿಲ್ಲ. ಈ ಬಾರಿ ಖಂಡಿತವಾಗಿ ಹೋಗಲೇಬೇಕೆಂದು ಮೊದಲೇ ನಿರ್ಧರಿಸಿದ್ದೆ. ಈ ಬಾರಿ ನಮ್ಮ ಚಾರಣ ಧರ್ಮಸ್ಥಳದ ಕೊಕ್ಕಡದ ಬಳಿಯ ಒಂದು ಪರ್ವತ "ಅಮೇದಿಕೇಲ್" ಅನ್ನುವ ಬೆಟ್ಟಕ್ಕೆ ಎಂದು ನಮ್ಮ ತಂಡದ ನಾಯಕ ಸೀತಾರಾಮು ಹೇಳಿದ್ದರು.

ನಮ್ಮತಂಡದಲ್ಲಿ ಒಟ್ಟು ೧೫ ಮಂದಿ ಇದ್ದೆವು. ೧೬ನೇಯವನಾಗಬೇಕಿದ್ದ ಬಾಲಾಜಿ ಕಡೇ ಕ್ಷಣದವರೆಗೂ suspense Maintain ಮಾಡಿ ಕೈ ಕೊಟ್ಟರು. ನಮ್ಮ ತಂಡದ ಸದಸ್ಯರು (ನನ್ನನ್ನೂ ಒಳಗೊಂಡಂತೆ):
ಸೀತಾರಾಮು, ಅಲಮೇಲು (ಅಮ್ಮಿ), ಸೌಮ್ಯ, ಸೌರಭ್, ಕೃಷ್ಣ, ಪ್ರಶಾಂತ, ಪ್ರೀತಮ್, ಯಜ್ಞನಾರಾಯಣ ಶರ್ಮ (ಅಣ್ಣಯ್ಯ), ಶ್ರೀನಿಧಿ, ಭರತ್, ರಾಜೇಶ, ಮೋಹನ, ಜ್ಯೋತಿ, ಪ್ರವೀಣ್ ಮತ್ತು ವಿನಯ್.

ರಾತ್ರಿ ೧೧ಕ್ಕೆ ಧರ್ಮಸ್ಥಳಕ್ಕೆ ಹೋಗುವ ಬಸ್ಸಿಗಾಗಿ ರಾಜೇಶ್ ಟಿಕೇಟ್ ಕಾದಿರಿಸಿದ್ದರು. ನಾನು ೨೨-೧೨-೨೦೧೦ರ ರಾತ್ರಿ ಬೆಂಗಳೂರಿನ ಟ್ರಾಫಿಕ್ ಅನ್ನು ಗಮನದಲ್ಲಿಟ್ಟುಕೊಂಡೇ ೮.೩೦ಕ್ಕೇ ಬೆಂಗಳೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಹೊರಟೆ. ನನ್ನ ಊಹೆಗೆ ತಕ್ಕಂತೆ ನಿಲ್ದಾಣ ತಲುಪುವಾಗ ಸಮಯ ಸುಮಾರು ೧೦.೧೫ ಆಗಿತ್ತು. ಧರ್ಮಸ್ಥಳಕ್ಕೆ ಹೊರಡುವ ವೋಲ್ವೋಬಸ್ ರೆಡಿಯಾಗೇ ನಿಂತಿತ್ತು ಆದರೆ ಟಿಕೆಟ್ ಮೋಹನರ ಬಳಿ ಇದ್ದದ್ದರಿಂದ ಮುಂಗೋಪಿ ಕಂಡಕ್ಟರ್ ನನ್ನನ್ನು ಬಸ್ ಹತ್ತಲು ಬಿಡಲಿಲ್ಲ. ಸ್ವಲ್ಪಹೊತ್ತು ಕಳೆದ ನಂತರ ಮೋಹನ ಮತ್ತಿತರರು ಬಂದಮೇಲೆ ಐರಾವತ ರಾತ್ರಿ ೧೦.೫೫ಕ್ಕೆ ನಿಲ್ದಾಣ ಬಿಟ್ಟು ಹೊರಟಿತು.

ದಾರಿಯಲ್ಲಿ ನಾನು ರಾಜೇಶ ಹರಟೆ ಹೊಡೆಯುತ್ತಾ ಹಾಗೇ ನಿದ್ದೆಗೆ ಜಾರಿದೆವು. ಶಿರಾಡಿ ಘಾಟಿಯ ಅಂಕು ಡೊಂಕಾದ ಏರಿಳಿತಗಳಿಂದ ಕೂಡಿದ ರಸ್ತೆಯ ಮೇಲೆ ಐರಾವತ ಸರಾಗವಾಗಿ ಸಾಗುತ್ತಿತ್ತು. ಮುಂಜಾವು ಸುಮಾರು ೫.೩೫ಕ್ಕೆ ಮೋಹನ ನಮ್ಮನ್ನೆಲ್ಲಾ ಎಬ್ಬಿಸಿದಾಗ ನಾವು ಕೊಕ್ಕಡದ ಸಮೀಪವಿರುವುದು ತಿಳಿಯಿತು. ನಾವೆಲ್ಲಾ ನಮ್ಮ ನಮ್ಮ Trekking Bag ಗಳನ್ನ ಇಳಿಸಿಕೊಂಡಮೇಲೆ ಐರಾವತ ಧರ್ಮಸ್ಥಳದಕಡೆಗೆ ಹೊರಟಿತು. ಅಲ್ಲಿ ನಮಗಾಗಿ ಗೋಪು ಗೋಖಲೆಯವರು ಕಳಿಸಿಕೊಟ್ಟಿದ್ದ ಎರೆಡು ಮಹಿಂದ್ರ ಜೀಪುಗಳು ಕಾಯುತ್ತಾ ಇದ್ದವು. ಗೋಪು ಗೋಖಲೆಯವರು ನಮ್ಮಂತೆ ಚಾರಣಕ್ಕೆ ಬರುವ ಚಾರಣಿಗರಿಗೆ ಅಲ್ಪಾವಧಿಯ ವಸತಿಯನ್ನು ನಿರ್ಧಾರಿತ ಮೊತ್ತಕ್ಕೆ ಹೊಂದಿಸಿಕೊಡುವವರು. ಆಗಲೇ ಜ್ಯೋತಿಗೆ ತಮ್ಮ Trekking Shoes ಧರ್ಮಸ್ಥಳದ ಕಡೆಗೆ ಹೊರಟಿರುವ ಅರಿವಾದದ್ದು. ತಕ್ಷಣ ಮೋಹನ ಮತ್ತು ಜ್ಯೋತಿ ಜೀಪು ಹತ್ತಿ ಐರಾವತವನ್ನು ಬೆನ್ನಟ್ಟಿ ಹೋದರು. ಕಡೆಗೆ ಅದನ್ನು ಮರಳಿ ತರುವಲ್ಲಿ ಯಶಸ್ವಿಯೂ ಆದರು.

ಕೊಕ್ಕಡಕ್ಕೆ ಅಣ್ಣಯ್ಯ ಮೊದಲೇ ಮೈಸೂರಿನಿಂದ ಬಂದಿಳಿದಿದ್ದರು. ನಾನು, ಅಣ್ಣಯ್ಯ, ಪ್ರೀತಮ್, ರಾಜೇಶ, ನಿಧಿ, ಭರತ್, ಪ್ರವೀಣ್ ಮತ್ತು ವಿನಯ್ ಕೊಕ್ಕಡದ ಬಸ್ ನಿಲ್ದಾಣದ ಬಳಿಯ ಹೋಟೇಲೊಂದರಲ್ಲಿ ಟೀ ಕುಡಿದು ಮೊದಲೇ ತಯಾರಿದ್ದ ಜೀಪಿನಲ್ಲಿ ಶಿಶಿಲದಲ್ಲಿರುವ ಗೋಪು ಗೋಖಲೆ ಅನ್ನುವವರ ಮನೆಯಕಡೆಗೆ ಹೊರಟೆವು. ಮತ್ತೊಂದು ಜೀಪಿನಲ್ಲಿ ಹಾಸನದಿಂದ ಹೊರಟಿದ್ದ ಸೀತಾರಾಮ್, ಅಮ್ಮಿ, ಸೌಮ್ಯ, ಸೌರಭ, ಕೃಷ್ಣ ಮತ್ತು ತಂಡ ಅವರೂ ಗೋಖಲೆಯವರ ಮನೆಗೆ ಬಂದಿಳಿದರು.
ನಮ್ಮಂತೆ ಈ ಮೊದಲೇ ಹಲವಾರು ಚಾರಣಿಗರು ಗೋಖಲೆಯವರ ಮನೆಗೆ ಬಂದು ಹೋದದ್ದುಂಟು. ಆ ರೀತಿ ಬರುವವರಿಗಾಗೇ ಗೋಖಲೆಯವರು ಒಂದು ವಿಶ್ರಾಂತಿ ಕೊಠಡಿಯನ್ನು ಕಟ್ಟಿಸಿಟ್ಟಿದ್ದಾರೆ. ಅಲ್ಲಿ ಬಿಸಿನೀರಿನ ವ್ಯವಸ್ಥೆ ಕೂಡಾ ಇತ್ತು. ನಾವೆಲ್ಲಾ ನಮ್ಮ ಬೆಳಗಿನ ಕೆಲಸಗಳನ್ನು ಮುಗಿಸಿ ಅವರ ಮನೆಯಲ್ಲೇ ತಿಂಡಿ ತಿಂದು ಅವರು ಮಾಡಿಕೊಟ್ಟ ಚಪಾತಿಯನ್ನು ನಮ್ಮ ಜೊತೆಗೆ ಕೊಂಡು ಶಿಶಿಲದಿಂದ ಕೆಂಬಾರದ ಕಡೆಗೆ ಸುಮಾರು ೯.೩೦ಕ್ಕೆ ಸಣ್ಣಪ್ಪ ಅನ್ನುವ ಒಬ್ಬ Guideಅನ್ನು ಕರೆದುಕೊಂಡು ಜೀಪಿನಲ್ಲಿ ಹೊರಟೆವು.

ನಮ್ಮ ಚಾರಣ ಸುಮಾರು ೧೦.೦೦ಘಂಟೆಗೆ ಕೆಂಬಾರದಿಂದ ಪ್ರಾರಂಭವಾಯಿತು. ಕೆಂಬಾರ ಸಮುದ್ರಮಟ್ಟದಿಂದ ಸುಮಾರು ೧೧೬ ಮೀಟರ್ ಎತ್ತರದಲ್ಲಿದೆ. ಇಲ್ಲಿಂದ ಎತ್ತಿನ ಭುಜವೂ ಸ್ಪಷ್ಟವಾಗಿ ಕಾಣುತ್ತದೆ. ಚಾರಣದ ಮೊದಲ ಹಂತದಲ್ಲಿ ನಾವೆಲ್ಲಾ ಉತ್ಸಾಹಿಗಳಾಗಿ ಹೆಜ್ಜೆ ಹಾಕುತ್ತಲಿದ್ದೆವು. ಅಲ್ಲಿಂದ ಸುಮಾರು ೬೦ ಮೀಟರ್ ಎತ್ತರ ಏರಿದಮೇಲೆ ಹತ್ತಿರದಲ್ಲಿ ಹರಿಯುತ್ತಿದ್ದ ಒಂದು ಝರಿಯಿಂದ ನಮ್ಮೆಲ್ಲರ ಜೊತೆಯಿದ್ದ ಖಾಲಿ ಬಾಟಲಿಗಳಿಗೆ "Original" ಮಿನರಲ್ ವಾಟರ್ ತುಂಬಿಸಿಕೊಂಡೆವು.

ಈ ಬಾರಿ ನೀರಿನ ಭಾರ ಪ್ರತಿಯೊಬ್ಬರಿಗೂ ಸಮನಾಗಿ ಹಂಚಿಕೆಯಾಗುವಂತೆ ಸೀತಾರಾಂ ಪ್ರತಿಯೊಬ್ಬರಿಗೂ 200mlಮತ್ತು 500ml ನ ಬಾಟಲ್ಗಳಿಗೆ ಒಂದು Clip ಹಾಕಿ ಕೊಟ್ಟಿದ್ದರು. ಹಾಗಾಗಿ ಪ್ರತಿಯೊಬ್ಬರಿಗೂ ಅನುಕೂಲವಾಯಿತು. ತಕ್ಷಣ ನೀರಡಿಕೆಯಾದಾಗ ಭಾರದ ಚೀಲವನ್ನು ಕೆಳಗಿಳಿಸಿ ಅದರಲ್ಲಿ ಹುದುಗಿರುವ ಬಾಟಲಿಯನ್ನು ತೆಗೆದು ನೀರುಕುಡಿಯುವ ತೊಂದರೆ ಒಂದು ಕಡೆ ತಪ್ಪಿದರೆ, ಒಬ್ಬರ ಎಂಜಲು ಮತ್ತೊಬ್ಬರು ಕುಡಿಯುವುದೂ ತಪ್ಪಿತು.



ಇದುವರೆವಿಗೂ ಚಳಿಯಿಂದ ಕಾಪಾಡಿಕೊಳ್ಳಲು ನಾವು ಹಾಕಿಕೊಂಡಿದ್ದ ಸ್ವೆಟರ್ಗಳು ನಮ್ಮ ಟ್ರಕ್ಕಿಂಗ್ ಬ್ಯಾಗ್ ಸೇರಿಕೊಂಡವು. ಚಾರಣದ ಪ್ರಾರಂಭದಲ್ಲೇ ನನಗೆ ಜಿಗಣೆಯಿಂದ ಸ್ವಾಗತ ಸಿಕ್ಕಿತು.

ಸುಮಾರು ೧.೦೦ ಘಂಟೆಗೆ ನಾವೆಲ್ಲಾ ಸಮುದ್ರ ಮಟ್ಟದಿಂದ ೫೨೧ ಮೀಟರ್ ಎತ್ತರದಲ್ಲಿ ಸಿಕ್ಕ ಒಂದು ಝರಿಯಬಳಿಯಲ್ಲಿ ಚಪಾತಿ ಮತ್ತು ಸಿಹಿ ಕುಂಬಳಕಾಯಿಯ ಪಲ್ಯವನ್ನು ತಿಂದು ಝರಿಯ ನೀರು ಕುಡಿದು ಸ್ವಲ್ಪಮಟ್ಟಿಗೆ ನಮ್ಮ Energy level ಹೆಚ್ಚಿಸಿಕೊಂಡೆವು. ಚಪಾತಿ ತಿನ್ನುವಾಗ ಪ್ರವೀಣ್ ಅವರ ಸುಶ್ರಾವ್ಯ ಕಂಠಸಿರಿಯಿಂದ "ಪ್ರಿಯತಮೇ.... " ಹಾಡು ಕೇಳಿ ಬರುತ್ತಿತ್ತು. ಅಲ್ಲಿ ಸ್ವಲ್ಪ ವಿರಾಮದ ನಂತರ ಸುಮಾರು ೧.೩೦ಕ್ಕೆ ನಮ್ಮ ಪಯಣ ಅಮೇದಿಕಲ್ ಶೃಂಗದೆಡೆಗೆ ಹೊರಟಿತು.
ದಾರಿಯಲ್ಲಿ ಸುಡುಬಿಸಿಲು ನಮ್ಮ ಬೆಂಬಿಡದೇ ಜೊತೆಯಲ್ಲೇ ಬರುತ್ತಿತ್ತು. ದಾರಿಯಲ್ಲಿ ನಾವೆಲ್ಲಾ ನೆರಳಿಗಾಗಿ ಹುಡುಕುತ್ತಾ ಕಡಿದಾದ ಹಾದಿಯನ್ನು ಸವೆಸುತ್ತಿದ್ದೆವು. ಸುಮಾರು ೩.೧೫ರ ಸಮಯಕ್ಕೆ ಒಂದು ತಂಪಾದ ಸ್ಥಳದಲ್ಲಿ ನಮ್ಮ ಲಗೇಜುಗಳನ್ನು ಹೊತ್ತಿದ್ದ ದೇಹವನ್ನು ಚೆಲ್ಲಿ ಆ ನೆರಳಿನಲ್ಲಿ ಕುಳಿತೆವು. ಅಲ್ಲಿ ನಮ್ಮನ್ನು ಆದರದಿಂದ ಬರಮಾಡಿಕೊಂಡ ಸೊಳ್ಳೆಗಳು ಎಲ್ಲರಿಂದಲೂ ರಕ್ತ ಹೀರತೊಡಗಿದವು. ಈ ಬಾರಿ ಹೊಸದಾಗಿ ರಾಜೇಶನಿಂದ ಪರಿಚಯಿಸಲ್ಪಟ್ಟ ಮೊಳಕೆ ಬರಿಸಿದ ಹೆಸರಿನ ಕಾಳು ಮತ್ತು ದಾಳಿಂಬೆ ಕಾಳುಗಳು ಚೆನ್ನಾಗಿದ್ದವು.

ಅಲ್ಲಿಂದ ಸುಮಾರು ೪.೦೦ರ ಹೊತ್ತಿಗೆ ನಮ್ಮ ಪಯಣ ಮುಂದುವರಿಯಿತು. ಮೊದಲೇ ಇದ್ದ ಕಾಲುದಾರಿ ತಪ್ಪಿದ್ದರಿಂದ ನಾವೆಲ್ಲಾ ನಮ್ಮದೇ ದಾರಿಯನ್ನು ಮಾಡಿಕೊಂಡು ಒಂದು ಘಂಟೆಯನಂತರ ಒಂದು ಸಮತಟ್ಟಾದ ಸ್ಥಳಕ್ಕೆ ಬಂದು ತಲುಪಿದೆವು. ಮೇಲೆ ಒಂದು ಹೆಬ್ಬಂಡೆ ಚಾಚಿಕೊಂಡು ಬಿಸಿಲಿನಿಂದ ನಮಗೆಲ್ಲಾ ತಂಪನ್ನೀಯುತ್ತಿತ್ತು. ಅಲ್ಲಿ ಈ ಮೊದಲೇ ಬಂದಿದ್ದ ತಂಡ ತಂಗಿದ್ದ ಕುರುಹಾಗಿ ಎರಡು ಬೂದಿಗುಡ್ಡೆಗಳಿಂದ ಕೂಡಿದ ಒಲೆಗಳಿದ್ದವು. ಆ ಪ್ರದೇಶ ಸಮುದ್ರಮಟ್ಟದಿಂದ ಸುಮಾರು ೮೫೫ ಅಡಿ ಎತ್ತರದಲ್ಲಿತ್ತು.
ಅಲ್ಲಿಂದ ಮುಂದೆ ದಟ್ಟವಾದ ಹುಲ್ಲು ಬೆಳೆದಿದ್ದರಿಂದ ದಾರಿಗಾಗಿ ಸ್ವಲ್ಪ ಹುಡುಕಾಡಬೇಕಾಯಿತು. ಅಷ್ಟರಲ್ಲಾಗಲೇ ಕತ್ತಲಾವರಿಸತೊಡಗಿತ್ತು. ನಮ್ಮೆಲ್ಲರ ಬ್ಯಾಗಿನಲ್ಲಿ ಇಷ್ಟುಹೊತ್ತು ಬೆಚ್ಚಗೆ ಕುಳಿತಿದ್ದ ಬ್ಯಾಟರಿಗಳು ಈಗ ಹೊರಬಂದಿದ್ದವು. ಕತ್ತಲಾದಮೇಲೆ ಬ್ಯಾಟರಿಯ ಸಹಾಯದಿಂದ ಬೆಟ್ಟಹತ್ತಿದ ನನ್ನ ಮೊಟ್ಟ ಮೊದಲ ಅನುಭವ ಇದು, ಬಹಳ ರೋಚಕವೆನಿಸಿತು. ಚಪಾತಿ ಮತ್ತು ನೆನಸಿದ ಹೆಸರುಕಾಳನ್ನು ಬಿಟ್ಟರೆ ಮತ್ತೇನು ತಿನ್ನದ ಕಾರಣ ನಮಗೆಲ್ಲಾ ಬಹಳವಾಗಿಯೇ ದಣಿವಾಗಿತ್ತು. ನಮ್ಮಲ್ಲಿ ನಿಧಿ, ಅಣ್ಣಯ್ಯ, ಪ್ರವೀಣ ಮತ್ತು ಸೌರಭ ಮುಂದಾಳತ್ವ ವಹಿಸಿ ಸಮತಟ್ಟಾದ ಪ್ರದೇಶದ ಶೋಧ ಮಾಡಿ ಅದರಲ್ಲಿ ಯಶಸ್ಸು ಕಂಡರು. ನಾವೆಲ್ಲಾ ಕತ್ತಲಲ್ಲಿ ಎಡವುತ್ತಾ ತೆವಳುತ್ತಾ ಅಂತೂ ಇಂತೂ ಆ ಸಮತಟ್ಟಾದ ಪ್ರದೇಶಕ್ಕೆ ಸುಮಾರು ೭.೩೦ಕ್ಕೆ ಬಂದೆವು. ಸಮುದ್ರಮಟ್ಟದಿಂದ ೧೨೦೦ ಮೀಟರ್ ಎತ್ತರದ ಆ ಪ್ರದೇಶದಲ್ಲಿ ನಾವೆಲ್ಲಾ ಉಸ್ಸಪ್ಪಾ ಅಂತ ಕುಳಿತು ಸ್ವಲ್ಪ ಸುಧಾರಿಸಿಕೊಂಡು ನಂತರ ಟೆಂಟ್ ಹಾಕುವ ಕೆಲಸದಲ್ಲಿ ತೊಡಗಿದೆವು. ಈ ಬಾರಿ ಒಟ್ಟು ೪ ಟೆಂಟ್ಗಳು ಮತ್ತು ಒಂದು Open Tent ಹಾಕಿದ್ದೆವು.
ಸಾಮಾನ್ಯವಾಗಿ ಟೆಂಟ್ ಹಾಕಿದಮೇಲೆ ನಮ್ಮ ಅಡುಗೆ ಕಾರ್ಯಕ್ರಮ ಇರುತಿತ್ತು. ಆದರೆ ಈ ಬಾರಿ ನಮ್ಮಲ್ಲಿ ನೀರಿನ ಕೊರತೆ ಇದ್ದದ್ದರಿಂದ ನಾವೆಲ್ಲಾ ತಲಾ ಅರ್ಧ ಸೌತೇಕಾಯಿ, ಬಿಸ್ಕತ್ತು ಮತ್ತು ಕಿತ್ತಲೆ ಹಣ್ಣನ್ನು ತಿಂದು ಸುಮಾರು ೯.೦೦ ಘಂಟೆಗೆ ಮಲಗಿದೆವು. ಟೆಂಟ್ ಹಾಕಿದ ಸ್ಥಳ ಸಮತಟ್ಟಾಗಿರದೇ ಕೆಳಗಿನ ಕಲ್ಲು ಒಂದುರೀತಿ ಕಾಡುತ್ತಿದ್ದರೆ ಪಕ್ಕದ ಟೆಂಟ್ಗಳಿಂದ ಬರುತ್ತಿದ್ದ ವಿಧವಿಧವಾದ ಗೊರಕೆಗಳಸದ್ದು ಮತ್ತೊಂದುಕಡೆ. ಆದರೆ ದೇಹ ದಣಿದಿದ್ದ ಕಾರಣ ನಿದ್ದೆ ಚೆನ್ನಾಗಿಯೇ ಬಂದಿತ್ತು.
ಮುಂಜಾವು ಸುಮಾರು ೬.೩೦ಕ್ಕೆ ಎದ್ದ ನಾವುಗಳು ನಮ್ಮೊಂದಿಗೆ ತಂದಿದ್ದ ಕ್ಯಾಮರಗಳನ್ನೂ ಎಬ್ಬಿಸಿ ಸೂರ್ಯೋದಯದ ಅಂದವನ್ನು ಕ್ಯಾಮರಗಳಲ್ಲಿ ಸೆರೆಹಿಡಿಯಲಾರಂಭಿಸಿದೆವು. ನಂತರ ನಮ್ಮ ಬಳಿ ಉಳಿದಿದ್ದ ನೀರನ್ನು ಎಲ್ಲರೂ ಸಮನಾಗಿ ಹಂಚಿಕೊಂಡು, ಬಿಸ್ಕತ್ತು, ಸೌತೇಕಾಯಿ ಮತ್ತು ಕಿತ್ತಲೆಹಣ್ಣುಗಳನ್ನು ತಿಂದು, ಟೆಂಟ್ಗಳನ್ನು ತೆಗೆದುಕೊಂಡು ಸುಮಾರು ೮.೧೫ಕ್ಕೆ ಅಮೇದಿಕಲ್ ಬೆಟ್ಟವನ್ನು ಇಳಿಯಲಾರಂಭಿಸಿದೆವು.



ಹತ್ತುವಾಗಿನ ಶ್ರಮ ಇಳಿಯುವಾಗ ಬೇಕಿಲ್ಲವಾದ್ದರಿಂದ ಎಲ್ಲರೂ ಬೇಗ ಬೇಗ ನಿರಾತಂಕವಾಗಿ ಇಳಿಯಲಾರಂಭಿಸಿದೆವು. ಸುಮಾರು ೨ ಘಂಟೆಗಳನಂತರ ನಾವು ಹಿಂದಿನದಿನ ಕಂಡಿದ್ದ ಹೆಬ್ಬಂಡೆಯ ಬಳಿ ಬಂದು ಸ್ವಲ್ಪ ವಿಶ್ರಮಿಸಿದನಂತರ ಮುಂದೆಸಾಗಿದೆವು. ಸುಮಾರು ೧೧.೦೦ಕ್ಕೆ ನೀರಿನ ಝರಿಯಬಳಿ ಕುಳಿತು Maagi ಮಾಡಲು ತಯಾರಿನಡೆಸಿದೆವು. ಅಮ್ಮಿ, ಜ್ಯೋತಿ ಇಬ್ಬರೂ ಈರುಳ್ಳಿ ಹೆಚ್ಚಿದರೆ ಮಿಕ್ಕವರು ನೀರುಕುಡಿಯುತ್ತಾ ದಣಿವಾರಿಸಿಕೊಳ್ಳುತ್ತಿದ್ದೆವು. ಪ್ರತೀ ಚಾರಣಕ್ಕೂ Match Boxನ್ನು ತಪ್ಪದೇ ತರುತ್ತಿದ್ದ ನಾವು ಈ ಬಾರಿ ಅದನ್ನು ಮರೆತು ಬಂದಿದ್ದೆವು. ಹಾಗಾಗಿ ಮ್ಯಾಗಿ ಮಾಡುವ ಕೆಲಸ ಕೈಬಿಡಬೇಕಾಯಿತು. ಸಧ್ಯಕ್ಕೆ ತಿನ್ನಲು ಚುರುಮುರಿಯನ್ನು ಬಿಟ್ಟು ಬೇರೇನು ಇರಲಿಲ್ಲ.

ನಾವು ಸೂರ್ಯನ ಬಿಸಿಲಿನಿಂದ Lenseನ ಸಹಾಯ ಪಡೆದು ಬೆಂಕಿ ಹೊತ್ತಿಸುವ ಪ್ರಯತ್ನ ಮಾಡಿ ಅದು ಸಮಯಕ್ಕೆ ಸರಿಯಾಗಿ ಉಪಯೋಗವಾಗದ ಕಾರಣ ಆ ಪ್ರಯತ್ನವನ್ನು ಕೈ ಬಿಟ್ಟೆವು. ಚುರುಮುರಿಯನ್ನು ತಿಂದು ನಂತರ ಅಲ್ಲಿಂದ ನಮ್ಮ ಪಯಣ ಮುಂದುವರೆಸಿದ ನಾವು ಸುಮಾರು ೧.೩೦ಕ್ಕೆ ಮತ್ತೊಂದುಕಡೆ ನೆರಳಿನಲ್ಲಿ ಕುಳಿತೆವು. ಈ ವಿರಾಮದಲ್ಲಿ ಕೃಷ್ಣ ಹಣ ಉಳಿತಾಯದ ಬಗ್ಗೆ 50 ದಾರಿ ಗಳನ್ನು ನಮ್ಮೆಲ್ಲರೊಡನೆ ಹಂಚಿಕೊಂಡರು. ಅಲ್ಲಿಂದ ಮತ್ತೆ ಕಾಡಿನಹಾದಿ ದೊರಕಿದ್ದರಿಂದ ಹೆಚ್ಚಿನ ವಿಶ್ರಾಮವಿಲ್ಲದೇ ನಮ್ಮಲ್ಲಿ ಕೆಲವರು ಕೆಂಬಾರಕ್ಕೆ ಸುಮಾರು ೪.೩೦ಕ್ಕೆ ಬಂದು ಹತ್ತಿರದಲ್ಲೇ ಹರಿಯುತ್ತಿದ್ದ ಝರಿಯಲ್ಲಿ ಸ್ನಾನಮಾಡಿದೆವು. ಎರಡನೇ ಗುಂಪು ಬಂದದ್ದು ಸ್ವಲ್ಪ ತಡವಾದ್ದರಿಂದ ಸ್ನಾನ ಮಾಡಲು ಸಮಯವಿರಲಿಲ್ಲ. ಕೆಂಬಾರದಿಂದ ಮತ್ತೆ ೨ ಜೀಪನ್ನು ಗೊತ್ತುಮಾಡಿದೆವು. ಅದರಲ್ಲಿ ಒಂದು ಹಾಸನದ ಕಡೆಗೂ ಹಾಗು ಮತ್ತೊಂದು ಧರ್ಮಸ್ಥಳದ ಕಡೆಗೂ ಹೊರಟವು.


ಇಲ್ಲಿಗೆ ನಮ್ಮ ೨೦೧೦ರ ಅಮೇದಿಕಲ್ ಚಾರಣ ಪುರಾಣ ಸಮಾಪ್ತವಾಯಿತು. :)

Monday, October 25, 2010

ಒಲವಿನ ಆಮಂತ್ರಣ

ಆತ್ಮೀಯ ,


ನನ್ನ ಮದುವೆಯ ಮಂಗಳ ಕಾರ್ಯವು ಬರುವ ನವೆಂಬರ್ ತಿಂಗಳಿನ ೧೧ನೇ ತಾರೀಖು ಬೆಂಗಳೂರಿನ ಬಸವನ ಗುಡಿಯಲ್ಲಿರುವ ಬುಲ್ ಟೆಂಪಲ್ ರಸ್ತೆಯ "ಶ್ರೀ ಗುರುನರಸಿಂಹ ಕಲ್ಯಾಣಮಂದಿರ" ದಲ್ಲಿ ನೆರವೇರಲಿದೆ. ಈ ಮಂಗಳಕಾರ್ಯಕ್ಕೆ ತಾವು ತಮ್ಮ ಕುಟುಂಬ ಹಾಗು ಮಿತ್ರರೊಂದಿಗೆ ಬಂದು ಯಥೋಚಿತ ಸತ್ಕಾರ ಸ್ವೀಕರಿಸಿ ವಧು-ವರರನ್ನು ಹಾರೈಸಬೇಕಾಗಿ ಕೋರಿಕೆ.


ಸಮಯದ ಅಭಾವದಿಂದ ಖುದ್ದಾಗಿ ಆಮಂತ್ರಣ ತಲುಪಿಸಲಾಗಲಿಲ್ಲ. ಕ್ಷಮೆ ಇರಲಿ (:


ಸ್ಥಳ: ಶ್ರೀ ಗುರುನರಸಿಂಹ ಕಲ್ಯಾಣಮಂದಿರ, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣ ಆಶ್ರಮದ ಎದುರು, ಬಸವನಗುಡಿ, ಬೆಂಗಳೂರು.




ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ

Wednesday, October 13, 2010

ಪ್ರೀತಿ???

ಹುಡುಗಿ: ನನ್ ಕಂದಮ್ಮ ಇವತ್ತು ಬೇಜಾರ್ ಮಾಡ್ಕೊಂಡಿತ್ತು ಕಣೋ... ನನ್ ಕಂದಮ್ಮನ್ ಜೊತೆ ಇವತ್ತು ಹೊರಗೆ ಹೋಗ್ಬೇಕು ಅಂತಿದ್ದೆ. ನಮ್ ಅಪ್ಪ ನನ್ನ ಅರ್ಥನೇ ಮಾಡ್ಕೊಳಲ್ಲ ಗೊತ್ತಾ ? ನಾನು ಹೊರಗೇ ಹೋಗ್ಬಾರ್ದಂತೆ, ಈ ಸಲ ನನ್ನ ಟ್ರಿಪ್ಪಿಗೂ ಕಳ್ಸಿಲ್ಲ. ತುಂಬಾ ಬೇಜಾರಾಯ್ತು ನನ್ಗೆ.

ಪೋಷಕರು: ಚಿನ್ನೂ... ಯಾಕಮ್ಮಾ ?? ನೆಗಡಿ ಆಗಿದ್ಯಾ ?? ಏಷ್ಟು ಸಲ ಹೇಳಿದೀನಿ ಮಳೇಲಿ ನೆನೀ ಬೇಡ ಅಂತ ? ಮೊದ್ಲು ಹೋಗಿ ತಲೆಒರ್ಸ್ಕೊ. ಬೇಕಾದ್ರೆ ಬಿಸಿ ಬಿಸಿ ಕಾಫೀ ಮಾಡ್ಕೊಡ್ತೀನಿ. ವಿಕ್ಸ್ ಹಚ್ಕೊಂಡು ಮಲ್ಕೊ ಇಲ್ಲಾಂದ್ರೆ ಮೂಗು ಕಟ್ಟತ್ತೆ, ಸರೀಗೆ ನಿದ್ದೆ ಬರೋದಿಲ್ಲ.

ಹುಡುಗಿ:
ನಾನು ಇವತ್ತು ಹೊಟೇಲ್ ನಲ್ಲಿ ತಿಂಡಿ ತಿನ್ ತೀನಿ (ಸಿನಿಮಾಗೆ ಬರ್ತೀನಿ ಅಂತ ಪ್ರಮಿಸ್ ಮಾಡಿದೀನಿ), ಕ್ಲಾಸಿಗೆ ಲೇಟ್ ಆಯ್ತು (ತಡ ಆದ್ರೆ ಟಿಕೇಟ್ ಸಿಕ್ಕೋದಿಲ್ಲ. ಪಾಪ ಅವ್ನು ಬೇಜಾರ್ ಮಾಡ್ಕೋತಾನೆ).

ಪೋಷಕರು:ಇವತ್ತು ನಿನ್ಗೆ ಇಷ್ಟಾ ಅಂತ ಬಿಸಿಬೇಳೆಭಾತ್ ಮಾಡಿದೀನಿ. ತಿನ್ಕೊಂಡು ಹೋಗು. ಭಾನುವಾರ ಲಾಲ್ ಭಾಗಿಗೆ ಹೋಗೋಣ, ಹೂವು ಅಂದ್ರೆ ನಿನ್ಗೆ ತುಂಬಾ ಇಷ್ಟ ಅಲ್ವಾ ? ಅಪ್ಪಂಗೆ ಹೇಳಿ ನಿನ್ಗೆ ಹೊಸಾ ಐಪಾಡ್ ಕೊಡ್ಸ್ತೀನಿ. ಅದ್ಯೇನೋ ಹೊಸಾ ಡ್ರಸ್ ಬೇಕು ಅಂತಾ ಇದ್ಯಲ್ಲ ಅದರ ವಿಷಯವಾಗಿ ಅಪ್ಪಂಗೆ ಹೇಳಿದೀನಿ. ಕೊಡ್ಸೋಣಾ ಅಂತಿದ್ರು.

ಹುಡುಗಿ: ಇವತ್ತು ಅವ್ನು ನನ್ ಜೊತೆ ಸರೀಗೆ ಮಾತಾಡ್ಲೇ ಇಲ್ಲ. ಅವ್ನಿಗೆ ಹೊಸಾ ಡ್ರೆಸ್ ಕೊಡ್ಸ್ ಬೇಕು. ಪಾಕೇಟ್ ಮನಿ ಹೇಗಿದ್ರೂ ಇದೆ.

ಪೋಷಕರು: ಇವತ್ತು ಯಾಕೆ ನನ್ ಮಗ್ಳು ಸಪ್ಪಗಿದಾಳೆ ? ಬಹುಷ ಅವಳ ಕಾಲೇಜಲ್ಲಿ ಏನೋ ಬೇಜಾರಾಗಿರ್ಬೇಕು. ಅವ್ಳ್ಗೆ ಕೊಬ್ರಿ ಮಿಠಾಯಿ ಅಂದ್ರೆ ಇಷ್ಟ, ರೀ ಇವತ್ತು ಕಾಯಿ ತುರ್ಕೊಡಿ. ಮಾಡಿ ಕೊಡೋಣ :)

ಹುಡುಗಿ: ಅಂತೂ ಇಂತೂ ನನ್ ಕಂದಮ್ಮ ನನ್ಜೊತೆ ಮಾತಾಡ್ತಾ ಇದೆ ಕಣೋ... "ಐ ಯಾಮ್ ಸೋ ಹ್ಯಾಪಿ" ಮೊನ್ನೆ ಇಂದಾ ಅದು ಮಾತಾಡ್ಸ್ತಾ ಇರ್ಲಿಲ್ಲ ಗೊತ್ತಾ... ನಂಗಂತೂ ಅಳುನೇ ಬಂದ್ಬಿಟ್ಟಿತ್ತು.

ಪೋಷಕರು: ಚಿನ್ನಮ್ಮಾ... ನಿನ್ಗೆ ಅಕ್ವೇರಿಯಂ ಬೇಕು ಅಂತಿದ್ಯಲ್ಲ... ನಾನೇ ಮಾಡ್ಕೊಡ್ತೀನಿ. ಏಷ್ಟು ದೊಡ್ಡದು ಬೇಕು ? ಅದ್ರಲ್ಲಿ ಯಾವ್ ಯಾವ್ ಮೀನು ಇರ್ಬೇಕು ? ಅದೆಲ್ಲಾ ನೋಡ್ಕೊ. ನಾಡಿದ್ದು ಹೋಗಿ ತರೋಣ. ಮೊದ್ಲು ಅಕ್ವೇರಿಯಂ ರೆಡಿಯಾಗ್ಲಿ.

ಹುಡುಗಿ: ಇವತ್ತು ನಾವು ಪಿಕ್ ನಿಕ್ಕಿಗೆ ಹೋಗಿದ್ವಿ. ಅವ್ನೂ ಬಂದಿದ್ದ. ಸಕ್ಕತ್ ಮಜ ಬಂತು ಗೊತ್ತಾ, ನನ್ ಫ್ರೆಂಡ್ಸ್ ಎಲ್ಲಾ ಅವನ್ ಜೊತೆ ಮಾತಾಡ್ತಾ ಇದ್ರೆ ನನ್ಗೆ ಕೋಪ ಬರ್ತಾ ಇತ್ತು. ಮನೇಲಿ ಹುಡ್ಗೀರೆಲ್ಲಾ ಹೋಗ್ತಾ ಇದೀವಿ ಅಂದಿದ್ದೆ, ಆದ್ರೆ ಅವ್ನೂ ಬರ್ತಾ ಇದಾನೆ ಅಂತ ಇವ್ರಿಗೆ ಗೊತ್ತಿಲ್ಲ.

ಪೋಷಕರು: ಇವತ್ತು ಪಿಕ್ನಿಕ್ಕಿಗೆ ಹೋಗಿದ್ಳಂತೆ, ಅವ್ಳ್ ಫ್ರೆಂಡ್ಸ್ ಎಲ್ಲಾ ನೀರಲ್ಲಿ ಆಟ ಆಡ್ಕೊಂಡ್ ಬಂದ್ರಂತೆ. ನಾಳೆ ಅವ್ಳಿಗೆ ನೆಗಡಿ ಆಗೋದು ಗ್ಯಾರೆಂಟಿ. ಈಗ್ಲೇ ಒಂದು ಮಾತ್ರೆ ಕೊಟ್ ಬಿಡ್ಬೇಕು. ಮತ್ತೆ ಜ್ವರ ಏನಾದ್ರೂ ಬಂದ್ರೆ ??? ಸಧ್ಯದಲ್ಲೇ ಇಂಟರ್ನಲ್ಸ್ ಇದೆ !!!

ಹುಡುಗಿ: ಇವತ್ತು ನನ್ಗೆ ಹೊಸಾ ಬಳೆ ಮಾಡ್ಸಿದ್ರು ಗೊತ್ತಾ ??? ನಾನು ಅದನ್ನ ಅವ್ನಿಗೆ ತೋರಿಸ್ಬೇಕು. ಏನೇ ಆದ್ರೂ ಅದೆಲ್ಲಾ ಅವ್ನಿಗೇ ತಾನೆ ??? ಮನೇಲಿ ಅವನ್ನ ಒಪ್ಪದಿದ್ರೆ ಎಲ್ಲಾ ತೊಗೊಂಡ್ ಹೋಗ್ತೀನಿ. ಪುಟ್ಟ ಮನೆ ಮಾಡಿ ಅವ್ನ್ ಜೊತೆ ಇರ್ತೀನಿ.

ಪೋಷಕರು: ಚಿನ್ನದ್ ರೇಟು ಆಕಾಶ ಮುಟ್ತಾ ಇದೆ. ಸಧ್ಯಕ್ಕೆ ಬಳೆ ಆಯ್ತು, ಮತ್ತೆ ಒಂದು ನೆಕ್ಲೆಸ್ ಮಾಡ್ಸಿದ್ರೆ ಚೆನ್ನಾಗಿರತ್ತೆ. ಅದಕ್ಕೆ ಇವಾಗಿಂದ್ಲೇ ಹಣ ಎತ್ತಿಡ್ಬೇಕು. ಮದುವೆಯಲ್ಲಿ ಅವಳು ಎಲ್ಲಾರ್ಗಿಂತಾ ಚೆನ್ನಾಗಿ ಕಾಣ್ ಬೇಕು. ದೇವ್ರೇ... ಒಂದು ಒಳ್ಳೇ ಹುಡುಗ ಸಿಕ್ಲಿ.

ಹುಡುಗಿ: ನನ್ಗೆ ಗೊತ್ತು, ಮನೇಲಿ ನಮ್ಮಿಬ್ರ ಮದುವೆಗೆ ಒಪ್ಪೋದಿಲ್ಲಾ ಅಂತ. ನಾನು ಡಿಸೈಡ್ ಮಾಡಿದೀನಿ. ಮದುವೆ ಆದ್ರೆ ಅವ್ನೇ ಆಗೋದು. ಅವ್ನೂ ರೆಡಿ ಇದಾನೆ. ಮನೇಲಿ ಮಾಡ್ಸಿರೋ ಚಿನ್ನಾ ಹೇಗಿದ್ರೂ ಇದೆ........ !!!!!

Wednesday, September 22, 2010

ನಿಮ್ಮ ಪ್ರಯಾಣ ಸುಖಕರವಾಗಿರಲಿ

ಜೀವನವೆಂಬುದು ನಂಬಿಕೆಯೆಂಬ

ಹಳಿಗಳಮೇಲಿನ ರೈಲು ಪಯಣ

ಹಳಿತಪ್ಪಿದರದು ಭಾರೀ ದುರಂತ,

ಭಾಂದವ್ಯಗಳ ಸಾವು

ಮನದ ತುಂಬಾ ನೋವು

ಪ್ರತಿಕ್ಷಣವೂ ಹೊಸಾ ಪಯಣಿಗರ ಸೇರ್ಪಡೆ

ಹಳೆ ಪಯಣಿಗರ ಬೀಳ್ಗೊಡುಗೆ

ಹೊಸ ಪಯಣಿಗನ ಆಗಮನದ ಸಂತಸ

ಹಳೆ ಪಯಣಿಗನ ನಿರ್ಗಮನದ ಬೇಸರ

ಪರಿಚಿತ, ಅಪರಿಚಿತ ಮೊಗದ ಸಹಪಯಣಿಗರ ನಡುವೆ

ನಮ್ಮ ನಿಮ್ಮ ಪಯಣ ನಿರಂತರ

ನಿಂತಲ್ಲೇ ನಿಂತು ಬರುವ ರೈಲಿಗಾಗಿ ಕಾದಿರುವ ನಿಲ್ದಾಣಗಳು

ನಿಂತ ಕೆಲ ನಿಮಿಷದ ನಂತರ ಮುಂದಿನ ನಿಲ್ದಾಣದ ನಿರೀಕ್ಷೆ

ಪಯಣದ ನಡುವಲ್ಲಿ ಸಿಗುವ ಅಪರಿಚಿತ ಮುಖಗಳಲ್ಲಿ

ಪರಿಚಯದ ಹುಡುಕಾಟ, ನಡು ನಡುವೆ ಹುಡುಗಾಟ

ಮುಂಬರುವ ನಿಲ್ದಾಣದ ಅರಿವು ಯಾರಿಗುಂಟು, ಯಾರಿಗಿಲ್ಲ

ನಮ್ಮ ನಿಲ್ದಾಣ ಬಂದಾಗ ರೈಲಿನಿಂದಿಳಿಯಲೇ ಬೇಕು

ಸಹ ಪಯಣಿಗರ ಪಯಣ ಸಾಗಲೇ ಬೇಕು

ದೇವನೆಂಬ ಚಾಲಕನ ವೇಗ ಬಲ್ಲವರಾರು

ಪಯಣವನೆಲ್ಲಿ ನಿಲ್ಲಿಸುವನೋ ಅರಿತವರು ಯಾರು

ಸಹ ಪಯಣಿಗನಾಗಿ ನಾ ಕೋರುವುದಿಷ್ಟೇ...



ನಿಮ್ಮ ಪ್ರಯಾಣ ಸುಖಕರವಾಗಿರಲಿ.... :)

Thursday, September 16, 2010

ಮದುವೆ ಯಾವಾಗ ಮಾಡ್ಕೋತೀಯ ???

ಮದುವೆ ಯಾವಾಗ ಮಾಡ್ಕೋತೀಯ, ನಮ್ಗೆಲ್ಲಾ ಮದ್ವೆ ಊಟ ಯಾವಾಗ ಹಾಕಿಸ್ತೀಯ....??? ಇದು ಮದುವೆಯಾಗದ ಹುಡುಗ ಮತ್ತು ಹುಡುಗಿಯರನ್ನು ಮಿಕ್ಕವರು ಕೇಳುವ ಸಾಮಾನ್ಯ ಪ್ರಶ್ನೆ.

"ಅಲ್ಲಾ ಸ್ವಾಮೀ.... ನಿಮಗೆ ಭರ್ಜರಿ ಊಟ ಬೇಕಾದ್ರೆ ನನ್ನೇ ಕೇಳಿ, ಮಾಡಿ ಹಾಕ್ತೀನಿ. ಅದಿಕ್ಕೆ ನನ್ ಮದುವೇನೇ ಆಗಬೇಕಾ ? ಬೇರೆ ಏನೂ ಕಾರಣನೇ ಸಿಕ್ಲಿಲ್ವಾ ??? ನಾನು ಒಂಟಿಯಾಗಿ ಇರೋದು ಕಂಡು ನಿಮ್ಗೆ (ಮದುವೆ ಆದವರಿಗೆ) ಹೊಟ್ಟೆ ಉರಿ ಬರತ್ತಾ??? ಅಥವಾ ನೀವು ಖೆಡ್ಡಾಗೆ ಬಿದ್ದಾಯ್ತು ಅಂತ ನನ್ನ ಮೇಲೆ ಹೊಟ್ಟೆಕಿಚ್ಚಾ???" ಹೀಗೆಲ್ಲಾ ಕೇಳೋಣಾ ಅನ್ಸತ್ತೆ. ಆದ್ರೆ ಸಮಾಜದಲ್ಲಿ ಸಭ್ಯ.. ಅಂತ ಅನ್ನಿಸ್ಕೊಂಡಿರೋದ್ರಿಂದ.... "ಅಯ್ಯೋ ಅದಕ್ಕೇನಂತೆ.... ಮೊದಲು ಒಳ್ಳೇ ಹುಡುಗಿ ಸಿಕ್ಲಿ.... ಆಮೇಲೆ ಮದುವೆ ಆಗ್ತೀನಿ" ಅಂತ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡ್ತಾ ಇದ್ದೆ.

ಇನ್ನು ಅದಕ್ಕೆಲ್ಲಾ ಅವಕಾಶ ಇಲ್ಲ ಬಿಡಿ. ಅಂತೂ ಇಂತೂ ನಮ್ಮ ಮನೆಯವರೆಲ್ಲಾ ಸೇರಿ ನನಗೂ ಒಂದು ಖೆಡ್ಡಾನ ತೋಡಿ ಆಗಿದೆ. ಅದರ ಹತ್ತಿರ ಕರ್ಕೊಂಡು ಬಂದದ್ದೂ ಆಗಿದೆ... ಇನ್ನೇನು ಅದಕ್ಕೆ ತಳ್ಳೋದೊಂದೇ ಬಾಕಿ ನೋಡಿ. ಇಷ್ಟು ದಿನ ನನ್ನ ಸ್ನೇಹಿತರಿಗೆ ಸಿಕ್ಕಾಪಟ್ಟೆ ಗೋಳುಕೊಡ್ತಾ ಇದ್ದೆ. ಇನ್ನು ಆ ಸರದಿಯಲ್ಲಿ ನಾನೇ ನಿಲ್ಲಬೇಕು. ನನ್ನ ಸಹೋದ್ಯೋಗಿ ಅವನ ಶ್ರೀಮತಿಯೊಂದಿಗೆ ಪ್ರತೀ ದಿನ ೧ ಘಂಟೆ ಫೋನಿನಲ್ಲಿ ಮಾತನಾಡೋವಾಗ ರೇಗಿಸ್ತಾ ಇದ್ದ ನಾನು ಇವತ್ತು ಗಪ್ ಚುಪ್... ಆಗೆಲ್ಲಾ ಕೇಳ್ತಾ ಇದ್ದೆ.... "ಅಷ್ಟು ಹೊತ್ತು ಮಾತಾಡೋಕೆ ಅದೇನಿರತ್ತೆ ನಿನ್ಗೆ ವಿಷ್ಯಗಳೂ??? ಪ್ರಪಂಚದ ಸುದ್ದೀ ಎಲ್ಲಾ ನಿನ್ ಹತ್ರಾನೇ ಇರತ್ತಾ???" ಇತ್ಯಾದಿ ಇತ್ಯಾದಿ.... ಆದ್ರೆ ಸತ್ಯವಾಗ್ಲೂ ಇವತ್ತು ನನ್ನ ಹತ್ರ ಆ ರೀತಿಯ ಪ್ರಶ್ನೆಗಳಿಗೆ ಉತ್ತರ ಇಲ್ಲ :)

ಮದುವೆಗೆ ಹುಡುಗಿಯ ಹುಡುಕಾಟ ಶುರುವಾದ್ರೆ ಗೆಳೆಯರು ಕೇಳೋ ಪ್ರಶ್ನೆ: "ಏನಮ್ಮಾ.... ಏಷ್ಟು ಉಪ್ಪಿಟ್ಟು+ಕೇಸರೀ ಭಾತು ಆಯ್ತು ಇಲ್ಲೀವರ್ಗೇ ???" ಅಂತ. ನಿಜ ಹೇಳಬೇಕು ಅಂದ್ರೆ ನನ್ನ ಜೀವನದಲ್ಲಿ ನಾನು ಉಪ್ಪಿಟ್ಟು+ಕೇಸರೀ ಭಾತು ತಿಂದೇ ಇಲ್ಲ :) ಇವಳನ್ನ ನೋಡಲು ಹೋದಾಗಲೂ ಕೊಟ್ಟದ್ದು ಆಲೂಗಡ್ಡೆ ಚಿಪ್ಸ್ ಮತ್ತೆ ಸೋನ್ ಪಾಪಡಿ.... ಅದೇ ನನ್ನ ಮೊದಲ ಮತ್ತು ಕೊನೆಯ ಇಂಟರ್ವ್ಯು ಆಗೋಯ್ತು. ಅದೇನೋಪ್ಪ.... ಪ್ರಪಂಚದಲ್ಲಿ ಹುಡುಗಿಯರು ಕಡಿಮೆ ಅಂತಾರೆ, ಆದ್ರೆ ನನ್ಗೆ ಯಾವುದೇ ಸಮಸ್ಯೆ ಆಗ್ಲಿಲ್ಲ ನೋಡಿ. ಮೊದಲ್ನೇ ಸಲ ನೋಡಿದ ಹುಡುಗೀನೇ ಕ್ಲಿಕ್ ಆಗೋದ್ಳು. ಇವತ್ತಿಗೂ ಅವಳಿಗೆ ರೇಗಿಸ್ತಾ ಇರ್ತೀನಿ ನಂಗೆ ಜೀವನದಲ್ಲಿ ಒಂದೇ ಒಂದ್ ಸಾರೀನೂ ಉಪ್ಪಿಟ್ಟು+ಕೇಸರೀ ಭಾತು ತಿನ್ನೋ ಅವಕಾಶ ಸಿಕ್ಕ್ಲೇ ಇಲ್ಲ ಅಂತ ;)

ಅವಳನ್ನ ನೋಡಿಕೊಂಡು ಬಂದ ಕೆಲವೇ ದಿನಗಳಲ್ಲಿ ಅವಳ ಹುಟ್ಟಿದ ಹಬ್ಬ ಇತ್ತು. ಹೇಗಾದ್ರೂ ಮಾಡಿ ಶುಭಾಷಯ ತಿಳಿಸ್ಬೇಕು, ಆ ನೆಪದಲ್ಲಿ ಅವಳಜೊತೆ ಮಾತಾಡ್ಬೇಕು ಅಂತ ಒದ್ದಾಡ್ತಾ ಇದ್ದೆ. ಅವಳ ಮೊಬೈಲ್ ನಂಬರ್ ಕೂಡಾ ನನ್ನ ಹತ್ತಿರ ಇರಲಿಲ್ಲ. ಇದ್ದದ್ದು ೨ ಬೇರೆ ಬೇರೆ ನಂಬರ್ ಗಳು. ಒಂದು ಅವರ ಮನೆಯ ಸ್ಥಿರದೂರವಾಣಿದು, ಮತ್ತೊಂದು ಅವಳ ದೊಡ್ಡಪ್ಪನ ಮೊಬೈಲ್ ನಂಬರ್. ಅಂತೂ ಇಂತೂ ನಾನು ಅವಳಿಗೆ ಹುಟ್ಟಿದ ಹಬ್ಬಕ್ಕೆ ಶುಭಾಷಯ ಕೋರಲೇ ಬೇಕು ಅಂತ ಅವಳ ಹುಟ್ಟಿದ ದಿನದಂದೇ ಆ ಸ್ಥಿರದೂರವಾಣಿ ಗೆ ಕರೆಮಾಡಿದೆ.

ನನ್ನ ಗ್ರಹಚಾರ ಕಣ್ರಿ.... ಆ ದಿನಾನೇ ಆ ಸ್ಥಿರದೂರವಾಣಿ ಕೈ ಕೊಟ್ಟಿತ್ತು. ನಾನೂ ಇತ್ತಕಡೆಯಿಂದ ಪ್ರಯತ್ನ ಪಟ್ಟಿದ್ದೂ ಪಟ್ಟಿದ್ದೇ... ಆದ್ರೆ ಪ್ರಯೋಜನ ಮಾತ್ರ ಆಗ್ಲಿಲ್ಲ. ಕೊನೇಗೆ ಧೈರ್ಯ ಮಾಡ್ಕೊಂಡು ಅವಳ ದೊಡ್ಡಪ್ಪನ ಮೊಬೈಲಿಗೇ ಕರೆ ಮಾಡಿದ್ದೆ :) ಕರೆ ಮಾಡಿ ನಂತರ ಆಕೆಯ ಮೊಬೈಲ್ ನಂಬರ್ ಪಡ್ಕೊಂಡಿದ್ದೆ.

ಮನೆಯಲ್ಲಿ ನಿಶ್ಛಿತ್ತಾರ್ಥದ ದಿನವೆಲ್ಲಾ ನಿಗದಿಯಾದಮೇಲೆ ಶುರುವಾಯ್ತು ನಮ್ಮ ಮೊಬೈಲ್ ಸಂಭಾಷಣೆ ಅದರ ಜೊತೆಯಲ್ಲೇ ನನ್ನ ಮೊಬೈಲ್ ಬಿಲ್ಲಿನ ಸ್ಪರ್ಧೆ ಕೂಡಾ!!! ನನ್ನ ಮೊಬೈಲ್ ಬಿಲ್ಲು ತಿಂಗಳಿಂದ ತಿಂಗಳಿಗೆ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತಿತ್ತು. ಮೊದ ಮೊದಲು ವೋಡೋಫೋನಿನವರಿಗೆ ಧಾರಾಳವಾಗಿ ಹಣ ಕಟ್ಟಿದ್ದಾಯ್ತು.... ಆಮೇಲೆ ಹೊಸಾ"ಐಡಿಯಾ" ಹೊಳೆದದ್ದರಿಂದ ಈಗ ತಿಂಗಳಿಗೆ ಕೇವಲ ೨೦೦/- ರೂಪಾಯಿಯಲ್ಲಿ ನಮ್ಮ ಮಾತೆಲ್ಲಾ ಸಾಗುತ್ತಲಿದೆ. ಹೆಚ್ಚಿನ ಖರ್ಚಿಲ್ಲದೇ ನಾವಿಬ್ಬರೂ ಆರಾಮವಾಗಿ ಮಾತನಾಡುವ ಸದವಕಾಶವನ್ನ "ಐಡಿಯ" ದವರು ನಮಗೆ ಒದಗಿಸಿಕೊಟ್ಟಿದ್ದಾರೆ. ನಿಮ್ಮಲ್ಲಿ ಯಾರಾದರೂ ನನ್ನ ಪರಿಸ್ಥಿತಿಯಲ್ಲೇ ಇದ್ದರೆ ನಿಮಗೂ "ಐಡಿಯ" ಚೆನ್ನಾಗಿ ಉಪಯೋಗಕ್ಕೆ ಬರಬಹುದು ಅಂತ ನನ್ನ ಅನಿಸಿಕೆ ;)

ನಿಶ್ಛಿತ್ತಾರ್ಥಕ್ಕೆ ಮೈಸೂರಿನಿಂದ ಒಂದು ಖಾಸಗೀ ವಾಹನದಲ್ಲಿ ಹೊರಟನಾವೆಲ್ಲಾ (ನಾನು ಮತ್ತು ನಮ್ಮ ಕುಟುಂಬದವರು) ಬೆಂಗಳೂರಿಗೆ ಬಂದ್ವಿ. ಬರುವಾಗ ಎಲ್ಲಾ ಸೇರ್ಕೊಂಡು ನನಗೆ ರೇಗ್ಸಿದ್ದೋ ರೇಗ್ಸಿದ್ದು. ಮದುವೆ ನಿಶ್ಛಿತ್ತಾರ್ಥದ ದಿನ ಎಲ್ಲರ ಹದ್ದಿನ ಕಣ್ಣೂ ನನ್ನನ್ನೇ ಹುಡುಕುತ್ತಿದ್ದವು. ಏನೋ ಒಂದುರೀತಿಯ ಮುಜುಗರ ನನ್ನಲ್ಲಿ. ಒಳ್ಳೆ ಮೃಗಾಲಯದಲ್ಲಿ ಪ್ರಾಣಿಯನ್ನ ನೋಡಿ ಖುಷಿ ಪಡೋರೀತಿ ನನ್ನ ನೋಡ್ತಾ ಅವರವರಲ್ಲೇ ಏನೇನೋ ಮಾತಾಡ್ಕೊತಾ ಇದ್ರು. ಅವಳ ಮನೆಯ ಮಂದಿಗೆ ನಾನು ಹೊಸಬ. ಹಾಗಾಗಿ ಎಲ್ಲರ ಕಣ್ಣೂ ನನ್ನ ಮೇಲೇ. ಹಲವು ಅಪರಿಚಿತ ಮುಖಗಳು ನನ್ನನ್ನೇ ನೋಡ್ತಾ ಇದ್ರೆ ಏನ್ ಮಾಡ್ಬೇಕು ಅಂತನೇ ಗೊತ್ತಾಗ್ತಾ ಇರ್ಲಿಲ್ಲ. ನನ್ಗೂ Full tension ಆಗ್ತಾ ಇತ್ತು. ಬರೀ ಎಲ್ಲಾರಿಗೂ ಒಂದು ಸ್ಮೈಲ್ ಮಾತ್ರ ಕೊಡ್ತಾ ಇದ್ದೆ. ಬೇರೆ ಮಾಡೋದಾದ್ರೂ ಏನು ಹೇಳಿ... :(

ನಾನು ಅವಳನ್ನ ನೋಡೋಕೆ ನಿಶ್ಛಿತ್ತಾರ್ಥಕ್ಕಿಂತಾ ಸುಮಾರು ೩ ತಿಂಗಳ ಹಿಂದೆ ಹೋಗಿದ್ದು. ನಂತರದ ನಮ್ಮ ಭೇಟಿ ನಿಶ್ಛಿತ್ತಾರ್ಥ ದ ದಿನದಂದೇ ಆದದ್ದು. ಚೆಂದದ ಸೀರೆ ಉಟ್ಕೊಂಡು ನನ್ನವಳು ಚೆನ್ನಾಗಿ ಕಾಣ್ತಾ ಇದ್ಳು. ಎಲ್ಲಾ ಕೇಳೋದು ಒಂದೇ ಪ್ರಶ್ನೆ, "ಯಾಕೆ ಇಷ್ಟು ಸಣ್ಣ ಆಗಿದ್ದೀರ ? ಪಾಪ ಅವ್ಳ್ದೇ ಯೋಚ್ನೇನಾ?? ಇನ್ನು ಸ್ವಲ್ಪ ತಿಂಗ್ಳು ವೈಟ್ ಮಾಡಿ... ಮನೆಗೇ ಬರ್ತಾಳೆ... ಅಲ್ಲಿವರ್ಗೇ ಸ್ವಲ್ಪ ಚೆನ್ನಾಗಿ ತಿಂದು ದಪ್ಪ ಆಗಿ, ಆಮೇಲೆ ಅವ್ಳು ಬಂದು ನಿಮ್ಮನ್ನ ಚೆನ್ನಾಗಿ ನೋಡ್ಕೋತಾಳೆ" ಅಂತ. ಎಲ್ಲರಿಗೂ ಉತ್ತರ ಕೊಟ್ಟೂ ಕೊಟ್ಟೂ ಸಾಕಾಯ್ತು. ಬಂದವರಿಗೆಲ್ಲಾ ನಮ್ಮ ಜೋಡಿ ಮೆಚ್ಚುಗೆ ಆಯ್ತು.

ಅಲ್ಲಾ.... ನಾನು ಅವ್ಳು ಬಂದಿಲ್ಲಾ ಅಂತ ಯೋಚ್ನೆ ಮಾಡ್ತಾ ಸಣ್ಣ ಆದ್ನಂತೆ. ಅವ್ರಿಗೇನ್ ಗೊತ್ತು, ದಿನಾಬೆಳಿಗ್ಗೆ ೪ ಘಂಟೆಗೇ ಎದ್ದು ತಿಂಡಿ ಮಾಡ್ಕೊಂಡು ಕೆಲ್ಸಕ್ಕೂ ಹೋಗಿ ಮತ್ತೆ ಮನೆಗೆ ಬಂದು ಅಡುಗೆ ಮಾಡ್ಕೊಂಡು ಮಲ್ಗೋವ್ರ ಕಷ್ಟ :P ಅದರ ಮಜವನ್ನ ಅನುಭವಿಸಿದವನೇ ಬಲ್ಲ ;) ಬೆಳಿಗ್ಗೆ ಆದ್ರೆ ತಿಂಡಿ ಮಾಡೋ ಗಡಿಬಿಡಿ, ಸಂಜೆ ಆದ್ರೆ ಅಡುಗೆ ಮಾಡೋ ಗಡಿಬಿಡಿ, ಇದರ ಜೊತೆಯಲ್ಲೇ ನಾಳೆಗೇನು ತಿಂಡಿ ಮಾಡೋದಪ್ಪಾ ಅನ್ನೋ ಯೋಚನೆ.... ಉಸ್ಸ್ಸಪ್ಪಾ... ಒಂದೋ ಎರಡೋ.... ಆದ್ರೂ ಸಧ್ಯಕ್ಕೆ ಈ ಜೀವನ ಮಸ್ತ್ ಆಗೇ ಇದೆ :) ಮುಂದೆ ಮದುವೆಯಾದಮೇಲೆ ಹೇಗಾಗತ್ತೋ ಗೊತ್ತಿಲ್ಲ :)

ಸಧ್ಯಕ್ಕೆ ನನ್ನ ಮದುವೆ ನಿಶ್ಛಿತ್ತಾರ್ಥಮುಗಿದಿದೆ. ಇನ್ನು ಮದುವೆ ಕಾರ್ಯ ಹೇಗೆ ಆಗತ್ತೋ ಅನ್ನೋ ಭಯ ಮನಸ್ಸಲ್ಲಿ ಕಾಡ್ತಾ ಇದೆ. ನಿಶ್ಛಿತ್ತಾರ್ಥ ಏನೋ ಯಾವ ತೊಂದರೆಯೂ ಇಲ್ಲದೇ ನಡೆದುಹೋಯ್ತು. ಮುಂದೆನೂ ಹಾಗೇ ಎಲ್ಲಾ ಸರಾಗವಾಗಿ ಆಗತ್ತೆ ಅಂತ ಅಂದ್ಕೊಂಡಿದೀನಿ. :)

Tuesday, September 14, 2010

ಬಾಲ್ಯ....

ಬಾಲ್ಯ ಎಷ್ಟು ಸುಂದರ ಅಲ್ವಾ ? ನಾವೆಲ್ಲಾ Miss ಮಾಡ್ಕೊಳೋ ಬಹು ದೊಡ್ಡ ಆಸ್ತಿ. ನಾವು ಕಳ್ಕೊಂಡ ಬಾಲ್ಯವನ್ನ ನಮ್ಮ ಮಕ್ಕಳಲ್ಲಿ ಅಥವಾ ನಮ್ಮ ಸುತ್ತ ಮುತ್ತ ಕಾಣ ಸಿಗುವ ಮಕ್ಕಳಲ್ಲಿ ಕಂಡು ಸಂತಸ ಪಡುತ್ತೇವೆ. ನಾವು ಚಿಕ್ಕವರಾಗಿದ್ದಾಗಿನ ನೆನಪು ನಮ್ಮ ನನಪಿನಂಗಳದಲ್ಲಿ ಬಂದು ಒಮ್ಮೊಮ್ಮೆ ನಲಿದು, ಕುಣಿದು ಹೋಗುವುದು ಸಾಮಾನ್ಯವೇ.

ಮೊನ್ನೆ ನಾನು ನನ್ನ ಅಜ್ಜನ ಮನೆಯಾದ ಬಾರಕೂರಿಗೆ ಹೋಗಿದ್ದೆ. ಅಲ್ಲಿ ಕಂಡಾಪಟ್ಟೆ ಮಳೆ ಬಂದು ಅಲ್ಲಿನ ತೋಡು (ಗದ್ದೆಗಳ ನಡುವೆ ನೀರು ಹರಿಯುವ ಜಾಗ) ತುಂಬಿ ಹರಿಯುತ್ತಿತ್ತು. ಅದರಲ್ಲಿ ನಡೆದಾಡುತ್ತಾ ಇದ್ದೆ. ಅಲ್ಲಿಗೆ ನನ್ನ ಅಣ್ಣ ಮತ್ತು ಅವನ ೩ ವರ್ಷದ ಮಗಳು ವಿಸ್ಮಯ ಬಂದರು. ಅಣ್ಣ ಅವಳಿಗೆ "ಪೇಪರ್ ದೋಣಿ ಮಾಡಿಕೊಡ್ತೀನಿ, ಅದನ್ನ ನೀರಲ್ಲಿ ಬಿಡೋಣ" ಅಂತಾ ಇದ್ದ. ಆಗಲೇ ನನಗೆ ನಮ್ಮ ಬಾಲ್ಯದ ನೆನಪು ಬಹಳ ಕಾಡಿದ್ದು. ಅವುಗಳಲ್ಲಿ ಕೆಲವನ್ನು ಪಟ್ಟಿ ಮಾಡಿದ್ದೇನೆ :) ನೀವೂ ಓದಿ ನಿಮ್ಮ ಬಾಲ್ಯವನ್ನ ನೆನಪುಮಾಡಿಕೊಳ್ಳಿ :)

• ನಾವೆಲ್ಲಾ ಚಿಕ್ಕವರಾಗಿದ್ದಾಗ ಹಳೇ ಪೇಪರಿನಲ್ಲಿ (ಒಮ್ಮೊಮ್ಮೆ ಹೊಸಾ ನೋಟ್ ಬುಕ್ಕಿನಿಂದ ಹರಿದದ್ದೂ ಇದೆ) ದೋಣಿ, ರಾಕೇಟ್, ವಿಮಾನ ಇನ್ನೂ ಮುಂತಾದವನ್ನ ಮಾಡಿ ಶಾಲೆಯ ಬಿಡುವಿನಲ್ಲಿ ತರಗತಿಗಳಲ್ಲೇ ಆಟ ಆಡಿದ್ದುಂಟು.

• ಎರೆಡು ಪುಸ್ತಕಗಳ ಹಾಳೆಗಳನ್ನು ಒಂದರಮೇಲೊಂದರಂತೆ ಜೋಡಿಸಿ ನಂತರ ಅದನ್ನ ಉಲ್ಟಾ ಮಾಡಿ ಸಿನಿಮ ನೋಡುವ ಆಟ ಆಡಿದ್ದುಂಟು.

• ಆಟದ ಸಮಯದಲ್ಲಿ ಲಗೋರಿ, ಜೂಟಾಟ, ಐಸ್ ಪೈಸ್ ಎಲ್ಲಾ ಆಡಿದ್ದನ್ನು ನೆನಸಿಕೊಂಡರೆ ಏನೋ ಒಂದು ರೀತಿ ಖುಷಿಯಾಗತ್ತೆ. :)

• ಆಗೆಲ್ಲಾ ನಮಗೆ ತೆಂಗಿನ ಗರಿಯ ಬುಡವೇ (ಹೆಡೆಮಂಡೆ) ಬ್ಯಾಟು, ಖಾಲಿಯಾದ ಪ್ಲಾಸ್ಟಿಕ್ ಕವರಿನ ಗಂಟೇ ಬಾಲು. ಅದರಲ್ಲೇ ಕ್ರಿಕೇಟನ್ನು ಮ್ಯಾಚ್ ಫಿಕ್ಸಿಂಗ್ ಇಲ್ಲದೇ ಆಡಿ ಖುಷಿಪಟ್ಟಿದ್ವಿ.

• ಪುಸ್ತಕದ ಕೊನೆಯ ಹಾಳೆಯಲ್ಲಿ ಮೂರುಕಲ್ಲಿನ ಆಟದ ಮನೆಗಳು ಇದ್ದೇ ಇರುತ್ತಿದ್ದವು. ಚೌಕಾಬಾರ, ಚನ್ನೇಮಣೆ, ಕಳ್ಳಾ ಪೊಲೀಸ್ ಆಟ, ಪಠ್ಯಪುಸ್ತಕದಿಂದ ಆಡಿದ ಬುಕ್ ಕ್ರಿಕೇಟ್ ಮತ್ತು ಇನ್ನೂ ಹಲವು ಆಟಗಳು ನಮ್ಮ ಮೆಚ್ಚಿನ ಆಟಗಳಾಗಿರುತ್ತಿದ್ದವು.

• ರಜೆ ಬಂತೆಂದರೆ ನಾನು ಕ್ರಿಕೇಟ್ ಆಡಲು ಅಕ್ಕನಹಿಂದೆ ದುಂಬಾಲು ಬೀಳುತ್ತಿದ್ದೆ. ಅದಕ್ಕವಳು ತನ್ನ "ಅಮ್ಮ ಆಟಕ್ಕೆ" ಬಂದರೆ ಮಾತ್ರಾ ಕ್ರಿಕೇಟನ್ನು ಆಡುವುದಾಗಿ ಶರತ್ತು ಇಡುತ್ತಿದ್ದಳು. ವಿಧಿ ಇಲ್ಲದೇ ಒಲ್ಲದ ಮನಸ್ಸಿನಿಂದ ಒಪ್ಪಿ ಕ್ರಿಕೇಟಿನ ಆಟ ಆಡಲು ಕಾಯುತ್ತಿದ್ದೆ.

• ಸ್ವಿಚ್ ಆನ್ ಮಾಡಿರದ ಪ್ಲಗ್ಗಿಗೆ ಪಿನ್ನನ್ನು ಚುಚ್ಚಿ ಕರೆಂಟ್ ಹೊಡೆಸಿಕೊಂಡದ್ದು ನೆನಸಿಕೊಂಡರೆ ಈಗಲೂ ನಗು ಬರುತ್ತದೆ.

• ಪುಟ್ಟ ಪುಟ್ಟ ಮೋರಿಗಳಲ್ಲಿ ಮೀನು ಹಿಡಿದು ಹಾರ್ಲಿಕ್ಸ್ ಬಾಟಲಿಗೆ ಹಾಕಿ ಸಾಕಲು ಮಾಡುತ್ತಿದ್ದ ವಿಫಲಯತ್ನ ಗಳು, ಏರೋಪ್ಲೇನ್ ಚಿಟ್ಟೆಯನ್ನು ಹಿಡಿಯಲು ಹೋಗಿ ಎಡವಿ ಕೆಳಬಿದ್ದದ್ದು.

• ಅಪ್ಪನೊಡನೆ ಪೇಟೆಗೆ ಹೋದಾಗ ಹಠಮಾಡಿ ಕೊಂಡ ಪ್ಲಾಸ್ಟಿಕ್ ಲಾರಿಯ ಗಾಲಿ ಮುರಿದಾಗ ಬೇಸರದಿಂದ ಸಪ್ಪೆಮುಖ ಮಾಡಿಕೊಂಡದ್ದು.

• ಶಾಲೆ ಮುಗಿಸಿ ಮನೆಗೆ ಬಂದು ಅಮ್ಮನಿಗೆ ಏನಾದರೂ ತಿನ್ನಲಿಕ್ಕೆ ಕೊಡು ಅಂತ ತಲೆ ತಿಂದದ್ದು.

• ಸುಳ್ಳು ಸುಳ್ಳಾಗೇ ಹೊಟ್ಟೇ ನೋವು ಬರಿಸಿಕೊಂಡು ಶಾಲೆಗೆ ಹೋಗದೇ ಚಕ್ಕರ್ ಹೊಡೆದು ಮನೆಯಲ್ಲಿ ಮಜವಾಗಿ ಸಮಯ ಕಳೆದದ್ದು.

• ಐಯೋಡೆಕ್ಸ್ ಬಾಟಲಿಯಲ್ಲಿ ನಲ್ಲಿ ಗಿಡ ನೆಟ್ಟು ಪ್ರೀತಿಯಿಂದ ೫ ವರುಷ ಸಾಕಿದ್ದು.

• ಅಪ್ಪ ಪೇಟೆಯಿಂದ ತಂದಿದ್ದ ಕಡಲೇ ಕಾಯಿಯನ್ನ ಎಲ್ಲರೊಂದಿಗೆ ಹಂಚಿ ತಿಂದದ್ದು.

• ಅಪ್ಪನ ಸೈಕಲ್ಲಿನ ಚಕ್ರವನ್ನು ಜೋರಾಗಿ ತಿರುಗಿಸಿ ಅದಕ್ಕೆ ಕಡ್ಡಿ ಇಟ್ಟು ಅಪ್ಪನಿಂದ ಬೈಸಿಕೊಂಡದ್ದು.

• ಊಟ ಮಾಡಲು ಮನಸ್ಸಿಲ್ಲದಾಗ ಅಮ್ಮನ ಕೈ ತುತ್ತಿಗೆ ಕಾಡಿದ್ದು, ಕೈ ತುತ್ತು ತಿಂದು ನಿದ್ರೆಗೆ ಜಾರಿದ್ದು.

ಸಧ್ಯಕ್ಕೆ ಇಷ್ಟು ಸಾಕು, ಮಿಕ್ಕವನ್ನು ಪಟ್ಟಿ ಮಾಡುತ್ತಾ ಹೋದರೆ ಅದು ನಿಲ್ಲುವುದೇ ಇಲ್ಲ... :)

Monday, September 6, 2010

ಅವಳು ನನ್ನವಳು

ಅವಳು ನನ್ನವಳು ಬಲು ಚೆಂದದವಳು

ಮೋಹಕ ನಗೆ ಬೀರಿ ಸಂತಸವ ತಂದವಳು

ಮಧುರ ಮಾತನು ನುಡಿದು ನೋವ ಮರೆಸಿದವಳು

ಹೃದಯ ಬಡಿತದಿ ಬೆರೆತು ಉಸಿರಾಗಿ ನಿಂದವಳು

ಮುಗ್ದ ಮನಸಿನ ಚಲುವೆ, ಈಕೆ ನನ್ನವಳು

ಎನ್ನೆಡೆಗೆ ಪ್ರೀತಿಯ ಧಾರೆ ಹರಿಸಿದವಳು

ನನ್ನ ಬಾಳ ಪಯಣದ ಸಹ ಪಯಣಿಗಳು

ಬಾಳಬಂಡಿಯ ನೊಗವ ಹೊತ್ತು ಜೊತೆ ಸಾಗುವವಳು :)

Friday, August 27, 2010

ನನ್ನೊಲುಮೆಯಾ ಸಖೀ....

ದೇವ ದೇವರಲಿ ನಮಿಸಿ

ಬೇಡಿಕೆಗಳ ಮಳೆ ಸುರಿಸಿ

ಬಂದೆ ನಾ ನಗು ಮೊಗವನರೆಸಿ

ಹುಡುಕಿದ್ದೆ ನಾನಂದು ಎನ್ನ ಅರಸಿ



ಕಂಡಿದ್ದೆ ನಾ ನಂದು

ನಗುಮೊಗದ ಕನಸೊಂದು

ಕನಸಿನಲಿ ನೀ ಬಂದು

ನಿಂತಿದ್ದೆ ನಗು ತಂದು



ನಿನ್ನ ಆ ಹೊಳೆವ ಕಣ್ಗಳು

ನಗುವಿನಾ ಅಲೆಗಳು

ಕಣ್ಣಂಚಿನಲಿ ಇದ್ದ ಆ ನಿನ್ನ ಕುಡಿನೋಟ

ಕುಡಿನೋಟದೊಳಗಿದ್ದ ಆ ನಿನ್ನ ತುಂಟಾಟ



ಬಾ ಸಖಿ ಸಾಗುವ ಬಾಳ ಬಂಡಿಯಲಿ

ದೂರ, ಬಲುದೂರದಾ ಪಯಣದಲಿ

ನಾ ನಿನ್ನ ಜೊತೆಗಾರ ನೀ ಎನಗೆ ಆಧಾರ

ಪ್ರೀತಿಯದು ಜೊತೆಯಿರಲು ಸುಖಮಯವು ಸಂಸಾರ

Friday, May 28, 2010

ಭಾವನೆಗಳ ಬುತ್ತಿ

ಭಾವನೆಗಳ ಬುತ್ತಿಯ ಬಿಚ್ಚಿಡುತ್ತಿದ್ದೇನೆ

ನೂರೆಂಟು ಬಗೆಯ ಖಾದ್ಯಗಳು ಅದರಲ್ಲಿ

ಒಮ್ಮೆ ಅದರ ಘಮಲು ಮನಸಿಗೆ ಹಿತವಾದರೆ

ಮತ್ತೊಮ್ಮೆ ಅದರದ್ದೇ ಘಾಟು

ಯಾವುದನ್ನು ಪುರಸ್ಕಾರಿಸುವುದು

ಯಾವುದನ್ನು ತಿರಸ್ಕರಿಸುವುದು

ಒಮ್ಮೊಮ್ಮೆ ಸವಿಯಾದ ಭಾವನೆ

ಮತ್ತೊಮ್ಮೆ ಕಹಿಯಾದ ಭಾವನೆ

ಎರಡಕ್ಕೂ ಸರಿ ಸಮಾನ ಪೈಪೋಟಿ

ಸಕಲ ರುಚಿಗಳ ಸಮ್ಮೇಳನ

ಬುತ್ತಿಯ ಹಂಚಿಕೊಳ್ಳಲು ನನ್ನವರಿಲ್ಲ

ಸಕಲ ಖಾದ್ಯಗಳೂ ನನ್ನವೇ

ಅತ್ತ ಇತ್ತ ಎತ್ತನೋಡಿದರೂ ಯಾರ ಸುಳಿವಿಲ್ಲ

ಆದರೂ ಬುತ್ತಿಯ ಬಿಡಲು ಮನಸ್ಸಿಲ್ಲ

ಭಾವನೆಗಳ ಬುತ್ತಿಯಿಲ್ಲದೇ ಬದುಕಿಲ್ಲ

ದೂರದಿಂದ ಒಂದು ಅಸ್ಪಷ್ಟ ಆಕೃತಿ ನನ್ನೆಡೆಗೆ ಬರುತ್ತಿದೆ

ಬುತ್ತಿಯನ್ನೋಮ್ಮೆ ಅದರೊಡನೆ ಹಂಚಿಕೊಳ್ಳಲಾ?

Thursday, May 6, 2010

ನೀನಾರೇ...

ನೀಳಕೂದಲು, ಹೊಳೆವ ಕಣ್ಗಳು

ಬಂದು ನೆಲೆಸಿಹೆ ಎನ್ನ ಮನದೊಳು

ಬಿಂಕದ ವೈಯಾರಿ, ನೀನಾರೇ...



ಮಿಂಚಿನ ನೋಟ, ಸೊಬಗಿನ ಮೈ ಮಾಟ

ತುಂಟತನದಿ ಆಡುವ ಹುಡುಗಾಟ

ಬೈತಲೆಯ ಸೊಬಗಿ, ನೀನಾರೇ...



ಸರಳ ಸೌಂದರ್ಯ, ತುಸು ಗಾಂಭೀರ್ಯ

ದನಿಯ ಮಧುರ ಮಾಧುರ್ಯ

ನಾಚಿ ನೀರಾದ ಬಾಲೆ, ನೀನಾರೇ...



ಮನದ ಮುಗಿಲಿನಲಿ ಹೂ ಮಳೆಯ ಸುರಿಸಿದಾಕೆ

ಕಣ್ಣಂಚಿನಲೇ ಮಾತನಾಡಿ ಪುಳಕಗೊಂಡಾಕೆ

ಅಕ್ಕರೆಯ ಸಕ್ಕರೆ ಗೊಂಬೆ, ನೀನಾರೇ...

Thursday, April 22, 2010

ಚುಟುಕ - Weekend ಪ್ರೇಮಿ

ಅನುದಿನ ಮಟ ಮಟ ಮಧ್ಯಾನವಾದರೂ ಸರಿಯೇ
ಸೂರ್ಯನ ಕಾಟವಿದ್ದರೂ ಸರಿಯೇ
ದಟ್ಟ ಕಂಬಳಿಯನು ಮುಸುಕು ಹಾಕಿಕೊಂಡು ಮಲಗುವ ಈ ನನ್ನ ರೀತಿ...
ದುರಭ್ಯಾಸವಲ್ಲ HERO...

ಅದೇನಂದರೆ..
ಶನಿವಾರ ಭಾನುವಾರ ನೀವೆನ್ನ ಎಚ್ಚರಿಸುವ ಪರಿಯ ಮೋಡಿಯನನುಭವಿಸಿ
ಪ್ರತಿನಿತ್ಯವೂ WEEKEND ಎಂಬ ಹುಸಿ ಆಶ್ವಾಸನೆ ನೀಡಿ
ಕನವರಿಸಿ ಮಲಗುವ ಹಾಗೆ ಮಾಡುವ ನನ್ನ ಈ ಹುಚ್ಚು ಹೃದಯದ "WEEKEND ಪ್ರೀತಿ"!!!

Wednesday, April 21, 2010

ಮೊಟ್ಟ ಮೊದಲ ಕೇಕ್ ಕಟ್ಟಿಂಗ್

ಫೆಬ್ರವರಿ ೧೪ ೨೦೦೯

ಇವತ್ತಿನ ದಿನವನ್ನ ನಾನು ಮರಿಯೋದಕ್ಕೆ ಆಗೊದಿಲ್ಲ. ಇವತ್ತು ಪ್ರೇಮಿಗಳ ದಿನ ಅನ್ನೋ ಕಾರಣದಿಂದ ಅಲ್ಲ, ಇವತ್ತು ನನ್ನ ಜನ್ಮದಿನ... ನಾನು ನನ್ನ ಪ್ರತೀ ಜನ್ಮದಿನದಂದು ಯಾರೊಬ್ಬರೊಂದಿಗಾದರೂ ಇರ್ತಾ ಇದ್ದೆ. ಆದರೆ ಈ ಸಲ ನನ್ನ ಬಾಡಿಗೆ ಮನೆಯಲ್ಲಿ ನಾನು ಮತ್ತೆ ನನ್ನ ಎಫ್ ಎಂ ರೇಡಿಯೋ ಮಾತ್ರ ಇದ್ದದ್ದು. ಯಾಕೋ ಮನಸ್ಸಿಗೆ ಬೇಸರ ಆಗ್ತಾ ಇತ್ತು. ಕಳೆದವರ್ಷವಷ್ಟೇ ನನ್ನ ಅಪ್ಪನ್ನ ಕಳ್ಕೊಂಡಿದ್ದ ನಾನು ಈ ಬಾರೀನೂ ಅವರನ್ನ, ಮತ್ತೆ ಅಮ್ಮ, ಅಕ್ಕ, ಅಣ್ಣನ್ನ ಮಿಸ್ ಮಾಡ್ಕೋತಾ ಇದೀನಿ. ಅಪ್ಪ ಇದ್ದಾಗ ಮೈಸೂರಿನ ನಮ್ಮ ಮನೆಗೆ ಹೋಗಿ ಮನೆಯವರೆಲ್ಲರ ಜೊತೆ ಸ್ವಲ್ಪ ಹರಟೆ ಹೊಡೆದು ಬೇಕರಿ ತಿನಿಸುಗಳನ್ನ ತರಿಸಿಕೊಂಡು ಸಣ್ಣದಾಗಿ ಪಾರ್ಟಿ ಮಾಡೋದು, ಅದರಲ್ಲೇ ಖುಷಿ ಕಾಣೋದು, ಅಣ್ಣನ ತಲೆ ತಿಂದು ಯಾವುದಾದರೂ ಸಿನಿಮಾಕೆ ಹೋಗೋದು, ಸಂಜೆ ಪಾನೀಪೂರಿ ತಿನ್ನೋದು ಮನೆಗೆ ಬಂದು ಊಟ ಮಾಡಲ್ಲ ಅಂತ ಅಮ್ಮನಹತ್ತಿರ ಬೈಸ್ಕೊಳೋದು. :)

ಈ ಸಲ ಯಾರಿದ್ದಾರೆ... ಹಾಗೇ ಬೇಸರದಲ್ಲಿ ರಾತ್ರಿ ಕಳಿತಾ ಇದ್ದಾಗ ಟ್ರಿಣ್ ಟ್ರಿಣ್ ಅಂತ ನನ್ನ ಮೊಬೈಲ್ ಮೆಸ್ಸೇಜ್ ಬಂತು ಅಂತ ಹೇಳ್ತು. ಹುಟ್ಟುಹಬ್ಬನ್ನ ಆಫೀಸಿದ್ದಿದ್ದ್ರೆ ನನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಆಚರಿಸ್ತಾ ಇದ್ದೆ. ಆದ್ರೆ ಇವತ್ತು ರಜಾದಿನ ಬೇರೆ, ಹೇಳೀ ಕೇಳೀ ಎರಡನೇ ಶನಿವಾರ. ಹಾಗಾಗಿ ಮನೆಯಲ್ಲೇ ಇದ್ದ ನಾನು ಬೆಳಗಿನ ಯೋಗಾ ಕ್ಲಾಸಿಗೆ ಹೋಗುವ ಬಗ್ಗೆ ಯೋಚ್ನೆ ಮಾಡ್ತಾ ಮೆಸೇಜ್ ನೋಡಿದೆ. ಘಂಟೆ ಸರಿ ಸುಮಾರು ೪.೧೫ ಅನ್ಸತ್ತೆ, ನನ್ನ ಅಣ್ಣ ಮೆಸ್ಸೇಜ್ ಮಾಡಿದ್ದ. "ಇಷ್ಟು ಹೊತ್ತಿಗೆ ಬಹುಷಃ ಅಮ್ಮನಿಗೆ ಹೊಟ್ಟೇ ನೋವ್ತಾ ಇತ್ತು ಅಂತ ಕಾಣತ್ತೆ" ಅನ್ನೋ ಸಂದೇಶ ಇತ್ತು. ನಾನು ಏನು ಅಂತ ಯೋಚ್ನೆ ಮಾಡಿದ್ಮೇಲೆ ಗೊತ್ತಗಿದ್ದು... ಇದು ನಾನು ಹುಟ್ಟಿದಾಗ ಅಂದರೆ __ ವರ್ಷಗಳ ಹಿಂದಿನ ಮಾತನ್ನ ಅಣ್ಣ ಹೇಳ್ತಾ ಇದಾನೆ ಅಂತ. ಖುಷಿ ಆಯ್ತು :) ಮೆಸ್ಸೇಜ್ ಮುಂದುವರೆದಿತ್ತು: "ಅಪ್ಪ ನನ್ನ ಪಕ್ಕದಿಂದ ಎದ್ದು ಅಮ್ಮನ ಮಾತಾಡಿಸೊಕೆ ಹೋಗಿದ್ರು, ಅಮ್ಮ ಅಪ್ಪನಿಗೆ First shift ಇದ್ದದ್ದರಿಂದ ತಿಂಡಿಮಾಡಲು ಹಿಡಿದಿದ್ದ ಪಾತ್ರೆನ ದಾರಿಯಲ್ಲೇ ಇಟ್ಟು ಏದುಸಿರು ಬಿಡ್ತಾ ಇದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ ನಾನು ಮಲಗಿಬಿಟ್ಟೆ"

ಇಷ್ಟಕ್ಕೆ ನಾನು __ ವರ್ಷ ಹಿಂದಕ್ಕೆ ಹೋಗಿಬಿಟ್ಟಿದ್ದೆ :) ನನ್ನ ಅಣ್ಣನ ಬರಹ ಹಾಗಿತ್ತು. ಎಲ್ಲಾ ನನ್ನ ಕಣ್ಮುಂದೇ ನಡಿತಾಇದ್ಯೇನೋ ಅನ್ನೋ ಹಾಗೆ. ಅಷ್ಟರಲ್ಲಿ ಮತ್ತೊಮ್ಮೆ ಟ್ರಿಣ್ ಟ್ರಿಣ್.... ಯಾರದ್ದೋ ಶುಭಾಷಯ ಅಂತ ತಿಳ್ಕೊಂಡು ಮೆಸ್ಸೇಜ್ ನೋಡಿದೆ, ಮತ್ತೆ ನನ್ನ ಅಣ್ಣನದೇ ಮೆಸ್ಸೇಜ್. ಅಣ್ಣ __ ವರ್ಷಹಿಂದಿನ ಘಟನೆಯನ್ನ ನನ್ನ ಮುಂದೆ ಎಳೆ ಎಳೆಯಾಗಿ ಬಿಡಿಸಿಡ್ತಾ ಇದ್ದ. "ಸುಮಾರು ೭ ಘಂಟೆ ಇರಬಹುದು, ಬೀಗ ತೆಕ್ಕೊಂಡು ಅಪ್ಪ ಒಳಗೆ ಬಂದ್ರು. ಬಂದವರೇ ನನ್ನನ್ನ ಇವತ್ತು ನೀನು ಸ್ಕೂಲಿಗೆ ಹೋಗಬೇಡ ಅಂದ್ರು. ರಾತ್ರಿ ಕೂತ್ಕೊಂಡು ಬರೆದಿದ್ದ ಹೋಂವರ್ಕ್ ಮುದುಕೀ ಜಯ ಮಿಸ್ಸಿಗೆ ತೋರಿಸೋಕೆ ಆಗೊದಿಲ್ವಲ್ಲ ಅಂತ ಬೇಜಾರಾಯ್ತು" (ಅಣ್ಣನ ಸ್ಕೂಲಿನಲ್ಲಿ ೩ ಜನ ಜಯ ಅನ್ನೋ ಟೀಚರ್ ಇದ್ದಿದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡಹೆಸರು)

ನಾನು ಅಣ್ಣನ ಮೆಸೇಜ್ ಗಳನ್ನ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತಸಪಡ್ತಾ ಇದ್ದೆ. ಮುಂದೇನಾಯ್ತು... ಹೇಳು... ನನು ಅಣ್ಣನಿಗೆ ಪ್ರತ್ಯುತ್ತರ ಕೊಟ್ಟೆ. ಅಣ್ಣ ಮುಂದುವರಿಸಿದ್ದ: "ನನಗಿನ್ನೂ ನೆನಪಿದೆ ಆವತ್ತು ಗುಲಾಬಿ ಬಣ್ಣದ ಟೀ ಷರ್ಟ್ ಹಾಕ್ಕೊಂಡಿದ್ದೆ, ಆವತ್ತು ಫಸ್ಟ್ ಟೈಮ್ ಅಷ್ಟು ಬೆಳಿಗ್ಗೆ ೫ ನಿಮಿಷ ಬಾಗಿಲ ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದೆ, ಆವತ್ತು ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮನೆ ಯಜಮಾನನ ಹೆಂಡತಿ 'ನಿನಗೊಬ್ಬ ತಮ್ಮ ಹುಟ್ಟಿದಾನೆ ಕಣೋ' ಅಂದ್ರು. ಆಗ ನನ್ಗೆ ವಿವರಿಸಲಾಗದ ಅವ್ಯಕ್ತ ಭಾವನೆಗಳ ಕ್ಷಣ. ಏನೋ ತರೋದಿಕ್ಕೆ ಅಂತ ಅಪ್ಪ ಹೊರಗಡೆ ಹೋಗಿದ್ರು. ಅವರು ಬರೋ ದಾರೀನೇ ಕಾಯ್ತಾಇದ್ದೆ"

ಅಣ್ಣ ನನಗೆ ಈ ರೀತಿ ಮೆಸ್ಸೇಜಿನಲ್ಲಿ __ ವರ್ಷದ ಹಿಂದಿನ ಘಟನೆಯನ್ನ ಹೇಳ್ತಾಇದ್ರೆ ನಾನೇ ಅಲ್ಲಿದ್ದು ಎಲ್ಲದನ್ನ ನೋಡ್ತಾ ಇದೀನೇನೋ ಅನ್ನೋರೀತಿ ಖುಷಿ ಆಗ್ತಾ ಇತ್ತು. ಮತ್ತೊಮ್ಮೆ ಟ್ರಿನ್ ಟ್ರಿನ್ ಅಂತ ರಿಂಗಣಿಸಿದ ನನ್ನ ಮೊಬೈಲ್ ನನ್ನ ಹುಟ್ಟಿದ ಸಂಭ್ರಮದ ಕಥೆ ಹೇಳಲು ಬೆಳಕ ಚೆಲ್ಲಿ ನಕ್ಕಿತ್ತು. "ಅಪ್ಪ ನನ್ನನ್ನ ಸೈಕಲ್ಲಿನಲ್ಲಿ ಕೂರಿಸ್ಕೊಂಡು ಕಮಲಾರಾಮನ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಅಮ್ಮ ಮಲಗಿದ್ರು. ನನ್ನನ ನೋಡಿ ನಕ್ಕರು. ಆಯ ಒಳಗಿನಿಂದ ಬಟ್ಟೆಯಲ್ಲಿ ಸುತ್ತಿದ ನಿನ್ನನ್ನ ಸಂಭ್ರಮದಿಂದ ತಂದು ತೋರಿಸಿ ನಿನ್ನ ತಮ್ಮನ್ನ ನೋಡಪ್ಪಾ ಅಂದ್ರು". ನಿಜ ಅಲ್ವ... ಆ ಪುಟ್ಟ ಮನಸ್ಸಿನ ಕಂದನಿಗೆ ತನ್ನ ತಮ್ಮನನ್ನ ನೋಡಲು ಎಷ್ಟು ಕಾತರ ಇದ್ದಿರಬಹುದು, ಮನಸ್ಸಲ್ಲಿ ಏನೇನು ಭಾವನೆಗಳು ಮೂಡಿರಬಹುದು... ಆ ಭಾವನೆಗಳು ನನ್ನ ಅಣ್ಣನ ಮತ್ತೊಂದು ಮೆಸ್ಸೇಜಿನಲ್ಲಿ ಮುಂದುವರೆದಿತ್ತು. "ನಿನ್ನ ಕಣ್ಣುಮುಚ್ಚಿದ ಮುಖ, ಆ ಪುಟ್ಟ ಕೈ ಬೆರಳುಗಳು, ಮಧ್ಯ ಮಧ್ಯ ಹೊರಡುತ್ತಿದ್ದ ಉವ್ವ್ಯಾ ಉವ್ವ್ಯಾ ರಾಗ... ನನಗೆ ಅರಿವಿಲ್ಲದಂತೆ ನಿನ್ನನ್ನು ಮುಟ್ಟಲು ನಿನ್ನ ಕಡೆ ಹೆಜ್ಜೆ ಹಾಕಿದ್ದೆ. ಮುಟ್ಟಬಾರದು !!! ದೂರ ನಿಂತ್ಕೊ !! ಅಮ್ಮ ಅಲ್ಲಿಂದ್ಲೇ ಗದರಿದ್ರು"

ಇಲ್ಲಿಗೆ ನನ್ನ ಹುಟ್ಟಿದ ಘಳಿಗೆಯ ಸಂಭ್ರಮವನ್ನ ಅಣ್ಣ ನನ್ನ ಮುಂದಿಟ್ಟಿದ್ದ. ಇದಕ್ಕಿಂತಾ ಒಂದು ಒಳ್ಳೇ ಉಡುಗೊರೆ ಬೇರೆ ಏನೂ ಇರಲಿಕ್ಕಿಲ್ಲ. ಆ ಮೆಸ್ಸೇಜನ್ನ ಓದಿ ಸಂಭ್ರಮಿಸೋದ್ರಲ್ಲಿ ಅಣ್ಣ ನಿದ್ದೆ ಬಿಟ್ಟು ನನಗೆ ಮೆಸ್ಸೇಜ್ ಮಾಡ್ತಾಇರೋದು ನನ್ನ ಗಮನಕ್ಕೆ ಬಾರದೇ ಹೋಗಿತ್ತು. ಸಮಯ ಸುಮಾರು ೫.೧೫ ಆಗಿತ್ತು. ಅಣ್ಣ ತನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿದ್ದ, ರಾತ್ರಿಯೆಲ್ಲಾ ಅವನ ವಿಧ್ಯಾರ್ಥಿಗಳ ಉತ್ತರಪತ್ರಿಕೆಯನ್ನ ತಿದ್ದುತ್ತಾ ಅದರಮಧ್ಯೆ ನನಗೆ ಮೆಸ್ಸೇಜ್ ಮಾಡ್ತಾ ಇದ್ದ. ಆ ಮೆಸ್ಸೇಜ್ಗಳನ್ನ ಓದಿ ಒಳಗೊಳಗೇ ಸಂತಸಪಡುತ್ತಾ ನಾನೂ ಸ್ನಾನಮಾಡಿಕೊಂಡು ನನ್ನ ಯೋಗಾ ಕ್ಲಾಸಿಗೆ ಹೊರಟೆ. ದಿನಪೂರ್ತಿ ನನ್ನ ಕಣ್ ಮುಂದೆ ನನ್ನ ಹುಟ್ಟಿದ ದೃಷ್ಯಾವಳಿಗಳು ತೇಲಿ ಬರುತ್ತಿದ್ದವು.


ಯೋಗಾ ಕ್ಲಾಸಿನಿಂದ ಮನೆಗೆ ಬಂದೆ. ಅಣ್ಣನ ಮೆಸ್ಸೇಜ್ ಇತ್ತು. "ಬಿಡುವಿದ್ದಾಗ ಕಾಲ್ ಮಾಡು, ನಿನ್ನ ಬಗ್ಗೆ ಒಂದು ಕವನ ಬರ್ದಿದೀನಿ" ಒಂದು ಕ್ಷಣ ಕೂಡಾ ತಡ ಮಾಡದೇ ಅಣ್ಣನಿಗೆ ಕರೆನೀಡಿದೆ. ಅವನು ಬರೆದ ಕವನ ಓದಿದ. ನಾನು ಹುಟ್ಟಿದಾಗಿನಿಂದಾ ನಾನು ಬೆಳೆದುಬಂದ ದಾರಿಯ ಮೈಲಿಗಲ್ಲುಗಳನ್ನು ಗುರುತಿಸಿ ಒಂದು ಸೊಗಸಾದ ಕವನ ಬರೆದಿದ್ದ. ಆ ಕವನವನ್ನ ಕೇಳಿ ನನಗೆ ವ್ಯಕ್ತಪಡಿಸಲಾಗದ ಸಂತಸವಾಗ್ತಾ ಇತ್ತು. :) ನಿಂತಲ್ಲೇ ಮುಗುಳ್ನಕ್ಕೆ, ಅಣ್ಣನನ್ನನ್ನು ಎಷ್ಟು ಇಷ್ಟಾ ಪಡ್ತಾನೆ ಅನ್ನೋದನ್ನ ಕಂಡುಕೊಂಡೆ. ನನ್ನ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟಿದ್ದ ನನ್ನ ಮುದ್ದಿನ ಅಣ್ಣ. ಕಾಲ ಇವತ್ತಿನ ರೀತಿ ನಾಳೆ ಇರೋದಿಲ್ಲ, ಆದರೆ ನಾನು ಆ ಭಗವಂತನನ್ನ ಇದಕ್ಕಿಂತಾ ಚೆನ್ನಾಗಿ ಇರದಿದ್ದರೂ ಪರವಾಗಿಲ್ಲ, ಹೀಗೇ ಮುಂದುವರೀತಾ ಇರ್ಲಿ ನಮ್ಮ ಪ್ರೀತಿ ವಿಶ್ವಾಸ ಅಂತ ಕೋರಿಕೊಂಡೆ.

ಸಾಯಂಕಾಲ ಯೋಗಾ ಕ್ಲಾಸಿನಲ್ಲಿ ನನ್ನ ಜನ್ಮದಿನದ ಆಚರಣೆ ಭಿನ್ನವಾಗಿತ್ತು. ನನ್ನ ತರಗತಿಯ ಗುರುಗಳು ನನಗೇ ತಿಳಿಯದಂತೆ ಒಂದು ಕೇಕ್ ತರಿಸಿದ್ದರು. ಎಲ್ಲರಮುಂದೆ ನಾನು ಆ ಕೇಕನ್ನ ಕತ್ತರಿಸಿದೆ. ಅದು ನನ್ನ ಜೀವನದ ಮೊಟ್ಟ ಮೊದಲ ಕೇಕ್ ಕಟ್ಟಿಂಗ್ :) ಈಗ ಸಮಯ ಸುಮಾರು ರಾತ್ರಿ ೧೨.೩೦ ನನ್ನ ಇಂದಿನ ಜನ್ಮದಿನದ ಆಚರಣೆಯನ್ನ ಮೆಲುಕುಹಾಕುತ್ತಾ ಮಲಗುತ್ತಿದ್ದೇನೆ...

(ಲೇಖನ ಬರೆದು ಬಹಳ ತಿಂಗಳಾಯ್ತು. ಆದ್ರೆ ನಾ ಬರೆದಿದ್ದ ಪುಸ್ತಕ ನನ್ನ ಕೈಗೆ ಸಿಕ್ಕದೇ ಕಣ್ಣಾಮುಚ್ಚೇ ಕಾಡೇಗೂಡೇ ಆಡ್ತಾ ಇತ್ತು... ಇವತ್ತಿಗೆ ಸಿಕ್ಕೇ ಬಿಡ್ತು :) ಅದಕ್ಕೇ ನಿಮ್ಮೊಂದಿಗೆ ಹಂಚಿಕೊಳ್ತಾ ಇದೀನಿ....)

Monday, April 12, 2010

"ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ"

ಪ್ರತೀ ದಿನ ಕಂಪ್ಯೂಟರಿನ ಕೆಲಸ ಬಿಟ್ಟರೆ ನನ್ನ ಚಟುವಟಿಕೆಗಳು ಮತ್ಯಾವುದರಲ್ಲೂ ಹೆಚ್ಚಿಗೆ ಇರದ ದಿನಗಳ ಮಾತು. ನಾನು ಅಂದು ನನ್ನ ಗೆಳೆಯರೊಡನೆ ಚಾರಣಕ್ಕೆ ಹೊರಟಿದ್ದೆ. ಹೊಸಾ ತಂಡ, ಹೊಸಾ ಜನ, ಹೊಸಾ ಪ್ರದೇಶ... ಎಲ್ಲವೂ ಹೊಸತಾಗಿತ್ತು. ಯಾವುದೇ ಪ್ರವಾಸದಲ್ಲಾಗಲಿ, ಅಥವಾ ಸಭೆ ಸಮಾರಂಭಗಳಲ್ಲಾಗಲಿ ನಮಗೆ ಮೊದಲು ಯಾರ ಪರಿಚಯವೂ ಇಲ್ಲದಿದ್ದರೂ ಅಲ್ಲಿಂದ ಹೊರ ನಡೆವಾಗ ಯಾರದ್ದಾದರೂ ಪರಿಚಯ ಆಗಿರುತ್ತದ್ದೆ.

ನನಗೆ ನಿನ್ನ ಪರಿಚಯವೂ ಹಾಗೇ ಆದದ್ದು. ನಾವೆಲ್ಲಾ ಅಂದು ರಾತ್ರಿ ಬೆಂಗಳೂರಿನಿಂದ ಹೊರಟು ನಮ್ಮ ಪ್ರವಾಸದ ತಾಣದೆಡೆಗೆ ತೆರಳುವಾಗ ನೀನಾರೋ ನಾನಾರೋ... ಆ ಬಸ್ಸಿನ ಒಂದು ಮೂಲೆಯಲ್ಲಿ ನಾನು ಕುಳಿತಿದ್ದರೆ ನೀನೆಲ್ಲಿದ್ದೆಯೋ ನನಗಂತೂ ನೆನಪಿಲ್ಲ. ನಾನು ನನ್ನಷ್ಟಕ್ಕೆ ಕಿಟಕಿಯಿಂದ ಇಣುಕಿ ಹೊರ ಪ್ರಪಂಚವನ್ನು ನೋಡುತ್ತಾ ಕುಳಿತಿದ್ದೆ. ಮೊದಲಿಗೆ ನನ್ನ ಸ್ನೇಹಿತನಿಂದ ನಿನ್ನ ಪರಿಚಯವಾದರೂ ಬರಿಯ ನಗೆ ಬೀರಿ ಸುಮ್ಮನಾದೆ. ಅಲ್ಲಿಂದ ನಮ್ಮ ತಂಡ ಪ್ರವಾಸ ಮಾಡಲಿದ್ದ ಸ್ಥಳಕ್ಕೆ ಬಂದಾಗ ಕತ್ತಲೆಯನ್ನ ಸೀಳಿಕೊಂಡು ಸೂರ್ಯದೇವ ನಮಗೆಲ್ಲ ಶುಭೋದಯವನ್ನ ಸಾರಿದ್ದ. ಮಾರ್ಗ ಕಡಿದಾದ್ದರಿಂದ ನಾವೆಲ್ಲಾ ಅಲ್ಲಿದ್ದ ಮಿನಿ ಲಾರಿಯೊಂದನ್ನೇರಿ ಪಯಣವನ್ನು ಮುಂದುವರೆಸಿದ್ದೆವು. ನಾನು ನನ್ನಷ್ಟಕ್ಕೇ ನನ್ನ ಕ್ಯಾಮರಾ ಕಣ್ಣಿನಿಂದ ಸುತ್ತಲ ಪರಿಸರವನ್ನ ನೋಡುತ್ತಿದ್ದೆ. ಆಗ ಮೊದಲಬಾರಿಗೆ ನೀನು ನನ್ನೊಡನೆ ಮಾತಿಗಿಳಿದೆ. "ಬರೀ ನಿಮ್ದೇ ಫೋಟೋ ತೆಕ್ಕೋತೀರಾ ? ನಾವೂ ಎಲ್ಲಾ ಇಲ್ಲೇ ಇದೀವಲ್ಲ"... ಸರಿ... ಮಾತಿಗಿಳಿದಾಯಿತು. "ಅದಕ್ಕೇನಂತೆ, ನಿಮ್ದೂ ಒಂದ್ ಫೋಟೋ ತೆಗೀತೀನಿ" ಅಂದು ನಿನ್ನದೂ ಒಂದು ಫೋಟೋವನ್ನ ತೆಗೆದಿದ್ದೆ. ತದನಂತರ ನಿನ್ನ ಈ-ಮೈಲ್ ಐಡಿಯನ್ನು ನನಗೆ ತಿಳಿಸಿ "ಈ ಫೋಟೋನ ಮೈಲ್ ಮಾಡಿ, ಮರೀಬೇಡಿ" ಅಂದಿದ್ದೆ- ಅಷ್ಟಕ್ಕೇ ನಮ್ಮ ಮಾತು ಅಲ್ಲಿಗೆ ಮುಗಿದಿತ್ತು.

ನಮ್ಮ ಚಾರಣದ ಪ್ರಾರಂಭದ ಹಂತದಲ್ಲಿ ಹೆಚ್ಚಾಗಿ ಕಷ್ಟಕರವೆನಿಸಿರದಿದ್ದರೂ ನಮ್ಮಲ್ಲಿ ಕೆಲವರು ತುಸು ಬಳಲಿದ್ದರು, ನೀನೂ ಅದರಲ್ಲೊಬ್ಬಳು. ಚಾರಣದ ಮೊದಲ ಹಂತದಲ್ಲಿ ಎಲ್ಲಾ ಒಟ್ಟಿಗೇ ಮಾತನಾಡುತ್ತಾ ಹೋದಂತೆ ನೀನೂ ನನ್ನೊಡನೆ ಮಾತಿಗಿಳಿದೆ. ಆ ಗುಂಪಿನಲ್ಲಿ ನನಗೆ ಪರಿಚಯವಿದ್ದ ಒಬ್ಬನೇ ಗೆಳೆಯ ತುಸು ದೂರದಲ್ಲಿ ಹೋಗುತ್ತಿದ್ದರಿಂದ ನಿನ್ನೊಡನೆ ಮಾತನಾಡುತ್ತಾ ನಾನೂ ಹೆಜ್ಜೆ ಹಾಕತೊಡಗಿದೆ. ಅದು ನಿನ್ನ ಮೊದಲನೇ ಚಾರಣ. ನಾನು ವರ್ಷಕ್ಕೊಂದುಬಾರಿ ತಪ್ಪದೇ ಚಾರಣಕ್ಕೆ ಹೋಗುತ್ತಿದ್ದ ಚಾರಣಿಗ. ನನಗೆ ಚಾರಣದಲ್ಲಿದ್ದ ಅನುಭವವನ್ನ ಹಂಚಿಕೊಳ್ಳುತ್ತಾ ನಿನ್ನೊಡನೆ ನಡೆಯುತ್ತಿದ್ದೆ. ಒಂದು ಹಂತದಲ್ಲಿ ಚಾರಣದ ಹಾದಿ ಕಡಿದಾಗಿತ್ತು ಅಲ್ಲಿ ನಿನ್ನಿಂದ ಹತ್ತಲು ತುಸು ಕಷ್ಟವೆನಿಸಿದ್ದರಿಂದ ನನ್ನ ಸಹಾಯ ಹಸ್ತವನ್ನ ನಿನ್ನೆಡೆಗೆ ಚಾಚಿದ್ದೆ. ಅಲ್ಲಿಂದ ಮುಂದೆ ಎಲ್ಲೇ ಕಡಿದಾದ ದಾರಿಯಿದ್ದರೂ ನಾನು ನಿನ್ನ ಸಹಾಯಕ್ಕೆ ನಿಂತಿರುತ್ತಿದ್ದೆ, ಕೈ ಹಿಡಿದು ಮೇಲೆ ಹತ್ತಿಸುತ್ತಿದ್ದೆ.

ನಿನ್ನಲ್ಲಿ ಏನೋ ವಿಷೇಶತೆ ಇರುವ ಹಾಗನಿಸುತ್ತಿತ್ತು. ಎಲ್ಲರಂತೆ ನೀನು ಅತಿಯಾಗಿ ಅಲಂಕಾರ ಮಾಡಿರಲಿಲ್ಲ ನಿನ್ನಲ್ಲಿ ಮುಗ್ಧತೆ ಮತ್ತು ಸರಳತೆ ಎದ್ದು ಕಾಣುತ್ತಿತ್ತು. ನಿನ್ನ ಸ್ನೇಹಮಾಡಬೇಕೆನಿಸಿತು. ಸಾಮಾನ್ಯವಾಗಿ ಬಹುಪಾಲು ಹುಡುಗರಿಗೆ ಗರ್ಲ್ ಫ್ರೆಂಡ್ಸ್ ಇದ್ದೇ ಇರುತ್ತಾರೆ. ಎಲ್ಲೋ ನೂರಕ್ಕೆ ೧೦ ಜನಮಾತ್ರ ಆ ತಾಪತ್ರೇಯ (?) ದಿಂದ ದೂರ ಉಳಿದಿರುತ್ತಾರೆ. ಆ ಹತ್ತು ಜನರಲ್ಲಿ ನಾನೂ ಒಬ್ಬನಾಗಿದ್ದೆ. ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಕೆಲವು ಘಟನೆಗಳು ಇದ್ದೇ ಇರುತ್ತದೆ. ನನ್ನ ಜೀವನದಲ್ಲಿಕೂಡಾ ಹಲವು ಘಟನೆಗಳು ನಡೆದಿವೆ. ಆದರೆ ನಿನ್ನೊಡನೆ ಕಳೆದ ಆ ೨ ದಿನಕೂಡಾ ಆ ಘಟನೆಗಳ ಸಾಲಿನಲ್ಲಿ ಬಂದು ನಿಲ್ಲುತ್ತವೆಂದು ನಾನು ಎಣಿಸಿರಲಿಲ್ಲ.

ಬಿಸಿಲಿನ ತಾಪ ಏರುತ್ತಲಿತ್ತು. ನೀನು ತಲೆಯಮೇಲೆ ಯಾವುದೇ cap ಹಾಕಿರಲಿಲ್ಲ. ಬಹುಷಃ ಅನುಭವದ ಕೊರತೆ ಅಂತ ಕಾಣ್ಸತ್ತೆ. ನಾನು ಪೂರ್ವಸಿದ್ದತೆ ಮಾಡಿಕೊಂಡೇ ಬಂದಿದ್ದೆ. ತಲೆಯಮೇಲೆ ಒಂದು ಕ್ಯಾಪ್, ಸೊಂಟಕ್ಕೊಂದು ಪೌಚ್, ಅದರಲ್ಲಿ ಕೆಲವು ಪೆಪ್ಪರ್ಮೆಂಟ್ ಗಳು. ಪುಟ್ಟದೊಂದು ನೀರಿನ ಬಾಟಲಿ, ಆಪತ್ಕಾಲಕ್ಕೆ ಗಾಯಗಳಿಗೆ ಹಚ್ಚುವ ಒಂದು ತೈಲ... ಇತ್ಯಾದಿ. ನಿನ್ನ ಪಾಡು ನೋಡಿ ಅಯ್ಯೋ ಅನ್ನಿಸ್ತಾ ಇತ್ತು ನನ್ಗೆ. ಹುಡುಗರಾದರೆ ಗಟ್ಟಿಗರು.. ಹೇಗಾದರೂ ತಡೆದುಕೊಳ್ಳ್ತಾರೆ. ಆದರೆ ಹುಡುಗಿಯರು ಸ್ವಲ್ಪಮಟ್ಟಿಗೆ ಕೋಮಲಾಂಗಿಯರು. ಬಿಸಿಲಿನ ತಾಪ ತಡೆಯಲೆಂದು Sunscreen Lotionಗಳು ತುಟಿ ಒಡೆಯದಿರಲೆಂದು Lip Guard ಗಳು ಇತ್ಯಾದಿ ಇಲ್ಲದೇ ಹೊರಗೆ ಬಾರದವರು. ನಾನು ನನ್ನ ತಲೆಏರಿದ್ದ capಅನ್ನ ತೆಗೆದು ನಿನಗೆ ಕೊಟ್ಟೆ. ಬಿಸಿಲಿನ ತಾಪದಲ್ಲೂ ನಿನ್ನ ಮೊಗದಲ್ಲಿ ಮಂದಹಾಸ ಮಿನುಗಿತ್ತು. ಒಟ್ಟಿನಲ್ಲಿ ನನಗೆ ಪದೇ ಪದೇ ಹಿಂದಿಯ ಮಧುರ ಗೀತೆ "ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ" ನೆನಪಿಗೆ ಬರುತ್ತಲಿತ್ತು.

ನಾ ಕೊಟ್ಟ capಅನ್ನ ತಲೆಮೇಲೇರಿಸಿ ಕಡಿದಾದ (ಅಷ್ಟೇನೂ ಕಡಿದಾಗಿರಲಿಲ್ಲದ) ದಾರಿಯಲ್ಲಿ ತ್ರಾಸಪಟ್ಟು ಅಲ್ಲಲ್ಲಿ ಬಂಡೆಗಳಮೇಲೆ ಕುಳಿತು ಮತ್ತೆ ಮರಗಳ ನೆರಳಿನಲ್ಲಿ ವಿಶ್ರಮಿಸಿ ಮುಂದೆ ಬರುತ್ತಿದ್ದ ನಿನ್ನಪಾಡು ನೋಡಿ ಯಾರಿಗಾದರೂ "ಅಯ್ಯೋ ಪಾಪದ್ ಹುಡ್ಗಿ, ಯಾಕ್ ಅಷ್ಟು ಕಷ್ಟಾಪಟ್ಕೊಂಡ್ ಹೋಗ್ಬೇಕೋ, ಸುಮ್ನೆ ಮನೆಲಿ ಕೂತ್ರೆ ಆಗಲ್ವಾ ???" ಅಂತ ಅನ್ನಿಸೋ ಹಾಗಿತ್ತು . ಅಂತೂ ಇಂತೂ ಆ ಗುಡ್ಡದ ಅರ್ಧ ದಾರಿ ಕ್ರಮಿಸಿಯಾಯಿತು. ನಾನು ಮಾರ್ಗಮಧ್ಯದಲ್ಲಿ ಅವಕಾಶ ಸಿಕ್ಕಲ್ಲೆಲ್ಲಾ ಆ ಪ್ರಕೃತಿಯ ಸೊಬಗನ್ನ ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾ ಹೋದೆ. ಅದರ ಮಧ್ಯೆ ನನಗರಿವಿಲ್ಲದಂತೇ ನಿನ್ನ ಕೆಲವು ತುಣುಕುಗಳೂ ಸೆರೆಯಾಗಿದ್ದವು. ಅರ್ಧ ದಾರಿ ಕ್ರಮಿಸಿದಮೇಲೆ ಮಿಕ್ಕಿದ್ದ ಅರ್ಧ ದಾರಿ ಬಲು ತ್ರಾಸದಾಯಕವಾಗಿ ಕಾಣತೊಡಗಿತು. ನಾನೊಬ್ಬನೇ ಇದ್ದಲ್ಲಿ ಬಹುಷಃ ಪೂರ್ತಿಯಾಗಿ ಹತ್ತಿಬಿಡುತ್ತಿದ್ದೆ. ಆದರೆ ನಿನ್ನ ಮೊಗದಲ್ಲಿ "ನನ್ಗೆ ಯಾರೂ ಹೆಲ್ಪ್ ಮಾಡ್ತಾ ಇಲ್ಲ, ನನ್ ಜೊತೆ ಇರು, ಪ್ಲೀಸ್" ಅನ್ನೊ ಭಾವನೆ ಎದ್ದು ಕಾಣುತ್ತಿತ್ತು. ಸರಿ ಆದದ್ದು ಆಗಿಹೋಗಲಿ ಅಂತ ಚಾರಣವನ್ನ ಅಲ್ಲಿಗೇ ನಿಲ್ಲಿಸಿ ಸ್ವಲ್ಪ ಹೊತ್ತು ನಾವು ಮತ್ತೆ ಹಲವರು ಅಲ್ಲಿಯೇ ಕುಳಿತು ಆ ಸೌಂದರ್ಯವನ್ನ ಸವಿಯುತ್ತಾ ಕೆಲಹೊತ್ತು ಕಾಲ ಮುಂದೂಡಿದೆವು. ಹೇಗೋ ಮಾಡಿ ಅರ್ಧ ಹತ್ತಿದ್ದೇನೋ ಆಯಿತು, ಇನ್ನು ಇಳಿಯೋದು ಹೇಗೇ ??? ಹತ್ತುವಾಗ ಸ್ವಲ್ಪ ಸುಲಭವಾದರೂ ಇಳಿಯುವಾಗ ನಮ್ಮ ದೇಹದ ಸಮತೋಲನ ಅತ್ಯಗತ್ಯ. ಕಾಲು ಜಾರಿದರೆ ಸೀದಾ ಕೆಳಗಿನ ಬಂಡೆಗಳಿಗೆ ಢಿಕ್ಕಿ ಹೊಡೆಯುವುದು ಖಂಡಿತ. ನಮ್ಮಲ್ಲಿ ಕೆಲವರು ಜೊತೆಗೆ ತಂದಿದ್ದ ಕೋಲಿನ ಸಹಾಯ ಪಡೆದು ಇಳಿದರೆ, ನೀನು ಮತ್ತೆ ನಿನ್ನ ಬೆಂಬಲಿಗರು ಬಾಲ್ಯದ "ಜಾರುಬಂಡಿ" ಯನ್ನ ಮತ್ತೆ ನೆನಪಿಸಿಕೊಂಡು ಜಾರುತ್ತಾ ಇಳಿದಿರಿ.

ನಾವೆಲ್ಲಾ ಪ್ರವಾಸವನ್ನ ಪ್ರಯಾಸದಿಂದ ಮುಗಿಸಿ ಮರಳಿ ನಮ್ಮ ನಮ್ಮ ಗೂಡಿಗೆ ಮರಳಲು ಇದ್ದ ಸಂಪರ್ಕ ಕೊಂಡಿಯನ್ನೇರಿದೆವು. ದಾರಿಯುದ್ದಕ್ಕೂ ಅಂತ್ಯಾಕ್ಷರಿಗಳ ಸುರಿಮಳೆ. ಆ ಬಸ್ಸಿನ ಛಾವಣಿ ಸ್ವಲ್ಪ ಗಟ್ಟಿಮುಟ್ಟಾಗಿದ್ದರಿಂದ ಹಾರಿ ಹೋಗಲಿಲ್ಲವೆನ್ನುವುದು ಸಂತಸದ ವಿಷಯ :) ಅಲ್ಲಿಯೇ ನಿನ್ನ ಮೊಬೈಲ್ ಸಂಖ್ಯೆ, ಈ-ಮೈಲ್ ವಿಳಾಸವನ್ನು ಮತ್ತೊಮ್ಮೆ ಪಡೆದುಕೊಂಡೆ. ನಾವೆಲ್ಲಾ ಹಾಡುತ್ತಾ ಕುಣಿಯುತ್ತಾ ಮರಳಿ ಬೆಂಗಳೂರಿಗೆ ಸೇರಿದ್ದೆವು. ಅದಾದನಂತರದ ಕೆಲವು ದಿನಗಳು ನೀನು ನನ್ನೊಂದಿಗೆ ಮೊಬೈಲಿನಲ್ಲಿ ಮಾತನಾಡಿಸಿದ್ದುಂಟು. SMS ಕಳಿಸಿದ್ದುಂಟು. ಆದರೆ ದಿನ ಕಳೆದಂತೆ ಅವೆಲ್ಲವೂ ಕಡಿಮೆಯಾಗತೊಡಗಿತು.

ನಿಜವಾಗಲೂ ನನಗೆ ನಿನ್ನಲ್ಲಿ ಪ್ರೀತಿ ಪ್ರೇಮ ಅಂಥದ್ದೇನೂ ಇರಲಿಲ್ಲ.. ಆದರೆ ಒಬ್ಬ ಹುಡುಗ ಮತ್ತೊಂದು ಹುಡುಗಿಯಜೊತೆಯಲ್ಲಿ ಸಲುಗೆಇಂದ ಇದ್ದಾಗ ಸಮಾಜದ ಜನ ಮಾತನಾಡುವುದೇ ಪ್ರೇಮದ ಬಗ್ಗೆ. ನಮ್ಮ ನಡುವೆಯೂ ಹಾಗೇ ಆಯಿತು. ನಮ್ಮಿಬ್ಬರ ಸ್ನೇಹಕ್ಕೆ ಬೇರೆಯ ಹೆಸರು ಕಟ್ಟತೊಡಗಿತು ಸಮಾಜ. ಅದು ನನ್ನ ಗಮನಕ್ಕೆ ಬಂದದ್ದು ನನ್ನ ಸ್ನೇಹಿತನಿಂದ. ಬಹುಷಃ ನಿನಗೆ ನಿನ್ನ ಆಫೀಸಿನಲ್ಲೂ ಹಾಗೇ ಹೇಳಿದ್ದಿರಬಹುದು. ಅದೇ ಕಾರಣದಿಂದ ನೀನು ಕ್ರಮೇಣ ಫೋನ್ ಕಾಲ್, ಮೆಸ್ಸೇಜ್ ಎಲ್ಲ ವನ್ನೂ ಕಡಿಮೆಮಾಡಿರಬಹುದು. ನಾನುಕೂಡಾ ಕಡಿಮೆ ಮಾಡಿದೆ. ನೀನು ಚಾಟ್ ನಲ್ಲಿ Online ಇದ್ದರೂ ನಾನು ನಿನ್ನನ್ನು ಮಾತನಾಡಿಸುವ ಧೈರ್ಯ ಮಾಡುತ್ತಿರಲಿಲ್ಲ. ಇಂದಿಗೂ ನಿನ್ನನ್ನು Online ನಲ್ಲಿ ನೋಡುತ್ತೇನೆ. ನಮ್ಮ ಚಾರಣದ ದಿನಗಳನ್ನ ನೆನಪಿಸಿಕೊಳ್ಳುತ್ತೇನೆ, ಹಿಂದಿಯ ಮಧುರ ಗೀತೆ "ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ" ಹಾಗೆಯೇ ನನ್ನ ಕಿವಿಗಳಲ್ಲಿ ಗುಯ್ ಗುಡುತ್ತದೆ.

"ಖೂಬ್ ಸೂರತ್ ಬಾತ್ ಯೇ, ಚಾರ್ ಪಲ್ಕಾ ಸಾಥ್ ಯೇ, ಸಾರೀ ಉಮರ್ ಮುಝ್ಕೋ ರಹೇಗಾ ಯಾದ್"

Wednesday, April 7, 2010

ಚಿಗರೆ ಕಂಗಳ ಚೆಲುವೆ

ನೀ ಬರುವೆ ಪ್ರತಿದಿನವು ನನ್ನ ಕನಸಿನಲ್ಲಿ
ಆನಂದ ಅನುದಿನವು ನನ್ನ ಮನಸಿನಲ್ಲಿ
ಅನುದಿನವು ಹೂದೋಟ, ನಡೆವದಾರಿಯಲ್ಲಿ
ಸಾಕೆನಗೆ ಆ ಕುಡಿನೋಟ, ಮನಕರಗಿತಿಲ್ಲಿ

ನಿನ್ನದೆಂತಹಾ ಬೆರಗು, ಬಿಂಕ ಬಿನ್ನಾಣ
ನಿನ ಚೆಲುವು ಎನಗಾಯ್ತು ಸ್ಪೂರ್ತಿಯಾ ತಾಣ
ಕನಸಲ್ಲೂ ಹೊಂಬೆಳಕು ತಂದ ಬೆಳದಿಂಗಳು
ದಾಳಿಂಬೆ ನಗುಚೆಲ್ಲಿ ಬಿರಿದ ಆ ತುಟಿಗಳು

ಅರಳಿದಾ ಸುಮವು ನಾಚಿ ನೀರಾಗಿರಲು
ನಿನ ಸೌಂದರ್ಯಕೆ ಸಾಟಿ ನೀನೇ ಆಗಿರಲು
ದುಂಬಿಯದು ಝೇಂಕರಿಸಿ ನಿನ್ನರಸಿ ಬಂದಿರಲು
ಸುಮವಲ್ಲವೋ ಮರುಳೆ, ಕುಸುಮಬಾಲೆಯು ಇವಳು

ಸಿಂಹಿಣಿಯ ನಡು ನಿನದು ಬಳುಕುತಾ ನಡೆ ನೀನು
ಗೆಜ್ಜೆನಾದದಿ ನುಡಿಸಿ ಮಧುರಗೀತೆಯ ಜೇನು
ನಿನ ನಾಟ್ಯವಾ ನೋಡಿ ನವಿಲೂ ನಿಂದಿತ್ತು
ಆ ಮಧುರ ಗಾನಕ್ಕೆ ಕೋಗಿಲೆಯೂ ನಾಚಿತ್ತು

ಬೆಳಗಾಯ್ತು ಹಾಳಾಯ್ತು ಆ ನನ್ನ ಸವಿಗನಸು
ಚಿಗರೆ ಕಂಗಳ ಚೆಲುವೆ ನೀ ಸಿಗುವೆ- ಹೇಳುತಿದೆ ಈ ಮನಸು
ಕಾವಲಿರು ನೀ ಎನ್ನ ಸವಿಗನಸುಗಳಿಗೆ
ಕಳೆದು ಹೋಗದಿರಲೆಂದೂ ಈ ಮಧುರ ಘಳಿಗೆ
:D

Monday, April 5, 2010

ತಾಯೇ ನಿನಗೆ ವಂದನೆ...

Human body can bear only upto 45 Del(Unit) of pain. But at the time of giving girth, a woman feels upto 57 del of pain. this is similar to 20 bones getting fractured, at a time. Love your Mother till the end of your life.... ಈ SMS ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದರ ಬಗ್ಗೆ ವಾದ ವಿವಾದ ಮಾಡದೇಇದ್ರೂ ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ಪಡುವ ಕಷ್ಟ ಅಪಾರವಾದದ್ದು ಅನ್ನೋದು ಸತ್ಯ. ಅಂತಹಾ ತಾಯಂದಿರಿಗಾಗಿ, ಪ್ರತಿಯೊಬ್ಬ ಮಹಿಳಾಮಣಿಯರಿಗಾಗಿ ನಾನು ಬರೆದ ಕೆಲವು ಸಾಲುಗಳಿವು. :)

I am dedicating this poem to all such ladies with respect.

ಹಸುಗೂಸು ಹೆರುವಾಗ ನೀ ಕಷ್ಟಪಟ್ಟೆ
ಹೆತ್ತಕಂದನ ಕಂಡು ಸಂತಸವ ಪಟ್ಟೆ
ಹುಟ್ಟಿದ ಹಸುಗೂಸ ಒಲುಮೆಯಲಿ ಸಾಕಿ
ಒಲುಮೆ ಸಿರಿ ಸಂತಸವ ಅನುದಿನವು ಉಣಿಸಿ

ಎದ್ದು ಬಂದಿದ್ದೆ ನಡುರಾತ್ರಿಯಲಿ, ಕೇಳಿ ಕಂದನ ಕೂಗು
ರಟ್ಟೆನೋವಾದರೂ ನೀ ಬಿಡಲಿಲ್ಲ ತೊಟ್ಟಿಲ ತೂಗು
ರಚ್ಚೆಹಿಡಿದತ್ತಾಗ ತೋಳ ತೆಕ್ಕೆಯಲಿ ಮಲಗಿಸಿ
ಮುದ್ದು ಕಂದನ ನಿನ್ನ ಕಣ್ರೆಪ್ಪೆಯಲಿ ಇರಿಸಿ

ಅಯ್ಯೋ ಕಂದನ ಒಡಲು ಬಿಸಿಯಾಯ್ತು
ಹೆತ್ತಕರುಳಿನ ಕೂಗು, ಚಿಂತೆ ನೂರಾಯ್ತು
ಗುಡಿ ಗೋಪುರದಿ ಪೂಜೆ, ಮನೆ ದೇವರಲಿ ಹರಕೆ
ಕಂದನಿಗೆ ಗುಣಮಾಡು, ನಗುತರಿಸು ಮೊಗಕೆ

ಅಪಾರ ಪ್ರೀತಿಯ ಮೊಗೆದು ಬೊಗಸೆಯಲಿ ತುಂಬಿ
ಮಮಕಾರ ತೋರಿ ಮುತ್ತಿನ ಮಳೆ ಸುರಿಸಿ
ನೋವುಗಳ ನುಂಗಿ, ಸಂತಸವ ಉಣಬಡಿಸಿ
ಕಣ್ಣೀರನು ಮರೆಸಿ, ನೋವನ್ನು ತೊರೆಸಿ

ಕೂಸದು ಗೆದ್ದಾಗ ನೀನೂ ಸಂಭ್ರಮಿಸಿ
ಸಿಹಿಯೂಟ ಪ್ರೋತ್ಸಾಹ, ಕಂದನಿಗೆ ಹರಸಿ
ನಿನ್ನೊಲುಮೆಯ ಧಾರೆ ಹರಿದಿರಲಿ ನಿರಂತರ
ನೀಜೊತೆಯಲಿದ್ದರೆ ಸಂಭ್ರಮದ ಸಡಗರ

Wednesday, March 31, 2010

ನನ್ನ ಚಲುವೆ..

ನನ್ನವಳು ಈ ಚಲುವೆ ಬಲು ಅಂದಗಾತಿ
ಸಾಗರದ ಅಲೆಯಂತೆ ನೀ ತೋರುವಾ ಪ್ರೀತಿ…

ಒಮ್ಮೆ ಬಲು ಮೃದುವಾಗಿ ಬಂದೆನ್ನ ಸೋಕಿ
ಮತೊಮ್ಮೆ ರಭಸದಿ ಬಂದೆನ್ನ ತಾಕಿ…

ಕಂಡೆನಾ ಏರಿಳಿತ ನನ್ನವಳ ಪ್ರೀತಿಯಲಿ
ಏನು ಗೊಂದಲವೊ ಏನೊ ಆಕೆಯಾ ಮನಸಿನಲಿ…

ಒಮ್ಮೊಮ್ಮೆ ಸಂತಸದಿ ಬಳಿನನ್ನ ಬರುವಳು
ಮತ್ತೊಮ್ಮೆ ಬೇಸರದಿ ದೊರದಲಿ ಇರುವಳು…

ಚೆಂದುಟಿಯ ಚೆಲುವೆ ಈ ಮೌನ ಬೇಕೇ
ಬಾಯ್ದೆರೆದು ಸವಿನುಡಿಯೆ ಈ ಮೌನ ಸಾಕೇ…

ಮಕ್ಕಳಾಟವು ಚೆನ್ನ ಜಿಂಕೆ ಓಟವು ಚೆನ್ನ
ಓ ನನ್ನ ಚೆಲುವೆ ನೀ ಮಾತಾಡೆ ಬಲುಚೆನ್ನ…

ಮಾತಾಡು ಎನಕೊಡ ಈಗಲಾದರೂ ನಗುತಲಿ
ಕಾದಿಹುದು ಈ ಹೃದಯ ನಿನಗಾಗಿ ತವಕದಲಿ…

Tuesday, March 30, 2010

ನನ್ನ ಕನಸಿನ ಕೂಸಿಗೆ ೩ ವರುಷಗಳು ತುಂಬಲಿದೆ

ನಾನು ಹೈದರಾಬಾದಿನಲ್ಲಿದ್ದಾಗ ಗೆಳೆಯ ವಿಜಯ್ನೊಡನೆ ಮಾತನಾಡುತ್ತಾ ಇದ್ದಾಗ ತಮಾಶೆಗೆಂದು ನಾಲ್ಕು ಸಾಲು ಕವನದರೀತಿಯಲ್ಲಿ ಹೇಳಿದೆ. ಅವನ ಪ್ರೇರೇಪಣೆಯೊಂದಿಗೆ ಬರೆಯಲು ಪ್ರಾರಂಭಿಸಿದ್ದು ಇಂದು ಕೊಂಚ ಬೆಳೆದು ಕವನದ ಜೊತೆಗೆ ಲೇಖನದ ರೂಪವನ್ನೂ ಪಡೆದಿದೆ. ಆ ದಿನಗಳಲ್ಲಿ ಬಹುಶಃ ನನ್ನ ಕವನಗಳು ಹೊರಬರಲು ನನ್ನ ಒಂಟಿತನವೇ ಮೂಲಕಾರ್‍ಅಣವೇನೋ. ಕವನಗಳನ್ನು ಬ್ಲಾಗಿನ ಮುಖಾಂತರ ಗೆಳೆಯರ ಬಳಿ ತಲುಪಿಸಲೂ ಗೆಳೆಯರೇ ಕಾರಣ.

ಕೇವಲ ತಮಾಷೆಗೆಂದು ಪ್ರಾರಂಭಿಸಿದ ಬ್ಲಾಗಿನಗೀಳು ಇಂದು ನನ್ನ ಅವಿಭಾಜ್ಯ ಅಂಗವಾಗಿದೆ. ಬರವಣಿಗೆ ನನ್ನ ಕನಸು. ಹಾಗಾಗಿ ನನ್ನ ಕನಸಿನ ಕೂಸಿಗೆ ಅದೇ ಸರಿಯಾದ ಹೆಸರೆಂದು ನಾಮಕರಣ ಮಾಡಲು ಪ್ರಯತ್ನ ಪಟ್ಟೆ. ಆದರೆ ನನ್ನಂತೆಯೇ ಬೇರೆಯವರಿಗೂ ಆಲೋಚನೆ ಇದ್ದಿದ್ದರಿಂದ "ನನ್ನಕನಸು" ಹೆಸರಿನ ಬ್ಲಾಗೊಂದು ಮೊದಲೇ ಅವತರಿಸಿತ್ತು. ನನ್ನ ಕನಸು ಆಗತಾನೆ ಚಿಗುರೊಡೆದಿದ್ದರಿಂದ ನನ್ನ ಕನಸಿನ ಕೂಸಿಗೆ "ನನ್ನಕನಸು-ಚಿಗುರು" ಎಂದು ನಾಮಕರಣ ಮಾಡಿದೆ. ಮೊದ ಮೊದಲು ಮೂಡಿದ ಚಿಗುರು ಬಂಪರ್ ಬೆಳೆಯನ್ನೇ ತಂದಿತ್ತು. ಕೇವಲ ಕೆಲವೇ ದಿನಗಳಲ್ಲಿ ನನಗೇ ಅರಿಯದಂತೆ ನನ್ನೊಳಗಿನಿಂದ ೪೧ ಕವನ ಹೊರಹೊಮ್ಮಿತ್ತು. ಬರೆದದ್ದೆಲ್ಲವನ್ನೂ ಕವನ ಎನ್ನಲಾಗುವುದಿಲ್ಲ.

ಆ ದಿನಗಳಲ್ಲಿ ಕಣ್ಣಿಗೆ ಕಾಣುವ ದೃಷ್ಯಗಳೆಲ್ಲವೂ ಕವನಗಳಿಗೆ ಸ್ಪೂರ್ತಿ ತಂದುಕೊಡುತ್ತಿತ್ತು. ಜೊತೆಯಲ್ಲಿ ಗೆಳೆಯರ ಪ್ರೋತ್ಸಾಹ, ಪ್ರೀತಿ ತುಂಬಿದ ತಿದ್ದುವಿಕೆ, ಆಕ್ಷೇಪಣೆ ಎಲ್ಲಾ ಮತ್ತಷ್ಟು ಬರೆಯಬೇಕೆಂಬ ಬಯಕೆಯನ್ನ ಹೆಚ್ಚಿಸುತ್ತಿದ್ದವು. ನನ್ನ ಹಲವಾರು ಕವನಗಳನ್ನು ಇಷ್ಟಪಟ್ಟುಕೊಂಡು ಕೆಲವರು ತಮ್ಮ ಬ್ಲಾಗಿಗೂ ಹಾಕಿಕೊಂಡಿದ್ದುಂಟು. ಅದಕ್ಕೆ ನಾನು ಕೂಡಾ ಆಕ್ಷೇಪಣೆ ಮಾದಿದ ನೆನಪು. ಆದರೀಗ ಅದನ್ನು ನೆನಪಿಸಿಕೊಂಡರೆ ನಗು ಬರುತ್ತದೆ. ಹಲವರು ನನಗೆ ಬೇಸರಿಸಬಾರದೆಂದು ನಾ ಬರೆದ ಕವನಗಳೆಲ್ಲಾ ಉತ್ತಮವಾಗಿದೆಯೆಂದರೆ ಮತ್ತೆ ಕೆಲವರು ಕಟುವಾಗಿ ಟೀಕಿಸಿದರು, ತಪ್ಪುಗಳನ್ನು ಎತ್ತಿ ಹಿಡಿದರು. ಅವರೆಲ್ಲರಿಗೂ ನನ್ನ ನಮನಗಳು.

ಮೊದ ಮೊದಲು ಅರ್ಧ ರಾತ್ರಿ ೨ ಘಂಟೆಗೆ ಎದ್ದು ಕವನ ಬರೆದದ್ದುಂಟು. ಕನಸಿನಲ್ಲೂ ಕವನಗಳೇ, ದಾರಿಯಲ್ಲಿ ಕಾಣಸಿಗುವ ಪ್ರತೀ ಮುಖದಲ್ಲಿ ಹುದುಗಿರುವ ಆಲೋಚನೆಗಳನ್ನು ಅರಿಯಲೆತ್ನಿಸುತ್ತಿದ್ದೆ. ನಾನು ಅವರ ಸ್ಥಾನದಲ್ಲಿದ್ದಿದ್ದರೆ ಏನಾಗುತ್ತಿತ್ತು? ಅದನ್ನೇ ಯೋಚಿಸುತ್ತಿದ್ದೆ. An Empty mind is Devil's Workshop ಅನ್ನುವಹಾಗೆಯೇ ಆಗಿತ್ತು ನನ್ನ ಕಥೆ :) ಆಫೀಸಿನಿಂದ ಹೆಚ್ಚು ಒತ್ತಡವಿರಲಿಲ್ಲ, ಮಾತನಾಡಲು ನಾನು ಎಲ್ಲರಿಂದ ದೂರವಿದ್ದೆ. ನಾನು ಆ ಸಮಯದಲ್ಲಿ ನನ್ನೊಂದಿಗೆ ಸದಾಕಾಲ ಒಂದು ಪೇಪರ್ ಮತ್ತು ಒಂದು ಪೆನ್ ಇಲ್ಲದೇ ಎಲ್ಲಿಗೂ ಹೋದ ನೆನಪಿಲ್ಲ. ನನ್ನ ಆ ಪಾಡನ್ನುಕಂಡು ನನ್ನ ಮಿತ್ರರು ಛೇಡಿಸಿದ್ದೂ ಉಂಟು. ಆದರೂ ಬರವಣಿಗೆಯ ಭೋರ್‍ಗರೆತ ನಿಲ್ಲಲಿಲ್ಲ. ಆದರೆ ಕಾರಣಾಂತರಗಲಿಂದ ಕ್ರಮೇಣ ಕಡಿಮೆಯಾಗುತ್ತಾ ಬಂತು.

ಆದರೀಗ ಮತ್ತೊಮ್ಮೆ ವಸಂತ ಬಂದಿದೆ. ಮನದಲ್ಲಿ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿವೆ. ಒಂದು ವೆತ್ಯಾಸವೆಂದರೆ ಈ ಬಾರಿ ನಾನು ಹಿಂದಿನಂತೆ ಎಲ್ಲರಲ್ಲು ನನ್ನ ಬರವಣಿಗೆಯನ್ನು ಓದಿ ಎಂದು ದುಂಬಾಲು ಬೀಳುವುದಿಲ್ಲ :) ಆಸಕ್ತರು ತಾವಾಗೇ ಬರುತ್ತಾರೆ, ಯಾರದರೂ ನನ್ನ ಬ್ಲಾಗಿಗೆ ಬಾರದಿದ್ದರೆ, ನಾ ಬರೆದ ಬರವಣಿಗೆ ಓದಲಿಲ್ಲವೆನ್ನುವುದಕ್ಕೆ ನನಗೆ ಬೇಸರವಿಲ್ಲ. ಈ ಬಾರಿಯೂ ನಾನು ಕಾಗದ ಮತ್ತು ಲೇಖನಿಯನ್ನು ಹಿಡಿದೇ ಹೊರಟಿದ್ದೆ. ಆದರೆ ನನ್ನೊಡನೆ ಮುನಿಸಿಕೊಂಡಿದ್ದ ಲೇಖನಿ ಮೌನವಾಗಿತ್ತು. ಹಾಗಾಗಿ ನಾನು ಈ ಎಲ್ಲಾ ವಿಚಾರವನ್ನೂ ಬರೆಯಲು ಕಾಗದ ಬಳೆಸಲಿಲ್ಲ, ಬದಲಿಗೆ ನನ್ನ ಮೊಬೈಲಿನ ಸಹಾಯ ಪಡೆದುಕೊಂಡೆ. ಮನದ ಆಲೋಚನೆಗಳನ್ನೆಲ್ಲಾ ಅದರಲ್ಲಿ ದಾಖಲಿಸುತ್ತಾ ಹೋದೆ, ನಂತರ Computer ನನ್ನ ಸಹಾಯಕ್ಕೆ ಕಾಯುತ್ತಲಿತ್ತು. ಹಾಗಾಗಿ ಕಾಗದವನ್ನೂ ಮತ್ತು ಕಾಗದಕ್ಕಗಿ ಕತ್ತರಿಸುವ ಮರವನ್ನೂ ಉಳಿಸಿದೆ ;) ಏಪ್ರಿಲ್ ತಿಂಗಳಿಗೆ ನನ್ನ ಕನಸಿನ ಕೂಸಿಗೆ ೩ ವರುಷಗಳು ತುಂಬಲಿದೆ.... ಈ ಮೂರು ವರುಷಗಳಲ್ಲಿ ಅಂದಾಜು 3900 Hits ನನ್ನ ಬ್ಲಾಗಿಗೆ!!! ನನ್ನ ಪಾಲಿಗೆ ಅದೇ ಸಂತೋಷದ ವಿಷಯ.

ನಿಮ್ಮೆಲ್ಲರ ಪ್ರೀತಿಯ ಹಾರೈಕೆ ನನ್ನೊಂದಿಗೆ, "ನನ್ನಕನಸೊಂದಿಗೆ" ಇದ್ದರೆ ಸಾಕು....

Thursday, March 25, 2010

bg******@ rediffmail. com ಗೆ ಒಂದು ಪತ್ರ

ಸುಮಾರು ಎಂಟೊಂಭತ್ತು ವರುಷಗಳ ಹಿಂದಿನ ಮಾತು.. ಕಂಪ್ಯೂಟರ್ ಕೋರ್ಸಿಗಾಗಿ ಸೇರಿದ್ದ ನನಗೆ ನಿನ್ನ ಪರಿಚಯವಾಯ್ತು. ಮೊದಲೇ ಕೆಲಸದಲ್ಲಿದ್ದ ನಾನು ಕಂಪ್ಯೂಟರಿನ ಬಗ್ಗೆ ನಿನಗಿಂತಾ ತುಸು ಹೆಚ್ಚೇ ತಿಳಿದಿದ್ದೆ. ನಮ್ಮೊಡನೆ ಕಲಿಯಲು ಬಂದವರಲ್ಲಿ ನೀನು ನಿನ್ನ ಅನುಮಾನಗಳ ಪರಿಹಾರಕ್ಕೆ ನನ್ನನೇ ಏಕೆ ಆಯ್ಕೆ ಮಾಡಿದೆಯೋ, ಗೊತ್ತಿಲ್ಲ. ನಮ್ಮ ಪರಿಚಯವಾಯ್ತು. ನಾನು ಅಂದು ಬಹಳ ಸಂಕೋಚದ ಹುಡುಗ. ಹೆಚ್ಚಿಗೆ ಯಾರೊಡನೆಯೂ ಬೆರೆಯುತ್ತಿರಲಿಲ್ಲ. ಅದರಲ್ಲೂ ಹುಡುಗಿಯರನ್ನು ಕಂಡರೆ ಮಾರು ದೂರ ಹೋಗಿ ನಿಲ್ಲುತ್ತಿದ್ದೆ.

ನಮ್ಮ ಕೋರ್ಸಿಗಾಗಿ ಮೀಸಲಿದ್ದದ್ದು ಕೇವಲ ೬ ತಿಂಗಳು ಮಾತ್ರ. ಅದೂ ನಾನು ಕೆಲಸ ಮುಗಿಸಿ ನನ್ನ ಮೊದಲ ದ್ವಿಚಕ್ರವಾಹನ TVS-XL ನಲ್ಲಿ ಮಾನಸ ಗಂಗೋತ್ರಿಗೆ ಬರುತ್ತಿದ್ದೆ. ಮೊದ ಮೊದಲು ಮುಖ ಪರಿಚಯವಾಗಿ ಕೇವಲ ನಗುವಿನಲ್ಲೇ ನಮ್ಮ ಸಂಭಾಷಣೆ ನಡೆಯುತ್ತಿತ್ತು. ನಿನ್ನೊಡನೆ ಸದಾಕಾಲವೂ ಇರುತ್ತಿದ್ದ ನಿನ್ನ ಗೆಳತಿ ರಷ್ಮಿ ಯೊಡನೆ ನೀನು ಏನು ಮಾತನಾಡಿಕೊಳ್ಳುತ್ತಿದ್ದೆಯೋ ನನಗದು ತಿಳಿಯುತ್ತಿರಲಿಲ್ಲ. ಆದರೆ ಸದಾ ಹಸನ್ಮುಖಿಯಾಗಿ ಗೆಲುವಿನಿಂದ ಕೂಡಿರುತ್ತಿದ್ದ ನಿನ್ನೊಡನೆ ಎಲ್ಲರೂ ಸ್ನೇಹಬೆಳೆಸಬಯಸುವವರೇ ಆಗಿರುತ್ತಿದ್ದರು.

ಕ್ರಮೇಣ ನಗುವಿನ ಸಂಭಾಷಣೆ ಮಾತು ಕಲಿಯತೊಡಗಿತು. ಕಳೆದದಿನದಂದು ಮಾಡಿದ ಪಾಠದಲ್ಲಿನ ಅನುಮಾನ ನಿನ್ನನ್ನು ನನ್ನಹತ್ತಿರಕ್ಕೆ ತರುತ್ತಿತ್ತು. ಕೇವಲ ಅದನ್ನು ನೆಪವಾಗಿಟ್ಟುಕೊಂಡು ನಮ್ಮ ಗೆಳೆತನವನ್ನು ಪ್ರೀತಿ ಎಂದೆನಿಸಿಕೊಳ್ಳುವ ಹುಚ್ಚು ಮನಸ್ಸು ನನ್ನದಲ್ಲವಾದ್ದರಿಂದ ನನ್ನ ನಿನ್ನ ಗೆಳೆತನ ಮೊಳಕೆಯೊಡೆದಿತ್ತು. ತರಗತಿಯಲ್ಲಿ ನಾವಿಬ್ಬರೂ ಮತ್ತೆ ರಷ್ಮಿ ಒಟ್ಟಿಗೇ ಕುಳಿತು ಅಭ್ಯಾಸಿಸುತ್ತಿದ್ದೆವು. ಲ್ಯಾಬ್ ಗಳಲ್ಲಿ ನಾವೆಲ್ಲಾ ಒಟ್ಟಿಗೇ ಸೇರಿ ಕೊಟ್ಟ ಅಸೈಮೆಂಟ್ ಗಳನ್ನು ಮುಗಿಸುತ್ತಿದ್ದೆವು. ನನ್ನಲ್ಲಿ ನನ್ನ ಜೀವನದ ಕನಸುಗಳು ಮೊಳೆಯುವ ಕಾಲವದು. ಅಂದು ನಾನು ಕನಸಿನಲ್ಲಿಯೂ ಬೆಂಗಳೂರಿಗೆ ಬರುವೆನೆಂದು ಅನಿಸಿರಲಿಲ್ಲ. ನನ್ನದೇ ಒಂದು ಪುಟ್ಟ ಗೂಡನ್ನು ಕಟ್ಟುವ ತವಕವಿರಲಿಲ್ಲ. ಕೇವಲವಿದ್ದದ್ದು ಮುಗ್ದ ಹೃದಯ ಮತ್ತು ತನ್ಮಯತೆ.

ನಮ್ಮ ತರಗತಿಗಳು ೪ತಿಂಗಳ ಅವಧಿಯನ್ನು ಮುಗಿಸಿದ್ದವು. ಇನ್ನು ಬಾಕಿ ಉಳಿದದ್ದು ಕೇವಲ ೨ ತಿಂಗಳುಗಳು ಮಾತ್ರ. ಅಷ್ಟರಲ್ಲಾಗಲೇ ನಾವೆಲ್ಲಾ (ಅದರಲ್ಲೂ ನಾವಿಬ್ಬರು) ಒಳ್ಳೆಯ ಸ್ನೇಹಿತರಾಗಿದ್ದೆವು. ಅಂದು ವಾರಾಂತ್ಯ- ನಾನು ನನ್ನ ಅಣ್ಣ, ಮತ್ತವನ ಸ್ನೇಹಿತರು ಎಲ್ಲಾ ಸೇರಿ ಬೆಳಗ್ಗೆ ಚಾಮುಂಡಿ ಬೆಟ್ಟವನ್ನು ಹತ್ತಿಳಿದು ಗಾಯತ್ರಿ ಟಿಫನ್ ರೂಂ ನಲ್ಲಿ ತಿಂಡಿ ತಿಂದು ಇನ್ನೇನು ಹೊರಡಬೇಕೆನಿಸುವಷ್ಟರಲ್ಲಿ ಬೆಂಗಳೂರಿನಿಂದ ಅಣ್ಣನ ಸ್ನೇಹಿತನ ಕರೆ ಮೊಬೈಲಿನಲ್ಲಿ ಮೊಳಗಿತ್ತು. ಅಣ್ಣನ ಸ್ನೇಹಿತ ನನಗೆ ಬೆಂಗಳೂರಿನಲ್ಲಿ ಕೆಲಸ ಖಾಲಿ ಇರುವ ಬಗ್ಗೆ ತಿಳಿಸಿದ್ದ. ಅಂದಿನಿಂದ ನನಗೆ ಮೈಸೂರಿನ ಸೆಳೆತ ಜೋರಾಗತೊಡಗಿತು. ಮೈಸೂರನ್ನು ಬಿಟ್ಟು ಹೋಗಬೇಕಾ ? ಅಪ್ಪ, ಅಮ್ಮ, ಅಣ್ಣ, ಅಕ್ಕ ಎಲ್ಲರನ್ನೂ ಬಿಟ್ಟು ಹೋಗಬೇಕಾ.... ನಿನ್ನಿಂದ ದೂರ ಹೋಗಬೇಕಾ ???

ಈ ವಿಚಾರವನ್ನು ನಿನ್ನೊಡನೆ ಸೋಮವಾರ ಚರ್ಚಿಸಿದೆ. ಮನೆಯವರ ಧೈರ್ಯದೊಡನೆ ನಿನ್ನ ಧೈರ್ಯವೂ ಬೆರೆತು ಮನಸ್ಸು ಗಟ್ಟಿಯಾಗತೊಡಗಿತು. ತರಗತಿಗಳು ಇನ್ನೂ ೨ ತಿಂಗಳು ಬಾಕಿ ಇದ್ದವು. ನಾನು ಧೈರ್ಯಗೆಡಲಿಲ್ಲ, ಕಾರಣ ನನ್ನವರ ಪ್ರೋತ್ಸಾಹ ನನ್ನೊಡನಿತ್ತು. ನೀನೂಕೂಡ ಓದುವ ಸಲುವಾಗೇ ನಿನ್ನೂರಾದ ಮಂಡ್ಯವನ್ನು ಬಿಟ್ಟು ಬಂದು ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದ Working Women's hostel ನಲ್ಲಿ ತಂಗಿದ್ದೆ.

ಆದಿನ ಯಾವ ಕಾರಣಕ್ಕೋ ತಿಳಿಯದು.. ಬಹುಷಃ ಕೆಲಸಕ್ಕೆಂದು ಅರ್ಜಿ ಕಳಿಸಲಿರಬಹುದು ಮೊದಲ ಸಲ ನನ್ನ ಸಹಾಯ ಕೇಳಿದ್ದೆ ನೀನು. ರಾಯರ ಮಠಕ್ಕೆ ನಾವಿಬ್ಬರೂ ಒಟ್ಟಿಗೇ ನನ್ನ TVS-XL ನಲ್ಲಿ ಹೋಗಿ ನಮಸ್ಕರಿಸಿ ಹೊರಾಂಗಣದಲ್ಲಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಿದ್ದೆವು. ಅಂದು ನೀ ಹೇಳಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಹೇಳಿದಂತೆ ಅಚ್ಚಳಿಯದೇ ಉಳಿದಿದೆ. "ನಾನು ಇದೇ First time ಕಣೋ ಒಬ್ಬ ಹುಡುಗನ ಜೊತೇಲಿ ದೇವಸ್ಥನಕ್ಕೆ ಬಂದಿರೋದು. ಯಾಕೋ ಗೊತ್ತಿಲ್ಲ, ನಿನ್ನ ಮೇಲೆ ನನ್ಗೆ ಅಷ್ಟು ನಂಬಿಕೆ" ಹೌದು... ಅದೇ ನಂಬಿಕೆಯನ್ನ ನಾನು ಇಂದಿಗೂ ಉಳಿಸಿಕೊಂಡಿದ್ದೇನೆ. ನಿಜವಾಗಲೂ ನನಗೂ ಅದು ಫಸ್ಟ್ ಟೈಮೇ... ಸಂಕೋಚದ ಹುಡುಗನಾದ ನಾನು ಒಬ್ಬ ಹುಡುಗಿಯನ್ನ ಗಾಡಿಯಲ್ಲಿ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿದ್ದಕ್ಕೆ ಇಂದಿಗೂ ನನ್ನಮೇಲೇ ನನಗೆ ಅಚ್ಚರಿಇದೆ. ಅಲ್ಲಿಂದ ನಾವು ನಿನ್ನ ಕೆಲಸದ ಅರ್ಜಿಯ ವಿಚಾರವಾಗಿ ಕುವೆಂಪು ನಗರದ ಕೊರಿಯರ್ ಆಫೀಸಿಗೆ ಹೋಗಿದ್ದೆವು. ಅಲ್ಲಿಂದ ನಾನು ನಿನ್ನನ್ನು ನಿನ್ನ Working Women's hostel ಗೆ ಬಿಟ್ಟು ಮನೆಗೆ ಮರಳಿದ್ದೆ.

ನನ್ನ ಜನ್ಮದಿನದಂದು ನೀ ಕೊಟ್ಟ ಉಡುಗೊರೆ ಇಂದಿಗೂ ನನ್ನ ಜೊತೆಯಲ್ಲೇ ಇದೆ. ನೀಕೊಟ್ಟ Wallet, ಅದರೊಳಗಿದ್ದ ೫ ರೂಪಾಯಿ Coin, ರಷ್ಮಿ ಕೊಟ್ಟ Key chain, ನೀವಿಬ್ಬರೂ ಸೇರಿ ನಿನ್ನ ಹಸ್ತಾಕ್ಷರದಿಂದ ಬರೆದ ಆ "To Dear Friend From, Appi and Rashu" ಸಾಲು ಇಂದಿಗೂ ನನ್ನೊಡನೆ ಭದ್ರವಾಗಿವೆ. ಬಹುಷಃ ನೀನು ನನ್ನ ಪಾಲಿನ "Crush" ಆಗಿದ್ದೆ. ಅಂದು ನಿಮ್ಮಲ್ಲಿಂದ ಪಡೆದುಕೊಂಡ ಉಡುಗೊರೆ ನನಗೆ ನಿಮ್ಮ ನೆನಪಿನ ಕಾಣಿಕೆಯಾಗಿದೆ. ಸಂಜೆ ತರಗತಿ ಮುಗಿದ ಬಳಿಕ ನಾನು ನಿಮ್ಮಿಬ್ಬರನ್ನೂ ನನ್ನ TVS-XL ನಲ್ಲಿ Working Women's hostel ಗೆ ಬಿಟ್ಟು ಮನೆಗೆ ಮರಳಿದ್ದೆ. ದಾರಿಯಲ್ಲಿ ನನ್ನ ಗಮನವೆಲ್ಲಾ ನಿನ್ನಮೇಲಿತ್ತು. ಅಪ್ಪಿತಪ್ಪಿ ನಾನೆಲ್ಲಿ ನಿನ್ನನ್ನು ಸ್ಪರ್ಶಿಸಿ ನಿನ್ನ ದೃಷ್ಟಿಯಲ್ಲಿ ಕೆಟ್ಟವನಾಗಿ ಸ್ನೇಹವನ್ನು ಕಳೆದುಕೊಳ್ಳುವೆನೋ ಎಂಬ ಭಯ.

ನಮ್ಮ ತರಗತಿಗಳು ಮುಗಿದಿದ್ದವು, ನನ್ನ ಪಯಣ ಬೆಂಗಳೂರಿನ ಕಡೆಗೆ ಸಾಗಿತ್ತು. ಬೆಂಗಳೂರಿಗೆ ಬಂದು ೨ ತಿಂಗಳ ನಂತರ ನಾ ಮತ್ತೆ ನಿನ್ನನ್ನು ನಿನ್ನ Working Women's hostel ಗೆ ಬಂದು ಭೇಟಿ ಮಾಡಿದ್ದೆ. ನಿನ್ನ ಈ-ಮೈಲ್ ವಿಳಾಸವನ್ನು ಖುದ್ದಾಗಿ create ಮಾಡಿ ಅದನ್ನು ಉಪಯೋಗಿಸುವ ವಿಧಾನವನ್ನೂ ಕಲಿಸಿದ್ದೆ. ಆದರೀಗ ಅದು ಕೆಲಸ ಮಾಡುತ್ತಿಲ್ಲ. ಮೊದ ಮೊದಲು ನಿನ್ನಿಂದ ನನ್ನ ಈ-ಅಂಚೆಗೆ ಉತ್ತರ ಬಂದರೂ ನಂತರದ ದಿನಗಳಲ್ಲಿ ಅದು ಸಂಪೂರ್ಣವಾಗಿ ನಿಂತುಹೋಯಿತು. ನಿನಗೆ ಮೈಲ್ ಮಾಡಲೆಂದೇ ನಾನು Browsing Center ಗಳಿಗೆ ಬರುತ್ತಿದ್ದೆ. ಆಗಿನ ದಿನಗಳಲ್ಲಿ ಮೊಬೈಲ್ ಫೋನ್ ಎಂಬುದು ಆಕಾಶದಲ್ಲಿನ ನಕ್ಷತ್ರದಷ್ಟೇ ದೂರವಾಗಿತ್ತು ನನಗೆ. ಇದ್ದ ಒಂದೇ ಒಂದು ಸಂಪರ್ಕ ಕೊಂಡಿ ಆ ಈ-ಮೈಲ್.

ನಂತರದ ದಿನಗಳಲ್ಲಿ ನಿನ್ನ ಸಂಪರ್ಕ ಸಾಧ್ಯವಾಗಲಿಲ್ಲ. ನಿನಗೂ ನಿನ್ನದೇ ಆದ ಜವಾಬ್ದಾರಿಗಳಿದ್ದಿರಬೇಕು. ಪರಿಸ್ಥಿತಿಯ ಒತ್ತಡಕ್ಕೆ ನೀನೂ ಸಿಲುಕಿರಬೇಕು. ನಿನ್ನ ಮಾತನಾಡಿಸಲು ಮತ್ತೊಮ್ಮೆ ನಿನ್ನ hostel ಗೆ ಫೊನಾಯಿಸಿದಾಗ ನೀನು ಅಲ್ಲಿಂದ ಬೇರೆಡೆಗೆ ಹೋಗಿರುವ ವಿಷಯ ತಿಳಿಯಿತು.

ಕಡೆಯದಾಗಿ ನೀನು ಬಳಿಬಂದು ಕೇಳಿದ ಪ್ರಶ್ನೆ: "ಬೆಂಗಳೂರಿಗೆ ಹೋಗ್ತಾ ಇದೀಯ... ನಾವೆಲ್ಲಾ ನಿನ್ಗೆ ನೆನ್ಪಿರ್ತೀವೇನೋ ?" ಹೌದು ಖಂಡಿತಾ ನೆನಪಿದೆ ಗೆಳತಿ ಆದರೆ ನಿನಗೆ ನನ್ನ ನೆನಪಿಲ್ಲ ಅನ್ನುವುದು ವಿಪರ್ಯಾಸ.

ಇಂದಿಗೂ ನಾನು ಆ ದಿನಗಳನ್ನ ಮರೆತಿಲ್ಲ. ಕುವೆಂಪು ನಗರಕ್ಕೆ ಹೋದಲ್ಲಿ ಆ ಕೊರಿಯರ್ ಆಫೀಸಿನೆಡೆಗೆ ನೋಡುತ್ತೇನೆ, ನಿನ್ನನ್ನು ಕಾಣುತ್ತೇನೆ... ಗೌರವದಿಂದ :)

Wednesday, March 24, 2010

ವಿಸ್ಮಯ


ಚಿತ್ರ ಕೃಪೆ: google dot com

ವಿಸ್ಮಯ ನನ್ನ ಅಣ್ಣ ಮತ್ತು ಅತ್ತಿಗೆ ಕನಸನ್ನು ಸಾಕಾರ ಗೊಳಿಸಿ ಧರೆಗೆ ಬಂದ ಕೂಸು. ಹೌದು ವಿಸ್ಮಯ ನನ್ನ ಅಣ್ಣನ ಮಗಳು. ಮುದ್ದು ಮುದ್ದಾಗಿ ತೊದಲುಮಾತನಾಡುತ್ತಿರುವ ಅವಳಿಗೆ ಈಗ ೨ ವರುಷಗಳು ತುಂಬಿವೆ. ಆಕೆಗೋಸ್ಕರ ಬರೆದ ನನ್ನ ಕೆಲವು ಸಾಲುಗಳಿವು.

ಪುಟ್ಟ ಕಂದ ಜಗಕೆ ಬರಲು ತಾಯ್ತಂದೆಗೆ ಹರುಷವು
ನವಮಾಸದ ನೋವುಗಳಲೂ ಅವರಿಗಾನಂದವು

ಮುದ್ದುಕಂದ ನೀತಂದೆ ಸಂತಸದ ದಿನಗಳ
ಮುಗ್ದ ನಗುವ ಬೀರಿ ನೀನು ತೊಯ್ದೆ ತಾಯ ಕಂಗಳ

ಕಣ್ಣಂಚಿನ ಕಣ್ಣೀರು ದುಃಖಕಲ್ಲ ಕಂದನೇ
ಆನಂದಕೆ ಮಾತಿಲ್ಲ, ಆನಂದಭಾಷ್ಪದರ್ಪಣೆ

ಹೊಟ್ಟೆಯೆಳೆದು ರಚ್ಚೆ ಹಿಡಿದು ತಾಯ ಹುಡುಕುತಾ ನೀನು
ಅಂಬೆಗಾಲನಿಟ್ಟು ಬರಲು ತಾಯ ಮೊಗದಿ ಹಾಲ್ಜೇನು

ವರುಷಕಳೆದು ವರುಷತುಂಬಿ ವಸಂತಗಳು ಉರುಳಿವೆ
ನಿನ್ನ ತೊದಲು ಮಾತ ಕೇಳ್ವುದಕೆ ಕಿವಿಗಳೆಲ್ಲಾ ಕಾದಿವೆ

ಎಂಥಾ ಬೆರಗು ಎಂಥಾ ಮೆರಗು ತಂದೆ ನೀನು ಬಾಳಿಗೆ
ನೀನು ಬಂದ ಕ್ಷಣದಿ ತಂದ ಆನಂದವು ನಾಳಿಗೆ

ನಿನ್ನ ಆಟ ಓಡಾಟದಿ ತಾಯಿ ತಂದೆ ತನ್ಮಯ
ಅದಕಾಗಿ ಹೆಸರಿಟ್ಟರು ನಿನಗಂದು ವಿಸ್ಮಯ :)

Monday, March 22, 2010

ಸಂಭ್ರಮದ ಶನಿವಾರ

ವಾರವೆಲ್ಲಾ ಬೆಳ್ಳಂಬೆಳಿಗ್ಗೆ ೪.೩೦ಕ್ಕೆ ಎದ್ದು ಎದ್ದೂ ಸಾಕಾಗಿ ಹೊಗಿತ್ತು. ವಾರಾಂತ್ಯಕ್ಕೆ ಕಾಯ್ತಾ ಇದ್ದೆ. ಅಂತೂ ಇಂತೂ ಶನಿವಾರ ಬಂದೇಬಿಡ್ತು. :) ಶನಿವಾರದ ಮೊದಲ ಕೆಲಸ ಅಂದ್ರೆ 10:00 ಘಂಟೇತನಕ ನಿದ್ದೆ ಮಾಡೋದು ;) ಆಮೇಲೆ ಮಿಕ್ಕಿದ ಕೆಲಸಗಳೆಲ್ಲಾ... ನನ್ನ ಅನಿಸಿಕೆಯಂತೇ ಬೆಳಗ್ಗೆ 9:30ರ ತನಕ ಗಡದ್ದಾಗಿ ನಿದ್ದೆ ಮಾಡ್ದೆ. ಆಮೇಲೆ ಮಾಮೂಲಿ ಯೋಚನೆ... ಇವತ್ತು ತಿಂಡಿ ಏನು ಮಾಡೋದು ಅಂತ. ಆಗ ನೆನ್ಪಾಗಿದ್ದೇ ನನಗೆ ಇಷ್ಟವಾದ ಮಾಡಲು ಸುಲಭವಾದ ತಿಂಡಿ- "ಗಂಜಿ". ಗಂಜಿಯ ಜೊತೆಗೆ ಮಿಡಿ ಉಪ್ಪಿನಕಾಯಿ, ಸ್ವಲ್ಪ ಮೊಸರು, ಸ್ವಲ್ಪ ಕುತ್ತುಂಬರಿ ಚಟ್ನಿ, ಇಷ್ಟಿದ್ಬಿಟ್ರೇ... ಸ್ವರ್ಗಕ್ಕೆ 3ರೇ ಗೇಣು... ಮಾಡುವುದು ಅತಿ ಸುಲಭ, So ಅದನ್ನೆ ಮಾಡಲು ಒಲೇಮೇಲೆ cooker ಇಟ್ಟು ಮನೆಗೆಲಸ ಶುರು ಮಾಡ್ಕೊಂಡೆ. ಮೊದಲನೇದು ಬಟ್ಟೆ ಒಗೆಯೋದು. ವಾರದಲ್ಲಿ ಬೆಂಗಳೂರಿನ ಕೊಳೆ, ಧೂಳು ಹೊತ್ಕೊಂಡು ತಂದಿದ್ದನ್ನ ಬ್ರಷ್ ಉಜ್ಜಿ ಉಜ್ಜಿ ತೆಗೆಯೋದು.

ಅಬ್ಬಬ್ಬಾ!!! ಬೆನ್ನೆಲ್ಲಾ ಲಟ ಲಟಾ ಅಂತು ಅದನ್ನ ಒಗೆಯೋಷ್ಟ್ರಲ್ಲಿ. ಒಲೆಯಮೇಲಿಟ್ಟಿದ್ದ ನನ್ನ ಕುಕ್ಕರ್ ಕೂಗಿ ಕೂಗಿ ಗಂಜಿ ಆಗಿರೋದನ್ನ ಇಡೀ ಬೀದಿಗೇ ಸಾರಿ ಹೆಳ್ತಾ ಇತ್ತು. ಅದನ್ನ ಒಲೆಮೇಲಿಂದ ಕೆಳಗಿಳಿಸಿ, ಒಗೆದ ಬಟ್ಟೆಗಳನ್ನ ಒಣಗಿಸಿ ಮನೆಯನ್ನೆಲ್ಲಾ ಒಮ್ಮೆ ಗುಡಿಸಿ ಬಂದು ಇನ್ನೇನು ಗಂಜಿಯ ಸವಿರುಚಿ ಅನುಭವಿಸಬೇಕು... ನನ್ನ ಮಿತ್ರನ ಕರೆ ನನ್ನ ಮೊಬೈಲಿನಲ್ಲಿ ಮೊಳಗಿತು. ನಮ್ಮ ಸಂಭಾಷಣೆ ಕಡಿಮೆ ಅಂದ್ರೂ 30 ನಿಮಿಷ ನಡೀತು. ಅಷ್ಟರಲ್ಲಿ ನಾನು ಬಿಸಿ ಬಿಸಿಯಾಗಿ ತಿನ್ನಬೇಕೆಂದಿದ್ದ ಗಂಜಿ ತಣ್ಣಗೆ ಕುಳಿತಿತ್ತು. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಅದನ್ನು ಹಾಗೇ ಕೊತ್ತಂಬರಿ ಚಟ್ನಿ, ಉಪ್ಪಿನ ಕಾಯಿಯ ಜೊತೆ ಹೊಟ್ಟೆಗೆ ಇಳಿಸ ತೊಡಗಿದೆ... ಅಹಾ... ತಣ್ಣಗಿದ್ದರೂ ಅದರ ರುಚಿಗೆ ಬೇರಾವ ತಿಂಡಿಯೂ ಸಾಟಿಯಿಲ್ಲ...

ನನ್ನ ಬೆಳಗಿನ ಕಾರ್ಯಕ್ರಮಗಳೆಲ್ಲಾ ಮುಗಿದು ಸುಮಾರು 1:00 ಘಂಟೆಯ ಹೊತ್ತಿಗೆ ಕಣ್ಣು ಜೊಂಪು ಹತ್ತ ತೊಡಗಿತು. ಒಂದು ಅರ್ಧ ಘಂಟೆ ಮಲಗಿ ಏಳೋಣ ಅಂತ ಮಲಗಿದವನಿಗೆ ಎಚ್ಚರವಾದದ್ದು 4 ಘಂಟೆಗೇ... ಸೋಮಾರಿ ತನದಿಂದ ಎದ್ದು ಗಿಡಗಳ ಬಳಿಗೆ ಬಂದೆ... ಪಾಪ, ಅವಕ್ಕೆ re-poting ಮಾಡೋ ಕಾರ್ಯಕ್ರಮ ಕಳೆದ ಒಂದು ತಿಂಗಳಿಂದಾ ಮುಂದೂಡಲ್ಪಡುತಿತ್ತು... ಅದಕ್ಕೆ ಇವತ್ತು ಕಾಲ ಕೂಡಿಬಂದಿತ್ತು. ಎಲ್ಲಾ ಕುಂಡಗಳ ಹಳೆಯ ಮಣ್ಣನ್ನು ತೆಗೆದು ತರಕಾರಿ ಸಿಪ್ಪೆಯ ಗೊಬ್ಬರವನ್ನ ಸೇರಿಸಿ ಮತ್ತೆ ಅದೇ ಕುಂಡಗಳಿಗೆ ತುಂಬುವ ಹೊತ್ತಿಗೆ ಸಂಜೆ 6:15 ನಿಮಿಷ. ಮನೆಯೊಳಗೆ ಬಂದು Freshಆಗಿ IPL match ನೋಡ್ಕೊಂಡು ತರಕಾರಿ ತರಲು ನಡೆದು ಹೊರಟೆ. ದಾರಿಯುದ್ದಕ್ಕೂ ತಂಗಾಳಿ ನನ್ನ ಜೊತೆ ಜೊತೆಯಲ್ಲೇ ಬಂದಿತ್ತು. ಹಿತವಾದ ಆ ಗಾಳಿಯಲ್ಲಿ ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖವೇನಾದರೂ ಕಂಡೀತೇನೋ ಎಂಬಂತೆ ಹುಡುಕುತ್ತಾ ಹೊರಟೆ. ದಾರಿಯಲ್ಲಿ ಹೋಗುವಾಗ ಅಮ್ಮನಿಗೆ ಫೋನಾಯಿಸಿ ಕ್ಷೇಮ ಸಮಾಚಾರ ವಿಚಾರಿಸಿ ಮಾತನಾಡುತ್ತಿದ್ದಾಗ ಆಕೆ ಪಡವಲಕಾಯಿಯ ತೊವ್ವೆ ಮಾಡ್ಕೊ... ಚೆನ್ನಗಿರತ್ತೆ ಅಂದಿದ್ದು ನೆನಪಾಯಿತು. ಮನೆಯ ಬಳಿಯಿದ್ದ Safal ತರಕಾರಿ ಅಂಗಡಿಗೆ ಹೋಗಿ 2 ಪಡವಲಕಾಯಿಗಳನ್ನು ತಂದೆ.

ಮನೆಗೆ ಮರಳುವ ಮಾರ್ಗದಲ್ಲಿ ಕೆಂಪು ಕೆಂಪು ಕಲ್ಲಂಗಡಿ ನನ್ನನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿತ್ತು. ವ್ಯಾಪಾರಿಯೊಂದಿಗೆ ಮಾತನಾಡಿ ಒಂದು ಹಣ್ಣನ್ನು ಖರೀದಿ ಮಾಡುವಾಗ ಪಕ್ಕದಲ್ಲಿ ಯಾವುದೋ ಚಿರಪರಿಚಿತ ಮುಖ ನನ್ನನ್ನೇ ನೋಡುತ್ತಿರುವಂತೆ ಭಾಸವಾಯಿತು. ಹೌದು... ಅದು ಪರಿಚಿತ ಮುಖವೇ ಹೌದು, ಗೌರವವರ್ಣ ವಲ್ಲದಿದ್ದರೂ ನೋಡಲು ಆಕೆ ಲಕ್ಷಣವಾಗಿದ್ದಳು. ಆಕೆ ನಮ್ಮ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದವಳು ನನ್ನಕಡೆ ನೆಟ್ಟದೃಷ್ಟಿ ಬೀರಿದ್ದಳು. ಹೆಚ್ಚಾಗಿ ಆಕೆಯ ಪರಿಚಯವಿಲ್ಲದ ಕಾರಣದಿಂದ ದಾರಿಯೆಡೆಗೆ ದೃಷ್ಟಿ ನೆಟ್ಟು ಮನೆಯಕಡೆ ಪಯಣ ಬೆಳೆಸಿದೆ. ಮನಸ್ಸಿನಿಂದ ಹಾಡು ಹೊರಹೊಮ್ಮಿತ್ತು... ಚಲುವೆ ಎಲ್ಲಿರುವೇ... ಮನವ ಕಾಡುವ ರೂಪಸಿಯೇ.....

ಮನೆಗೆ ಬಂದು ತಂದಿದ್ದ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾ Royal challenger's ನ ಗೆಲುವನ್ನು ನೋಡುತ್ತಾ ನನ್ನ ಕನಸಿನ ಕನ್ಯೆಯನ್ನ ಭೇಟಿಮಾಡಲು ಸ್ವಪ್ನಲೋಕಕ್ಕೆ ಹೊರಡುವ ಹೊತ್ತಿಗೆ ಸಂಭ್ರಮದ ಶನಿವಾರ ಮುಕ್ತಾಯ ವಾಗಿತ್ತು :)

Friday, March 12, 2010

ಇವತ್ತು ಏನ್ ತಿಂಡಿ ಮಾಡ್ಲೀ....

ಇವತ್ತು ಏನ್ ತಿಂಡಿ ಮಾಡ್ಲೀ....

ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು. ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ... ಅವಲಕ್ಕಿ ಮಾಡೋಣ ಅಂದ್ರೆ ಒಬ್ಬರಿಗೆ ಹುಳಿಯವಲಕ್ಕಿಯೇ ಆಗಬೇಕು. ಮತ್ತೊಬ್ಬರಿಗೆ ಅವಲಕ್ಕಿ ಒಗ್ಗರಣೆಯೇ ಆಗಬೇಕು. ಚಪಾತಿ ಮಾಡಿದರೆ ಒಬ್ಬರಿಗೆ ತೆಂಗಿನ ಚಟ್ನಿಯೇ ಬೇಕಾದರೆ ಮತ್ತೊಬ್ಬರಿಗೆ ತರಕಾರಿ ಸಾಗುವೇ ಸೊಗಸು.

ಅಬ್ಬಬ್ಬಾ!!!! ಅದಿರಲಿ ಬಿಡಿ, ಮೊದಲು ಏನು ತಿಂಡಿ ಮಾಡೋದು ಅಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೇ ಸಮಯ ಬೇಕು. ಪೊಂಗಲ್ ಮಾಡೋಣಾ ಅಂದ್ರೆ ಮನೇಲಿ ಹೆಸರುಬೇಳೆನೇ ಇರೋಲ್ಲ. ಚಟ್ನಿ ಮಾಡೋಣ ಅಂದ್ರೆ ತೆಂಗಿನ ಕಾಯಿ ಖಾಲಿ!!! ಉಪ್ಪಿಟ್ಟು ಮಾಡೋಣ ಅಂದ್ರೆ ಅದು ಕಾಂಕ್ರೀಟ್ ಯಾರು ತಿಂತಾರೆ ಅನ್ನೋ ಧೋರಣೆ. ದೋಸೆ ಮಾಡಿದ್ರೆ ಅಯ್ಯೋ!!! ಇವತ್ತೂ ದೋಸೇನಾ... ಅನ್ನೋ ರಾಗ....

ಇಂತಾ ಸಮಸ್ಯೆ ಬಂದಾಗ ನೀವೇನು ಮಾಡ್ತೀರಾ ????

ನಾನು ಒಂದು ಪರಿಹಾರ ಕಂಡುಕೊಂಡಿದ್ದೇನೆ. ಅದೇ ತಿಂಡಿಯ ವೇಳಾಪಟ್ಟಿ ;)

ಮೊದಲು ನಿಮಗೆ ತಿಳಿದಿರುವ ತಿಂಡಿಗಳ ಪಟ್ಟಿ ಮಾಡಿ, ನಂತರ ಅದಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಮಾಡಿ. ಯಾವ ತಿಂಡಿ ಪದೇ ಪದೇ ಮಾಡಿ ನಿಮಗೆ ಬೋರ್ ಆಗಿರತ್ತೋ ಅದನ್ನ ಒಂದು ವಾರಗಳ ಮಟ್ಟಿಗೆ ಮುಂದೂಡಿ. ಒಂದು ವಾರ ಕಳೆದ ನಂತರ ಅದಕ್ಕೆ ಹೊಸತನ ಹೇಗೆ ಕೊಡಬಹುದು ಎಂದು ಆಲೋಚನೆ ಮಾಡಿ ನಂತರ ಮುಂದಿನ ವಾರ ಅದನ್ನೇ ಹೊಸದಾಗಿ ಮಾಡಿದರಾಯ್ತು.

ನನ್ಗೆ ಗೊತ್ತು ಸ್ವಾಮೀ ನಿಮ್ಮ ತಲೇಲಿ ಎನು ಹೊಳಿತಾ ಇದೆ ಅಂತಾ. ಹೊಸಾ ಬಟ್ಟೆ ತೊಡಿಸಿದರೆ ಮನುಷ್ಯ ಬದಲಾಗೋಲ್ಲ ಅಂತ ತಾನೆ ??? ಅದು ನಿಜ, ಆದರೆ ಹಳೇ ಮನುಷ್ಯನ್ನ ನೋಡಲು ಹೊಸತನ ಇರತ್ತೆ, ಅಲ್ವಾ ;).

ಇದು ಸಧ್ಯಕ್ಕೆ ನಾನು ಕಂಡುಕೊಂಡಿರೋ ಪರಿಹಾರ... ನಿಮಗೇನಾದ್ರೂ ಬೇರೆ ಪರಿಹಾರ ಗೊತ್ತಿದ್ರೆ ದಯವಿಟ್ಟೂ ನನ್ಗೂ ಹೇಳ್ರೀ....

Wednesday, October 7, 2009

ಮುಳ್ಳಯ್ಯನ ಗಿರಿ-ಕೆಮ್ಮಣ್ಣುಗುಂಡಿ ಚಾರಣ

ನವೆಂಬರ್ ೨೯,೩೦ ೨೦೦೮

ದಿನಪೂರ್ತಿ ಕಂಪ್ಯೂಟರಿನ ಮುಂದೆ ಕೆಲ್ಸಮಾಡಿ, ಮನೆಗೆ ಹೋಗಿ ಮನೆಲೂ ಕೆಲ್ಸ ಮಾಡಿ ಸಕತ್ ಬೇಜಾರಾಗೋಗಿತ್ತು. ಇದರ ನಡುವೆ ಒಂದು ಪುಟ್ಟ Break ಬೇಕಾಗಿತ್ತು. ಯಾವರೀತಿ Timepass ಮಾಡಿದ್ರೆ ಚೆನ್ನಾ ಅಂತ ಲೆಕ್ಕಾಚಾರ ಹಾಕ್ತಾ ಇರೋಹಾಗೇ ಮನೋಹರ ನಂಗೆ call ಮಾಡಿದ್ದ. ಒಂದು Trekking ಇದೆ, ಬರ್ತೀಯಾ ? ಬರೋಹಾಗಿದ್ರೆ ನನ್ನ Accountಗೆ ದುಡ್ಡು Transfer ಮಾಡ್ಬಿಡು ಅಂದ. ನಿಸರ್ಗದ ನಡುವೆ ಇರೋ ಅವಕಾಶ ತಾನಾಗೇ ಸಿಕ್ಕಿರೋವಾಗ ತಡಮಾಡದೇ ಮನೋಹರನಿಗೆ ಈ ಚಾರಣದ ವಿಷಯ ತಿಳಿಸಿದ್ದಕ್ಕೆ ಮನದಲ್ಲೇ Thanks ಹೇಳ್ತಾ ಚಾರಣಕ್ಕೆ ಬೇಕಾಗುವ ಮೊತ್ತವನ್ನ ಮುಂಗಡವಾಗಿ ಇಂಟರ್ನೆಟ್ಟಿನಿಂದ ಸುಲಭವಾಗಿ ಮನೋಹರನ ಖಾತೆಗೆ ಜಮಾ ಮಾಡಿ ನಾನು ಚಾರಣಕ್ಕೆ ಬರುವುದನ್ನ ಖಾತ್ರಿ ಪಡಿಸಿಕೊಂಡೆ.

ಮನೋಹರ್ ಮತ್ತೆ ಹರ್ಷ ಗುಂಪಿನೊಡನೆ ಇದು ನನ್ನ ಎರಡನೇ ಚಾರಣ. ಚಾರಣಕ್ಕೆ ಹೋಗಬೇಕಾಗಿದ್ದ ಜಾಗ "ಮುಳ್ಳಯ್ಯನ ಗಿರಿ", ಅಲ್ಲಿಂದ ನಾವು ಕೆಮ್ಮಣ್ಣುಗುಂಡಿಗೆ ಬಂದು ನಮ್ಮ ಚಾರಣವನ್ನ ಅಂತ್ಯಗೊಳಿಸೋದು ಅಂತ ಅವರಿಬ್ಬರೂ Plan ಮಾಡಿದ್ರು.

ಮೊದಲಿಗೇ ಚಾರಣದ ಸಿದ್ದತೆಯನ್ನು ಮಾಡಿಕೊಂಡಿದ್ದವರು ನಮ್ಮ ಗುಂಪಿನ ನಾಯಕರಾದ ಹರ್ಷ ಮತ್ತು ಮನೋಹರ. ಚಾರಣದ ಆಸಕ್ತಿ ಇರೋ ೧೧ ಚಾರಣಿಗರನ್ನ ಒಟ್ಟುಸೇರಿಸಿ, ಅವರಿಂದ ಮುಂಗಡ ಹಣ ಪಡೆದು KSRTC ಯಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಮುಂಗಡ ಟಿಕೇಟ್ ಖರೀದಿ ಮಾಡಿ, ಬೀರೂರಿನಿಂದ ಬೆಂಗಳೂರಿಗೆ Return Journey ಯನ್ನ ಕಾದಿರಿಸಿದ್ರು. ನಾನು ಸಾಮಾನ್ಯವಾಗಿ ಚಾರಣಕ್ಕೆ ಹೋಗುವಾಗೆಲ್ಲಾ ನಮ್ಮ ಊಟ ಕಾಡಿನಲ್ಲೇ ತಯಾರಾಗುತ್ತಿತ್ತು. ಆದರೆ ಇಲ್ಲಿ ಅದು ಸ್ವಲ್ಪ ಬದಲಾಗಿತ್ತು. ಕಾಡಿನಲ್ಲಿ ಅಡುಗೆ ಮಾಡಿ ಊಟಮಾಡುವಬದಲಿಗೆ MTRನ Ready To Eat Packetsನ ತಂದಿದ್ದರು. ಅದರ ಜೊತೆಯಲ್ಲಿ ಕಾಡಿನಲ್ಲಿ Campingಗೆ ಬೇಕಾಗುವ Tent ಮತ್ತೆ sleeping bag ಗಳು, Tentನ ಒಳಗೆ ಹಾಸಲು ಬೇಕಾಗುವ Matಗಳ ಪೂರ್ವ ಸಿದ್ದತೆ ಆಗಿತ್ತು. ಈ ಸಲದ ಚಾರಣದಲ್ಲಿ ನನಗೆ ಹೊಸದೆನಿಸಿದ್ದು ಹರ್ಷ ತಂದಿದ್ದ GPS. ಅದರಲ್ಲಿ Google earth ನಿಂದ ಮೊದಲೇ ನಾವು ಚಾರಣ ಮಾಡುವ ಮಾರ್ಗವನ್ನ ಸಿದ್ಧಪಡಿಸಿ ತಂದಿದ್ದರು, ಅದಿಲ್ಲದಿದ್ದಲ್ಲಿ ದಟ್ಟವಾಗಿ ಮಂಜು ಕವಿದಿದ್ದರಿಂದ ನಮಗೆ ಚಾರಣ ಮಾಡಲು ದಿಕ್ಕು ದಾರಿ ತಿಳಿಯುತ್ತಿರಲಿಲ್ಲ.

ಚಾರಣಿಗರ ಪಟ್ಟಿ ಇಂತಿದೆ:


Harsha
Manohar D.C ಅವರ ಇನ್ನೊಂದು ಹೆಸರು Manu
Vishwanath ಅವರ ಇನ್ನೊಂದು ಹೆಸರು Choodi
Anees K.A
Santhosh
Dilip
Linson Jose ಅವರ ಇನ್ನೊಂದು ಹೆಸರು Linsa
Arun Sadasivan ಅವರ ಇನ್ನೊಂದು ಹೆಸರು Sadasiva
Praveen ಅವರ ಇನ್ನೊಂದು ಹೆಸರು SNMP
Joephin


ಶನಿವಾರ: ಚಿಕ್ಕಮಗಳೂರು-ಮುಳ್ಳಯ್ಯನ ಗಿರಿ-ಬಾಬಾ ಬುಡನ್ ಗಿರಿ-ಗಾಳಿಕೆರೆ ಚಾರಣ

ಶುಕ್ರವಾರ ರಾತ್ರಿ ನಾವೆಲ್ಲಾ ಬೆಂಗಳೂರಿನಿಂದ ವೋಲ್ವೋ ಬಸ್ಸಿನಲ್ಲಿ ಹೊರಟು ಶನಿವಾರ ಬೆಳಗಿನಜಾವ ಸುಮಾರು ೪:೩೦ಕ್ಕೆ ನಮ್ಮ ಐರಾವತದಲ್ಲಿ ಚಿಕ್ಕಮಗಳೂರಿಗೆ ಬಂದು ತಲುಪಿದೆವು. ಬೆಳ್ಳಂಬೆಳಿಗ್ಗೆ ಆ ಚುಮು ಚುಮು ಚಳಿಯಲ್ಲಿ ಎಲ್ಲಾ ಐರಾವತದಿಂದ ಧರೆಗಿಳಿದೆವು :D . ಇಳಿಯುತ್ತಿದ್ದಂತೇ ಎಲ್ಲರ ಕಣ್ಣೂ ಹುಡುಕಿದ್ದು ಟೀ ಅಂಗಡಿಯನ್ನ. ನಾವೆಲ್ಲಾ ಬಿಸಿ ಬಿಸಿ ಟೀ ಆಸ್ವಾಧಿಸುತ್ತಿದ್ದರೆ ಹರ್ಷ ಮತ್ತೆ ವಿಶ್ವನಾಥ್ ನಮಗಾಗಿ Lodge ವ್ಯವಸ್ಥೆ ಮಾಡಲು ಹೋಗಿದ್ದರು. ಒಟ್ಟಿಗೇ ಅಷ್ಟುಜನ ಬಸ್ಸಿನಿಂದ ಇಳಿದದ್ದನ್ನು ನೋಡಿದ Wollen Cap ಮಾರುವವನು ತನ್ನ ಅಂಗಡಿಯನ್ನೇ ನಾವು ನಿಂತಿದ್ದ ಸ್ಥಳಕ್ಕೆ ತಂದಿದ್ದ. ನಮ್ಮಲ್ಲಿ ಕೆಲವರು ಅವನಿಂದ Cap ಖರೀದಿಸಿದ ನಂತರ ಹರ್ಷ ಅವರು Book ಮಾಡಿದ್ದ Lodgeನತ್ತ ಪಯಣ ಬೆಳೆಸಿದ್ವಿ.


ಹರ್ಷ ಮತ್ತೆ ವಿಶ್ವನಾಥ್ ಬಹಳಹೊತ್ತು ಹುಡುಕಿದ ನಂತರ Naveen-Lodge ಎಂಬಲ್ಲಿ ನಮಗೆ ಕೊಠಡಿಯ ವ್ಯವಸ್ಥೆಯಾಯಿತು. ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿದ ನಂತರ ಹತ್ತಿರದಲ್ಲೇ ಇದ್ದ ಹೊಟೇಲ್ ಒಂದರಲ್ಲಿ ಇಡ್ಲಿ, ವಡೆ ತಿಂಡಿ ತಿಂದು ಸುಮಾರು ೭:೪೫ ಕ್ಕೆ ಅಲ್ಲಿಯೇ ಒಂದು ಜೀಪು ಮತ್ತೊಂದು ಮಾರುತಿ ಆಮ್ನಿ ಯನ್ನ ಬಾಡಿಗೆ ಪಡೆದು ಸುಮಾರು ೧೫ ಕಿ.ಮೀ ದೂರದ ನಮ್ಮ ಚಾರಣ ಪ್ರಾರಂಭವಾಗುವ ಸ್ಥಳಕ್ಕೆ ೮:೩೦ ರ ಹೊತ್ತಿಗೆ ಎಲ್ಲಾ ಚಾರಣಿಗರು ಬಂದಿಳಿದೆವು.


ಆ ಎರಡೂ ವಾಹನಗಳಿಗೆ ೬೦೦ ರೂಪಾಯಿ ಹಣ ನೀಡಿ, ಮೊದಲೇ ಚಿಕ್ಕಮಗಳೂರಿನ ಕಾಮತ್ ಹೋಟೇಲಿನಿಂದ ಕಟ್ಟಿಸಿಕೊಂಡು ಬಂದಿದ್ದ ತಿಂಡಿಯ ಪೊಟ್ಟಣಗಳನ್ನ (೨ ಚಪಾತಿ + ಖಾರಾ ಭಾತ್) ಪ್ರತಿಯೊಬ್ಬರು ಪಡೆದು, ನಮ್ಮ ಕಾಲಿಗೆ ಜಿಗಣೆಗಳು ಹತ್ತದಂತೆ ಮನೋಹರ ತಂದಿದ್ದ Body sprayಯನ್ನ ಹಾಕಿಸಿಕೊಂಡು ಚಾರಣದ ಹಾದಿಯಲ್ಲಿ ನಡೆದೆವು.


ಈ ಸ್ಥಳಕ್ಕೆ ಸರ್ಪಹಾದಿ ಎಂದು ಹೆಸರು. ಇಲ್ಲಿಂದಲೇ ನಮ್ಮ ಚಾರಣದ ಆರಂಭ. ಚಾರಣದ ಹಾದಿ ಹಾವಿನ ಮಾದರಿಯಲ್ಲಿ ಇದ್ದದ್ದರಿಂದಲೇ ಆ ಹೆಸರು ಬಂದಿರಬೇಕು. ನಮ್ಮ ಹಾದಿ ಸರ್ಪಹಾದಿಯ ಕಮಾನಿನಿಂದ ಪ್ರಾರಂಭವಾಯ್ತು. ಹಾದಿ ಸ್ವಲ್ಪ ಕಡಿದಾಗಿದ್ದರೂ ಬಹಳ ಕಠಿಣವಾಗಿರಲಿಲ್ಲ. ಪಕ್ಕಾ ಹಾವಿನ ಹಾದಿಯಂತೆ Zig-zag ಆಗಿತ್ತು. ಹಾದಿಬದಿಯಲ್ಲಿ ಹಲವಾರು ಪದರಗಳೊಳಗೊಂಡ ಬಂಡೆಗಲ್ಲುಗಳು ಸುಂದರವಾಗಿದ್ದವು. ಚಾರಣದ ಆರಂಭದಲ್ಲಿ ಸಾಧಾರಣ ಕ್ಯಾಮರಾ ತಂದಿದ್ದ ನನಗೆ ನಮ್ಮನ್ನ ಸುತ್ತುವರೆದಿದ್ದ ಮಂಜಿನಿಂದ ಹೆಚ್ಚು Photoಗಳನ್ನ ತೆಗೆಯಲಾಗಲಿಲ್ಲ :(


ಚಾರಣದ ಪ್ರಾರಂಭದಿಂದ ಅಂತ್ಯದವರೆಗೂ ನಮ್ಮೊಡನೆ "ನಿಷ" ಇದ್ದದ್ದು ಒಂದುರೀತಿಯಲ್ಲಿ ಸಂತಸದ ವಿಷಯವಾದರೂ ಮತ್ತೊಂದೆಡೆ ಬೇಸರ ತರಿಸಿತ್ತು. ಅಂದಹಾಗೆ ಈ "ನಿಷ" ಯಾರೆಂದು ಕುತೂಹಲವಿದ್ದಲ್ಲಿ ಹೇಳಿಬಿಡುತ್ತೇನೆ. ೨೦೦೮ರ ನವೆಂಬರಿನ ಕೊನೆಯವಾರದಲ್ಲಿ ತಮಿಳುನಾಡಿಗೆ ಅಪ್ಪಳಿಸಿದ್ದ ಚಂಡಮಾರುತದ ಹೆಸರೇ "ನಿಷ" ಇದರಿಂದ ನಮಗಾದ ಉಪಯೋಗ ಅಂದರೆ ಚಾರಣದಲ್ಲಿ ಎಲ್ಲಿಯೂ ನಾವು ಬಿಸಿಲಿನ ತಾಪದಿಂದ ಬಳಲಲಿಲ್ಲ ಆದ್ದರಿಂದ ಸಂತಸ :). ಬೇಸರದ ವಿಷಯ ಎಂದರೆ ನಿಸರ್ಗದ ಸೊಬಗನ್ನು ನಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲಾಗಲಿಲ್ಲ ಎಂಬುದು :|. ಚಂಡಮಾರುತದ ಪ್ರಭಾವ ಎಷ್ಟಿತ್ತೆಂದರೆ ದಟ್ಟವಾದ ಮಂಜು ನಮ್ಮ ದೃಷ್ಟಿ ೧೦ಮೀಟರ್ ಮೀರಿ ಹೋಗದಂತೆ ತಡೆ ಹಿಡಿದಿತ್ತು. ನನ್ನ ಹಿಂದಿನ ಕೆಲವು ಚಾರಣದಲ್ಲಿ ವರುಣನ ಜೊತೆಯಾದರೆ ಇಲ್ಲಿ ಮಂಜಿನ ಜೊತೆಗೇ ನಮ್ಮ ಚಾರಣ ಮುಂದುವರೆದಿತ್ತು.


ನಮ್ಮಂತೆಯೇ ಹಲವು ಚಾರಣಿಗರು ಇಲ್ಲಿ ಆಗಾಗ ಬರುವುದುಂಟು, ಹಾಗಾಗಿ ಕಾಲುದಾರಿ ನಮಗೆ ಸ್ಪಷ್ಟವಾಗೇ ಕಾಣುತ್ತದೆ. ಇದು ಆರಂಭದ ಹಂತ ಮಾತ್ರ. ಮಂಜಿನ ಕಾರಣದಿಂದ ನಮಗೆ ಬೆಟ್ಟದಮೇಲಿನ ದೊಡ್ಡ ಬಂಡೆ ಕಾಣಲಿಲ್ಲ, ಸೂರ್ಯನ ಬೆಳಕಿದ್ದಲ್ಲಿ ಅದು ಗೊಚರಿಸುತ್ತದೆ ಎಂದು ಹರ್ಷನಿಂದ ತಿಳಿದುಬಂತು. ಹಾದಿಯುದ್ದಕ್ಕೂ ಹುಲ್ಲು ಹಾಸಿನ ಮೇಲೆ ಮಂಜಿನ ಹನಿಗಳು ಮುತ್ತಿನ ಮಾಲೆಯಂತೆ ಕಾಣಿಸುತ್ತಿತ್ತು. ಸಾಧ್ಯವಾದಷ್ಟೂ ಅವುಗಳನ್ನ ನನ್ನ ಕ್ಯಾಮರದಲ್ಲಿ ಸೆರೆ ಹಿಡಿದೆ. ಮಾರ್ಗಮಧ್ಯದಲ್ಲಿ ಸ್ವಲ್ಪ ಹಾದಿ ತಪ್ಪಿ ಬೇರೆ ಹಾದಿ ಹಿಡಿದು ಹೊರಟಿದ್ದೆವು, ನಂತರ ಮರಳಿ ಸರಿಯಾದ ದಾರಿಯಲ್ಲಿ ನಮ್ಮ ಪಯಣ ಮುಂದುವರೆಯಿತು.





ಅಂದಾಜು ಅರ್ಧ ದಾರಿಯಾದಮೇಲೆ ಒಂದು ನಂದಿಯ ವಿಗ್ರಹವನ್ನು ಕಾಣಬಹುದು. ಸೂರ್ಯನ ಬೆಳಕಿದ್ದಲ್ಲಿ ಇಲ್ಲಿಂದಲೇ ದೇವಸ್ಥಾನದ ಗೋಪುರವನ್ನ ನೋಡಬಹುದಂತೆ. ಅಲ್ಲಿಂದ ಸುಮಾರು ೧೦-೧೫ ನಿಮಿಷಗಳ ಚಾರಣದ ನಂತರ ನಮಗೆ ಒಂದು ಗುಹೆ ಕಾಣಿಸಿತು.


ನಮ್ಮಲ್ಲಿ ಕೆಲವರು ಆಲ್ಲಿಗೆ ಹೋಗಿ ಅದರ ಒಳಹೊಕ್ಕು ಕೆಲವು Photoಗಳನ್ನ ಕ್ಲಿಕ್ಕಿಸಿ ಮತ್ತೆ ದೇವಸ್ಥಾನದ ದಾರಿ ಹಿಡಿದೆವು. ದೇವಸ್ಥಾನ ತಲುಪುವ ಹೊತ್ತಿಗೆ ಸಮಯ ಅಂದಾಜು ೧೦:೧೫ ಆಗಿತ್ತು.



ಮೊದಲಿದ್ದ ದೇವಸ್ಥಾನವನ್ನ "ಜೀರ್ಣೊದ್ಧಾರ" ಮಾಡುತ್ತಿದ್ದರು, ಹಾಗಾಗಿ ಅಲ್ಲಿ ಹಲವು ಕಾರ್ಮಿಕರು ಮತ್ತು ಹತ್ತಿರದ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳು ಇದ್ದರು. ನಮ್ಮನ್ನೆಲ್ಲಾ ನೋಡಿ ಮಂಜಿನ ನಡುವೆ ನಮ್ಮ ಚಾರಣಮಾಡುವ ಉತ್ಸಾಹ ಕಂಡು ಅಚ್ಚರಿ ಪಟ್ಟರು. ಅಲ್ಲಿಯ ಪ್ರಧಾನ ಅರ್ಚಕರಿಂದ ನೆನ್ನೆ ಬಾಬಾಬುಡನ್ ಗಿರಿ ಮತ್ತು ಸುತ್ತಲ ಪ್ರದೇಶಗಳಲ್ಲಿ ಧರಾಕಾರವಾಗಿ ಮಳೆಯಾಗಿ ಮಣ್ಣು ಕುಸಿದಿರುವುದು ತಿಳಿದುಬಂತು. ಅಲ್ಲಿಯೇ ಸ್ವಲ್ಪ ಹೊತ್ತು ಕೂತಿದ್ದು ಅರ್ಚಕರ ಮನೆಯಲ್ಲಿ ನಾವು ಕೊಂಡೊಯ್ದಿದ್ದ ಹಾಲನ್ನು ಅವರಿಗೆ ನೀಡಿ ಅವರಿಂದ ಕಾಫೀ ಮಾಡಿಸಿಕೊಂಡು ಕುಡಿದು ಅವರು ಸಾಕಿದ್ದ ಬೆಕ್ಕಿನ Photoಗಳನ್ನ ಸೆರೆ ಹಿಡಿದು ಪರ್ವತದಂಚಿನ ಕಡೆಗೆ (Ridge) ನಮ್ಮ ಪಯಣಬೆಳೆಸಿದೆವು.





ನಾವು ಮುಳ್ಳಯ್ಯನ ಗಿರಿಯಿಂದ ಬಾಬಾ ಬುಡನ್ ಗಿರಿಯನ್ನು ತಲುಪಲು ಪರ್ವತಗಳ ಅಂಚಿನಲ್ಲೇ ಸಾಗಬೇಕಿತ್ತು.




ಆ ದಟ್ಟವಾಗಿ ಕವಿದಿದ್ದ ಮಂಜಿನ ನಡುವೆ GPSನ ಸಹಾಯದಿಂದ ಸರಿಯಾದ ದಾರಿಯಲ್ಲೇ ಹೋಗುತ್ತಿದ್ದೆವು. ನಮ್ಮ ಸಧ್ಯದ ಗುರಿಯಿದ್ದದ್ದು ನಮ್ಮ Lunch point ನೆಡೆಗೆ. ನಾವು ದೇವಸ್ಥಾನದಿಂದ ಹೊರಟಾಗ ಅಂದಾಜು ೧೧:೧೫ ರ ಸಮಯ. ನಮ್ಮ Lunch point ತಲುಪಲು ನಾವು ಪರ್ವತದಿಂದ ಇಳಿದು ಮತ್ತೆ ನಮ್ಮ ಊಟದ ಕಾರ್ಯಕ್ರಮವನ್ನ ಮುಗಿಸಿ ಮುಂದೆ ಸಾಗಬೇಕಿತ್ತು. ಇಂತಹಾ ಸ್ಥಳಗಳಲ್ಲಿ ಸಂಜೆಯ ಹೊತ್ತಿಗೆ ಸುರಿಯುವ ಮಳೆ ಸಾಮಾನ್ಯ. ಮಳೆಯನಡುವೆ ಪರ್ವತದ ಅಂಚಿನಲ್ಲಿ ಚಾರಣ ಮಾಡುವುದು ಕಷ್ಟವಾದ್ದರಿಂದ ಅಲ್ಲಿದ್ದ ಅನುಭವಿ ಚಾರಣಿಗರು ಎಲ್ಲರನ್ನೂ ಸಾಧ್ಯವಾದಷ್ಟು ಬೇಗ ಗುರಿ ಮುಟ್ಟಿಸಲು ನಮ್ಮೆಲ್ಲರನ್ನು ಹುರಿದುಂಬಿಸುತ್ತಿದ್ದರು. ಅಂದಾಜು ಒಂದು ಘಂಟೆಯ ಚಾರಣದ ನಂತರ ಸ್ವಲ್ಪ ಸ್ವಲ್ಪವಾಗಿ ಸೂರ್ಯಕಿರಣ ಕಾಣಲಾರಂಭಿಸಿತು. :) ಆದರೆ ಅದು ಇದ್ದದ್ದು ಕೇವಲ ೫ ನಿಮಿಷಗಳು ಮಾತ್ರ. ಆದರೂ ಆ ನಡುವೆಯೇ ನಮಗೆ ಛಾಯಾಗ್ರಹಣಕ್ಕೆ ಸಮಯ ಸಿಕ್ಕಿತ್ತು. ಮೋಡಗಳು ನಮ್ಮ ಕಾಲಕೆಳಗೆ ತೇಲಾಡುತ್ತಿದ್ದವು. ಇದುವರೆವಿಗೂ ಮೋಡದ ಒಳಗೇ ಚಾರಣ ಮಾಡುತ್ತಿದ್ದ ನಮಗೆ ಪ್ರಕೃತಿಯ ಸೊಬಗು ಕಂಡಿದ್ದು ಆ ೫ ನಿಮಿಷಗಳಲ್ಲೇ ಹೆಚ್ಚು. ಪರ್ವತಗಳ ನಡುವೆ ಕಂಡುಬರುವ ಕಣಿವೆಗಳ ನೋಟ, ಮೋಡಗಳ ತೇಲಾಟ ಎಲ್ಲವೂ ನಯನ ಮನೋಹರವಾಗಿತ್ತು.

ಇದುವರೆವಿಗೂ ತಮ್ಮ ಬ್ಯಾಗಿನಲ್ಲಿ ಬೆಚ್ಚಗೆ ಕುಳಿತಿದ್ದ ಎಲ್ಲಾ ಕ್ಯಾಮರಗಳೂ ಆ ಸೊಬಗನ್ನು ನೋಡಲು ಹೊರಗೆ ಬಂದಿದ್ದವು. ಅಲ್ಲಿ ಕ್ಯಾಮರ ಹೊಂದಿದ್ದ ಪ್ರತಿಯೊಬ್ಬರೂ ಆಗ ಅತ್ಯುತ್ತಮ ಛಾಯಾಗ್ರಾಹಕರೇ !!!! :D




ನಾವೆಲ್ಲಾ ಸುಮಾರು ೧೨:೪೦ ರ ಹೊತ್ತಿಗೆ Lunch point ತಲುಪಿದ್ದೆವು. ನಮ್ಮ Lunch point ಒಂದು Tar-roadನ ಹತ್ತಿರವಿದ್ದ View point. ಅಲ್ಲಿಂದ ಸುತ್ತಮುತ್ತಣ ಪರ್ವತ ಶ್ರೇಣಿಗಳು, ನಿಸರ್ಗದ ಹಸಿರಿನ ಸಿರಿ ಎಲ್ಲಾ ರಮಣೀಯವಾಗಿ ಕಾಣುತ್ತಿತ್ತು. ನಾವು ಊಟಮಾಡಲು ಆಯ್ಕೆಮಾಡಿದ ಸ್ಥಳದಲ್ಲಿಯೇ ಚಿಕ್ಕಮಗಳೂರಿನ ಕೆಲವು ಪ್ರಾಧ್ಯಾಪಕರು, ಮತ್ತೆ ಕೆಲವು Business men ಗಳೂ ಸೇರಿ ಅಲ್ಲಿ ತಮ್ಮ Party ಆಚರಿಸಲು ಬಂದಿದ್ದರು :P. ಅವರೊಡನೆ ಸ್ವಲ್ಪ ಮಾತುಕತೆಯಾದ ನಂತರ ನಮಗೆ ಅವರಿಂದ ಸ್ವಲ್ಪ ತಿಂಡಿ ಮತ್ತು ಹಣ್ಣುಗಳು ಸಿಕ್ಕಿತು. ಸುಮಾರು ೧೨:೪೦ ರ ಹೊತ್ತಿಗೆ ನಮ್ಮ ಊಟದ ಕಾರ್ಯಕ್ರಮ ಸಂಪನ್ನ ಗೊಂಡಿತ್ತು.




ಅಲ್ಲಿ ಬಂದವರೊಂದಿಗೆ ಕೆಲವು Photo ತೆಗೆಸಿಕೊಂಡು ಅಲ್ಲಿಂದ ಸುಮಾರು ೧೩:೩೦ರ ಹೊತ್ತಿಗೆ ನಮ್ಮ ಚಾರಣವನ್ನು ಮುಂದುವರೆಸಿದೆವು. ನಮ್ಮ ಮುಂದಿನ ಗುರಿ ಇದ್ದದ್ದು BSNLನ tower ಬಳಿಗೆ. ಸಾಮಾನ್ಯ ದಿನಗಳಂದು ಬರಿಗಣ್ಣಿಗೆ ಕಾಣುವ ಈ tower ಅಂದು ಮುಸುಕಿದ್ದ ಮಂಜಿನ ಕಾರಣದಿಂದ ನಮಗೆ ಕಾಣಿಸಲಿಲ್ಲ. GPSನ ಸಹಾಯ ಪಡೆದು ಪರ್ವತದ ಮತ್ತೊಂದು ತುದಿಯಲ್ಲಿದ್ದ ಆ towerನೆಡೆಗೆ ನಾವೆಲ್ಲಾ ಪರ್ವತದ ಅಂಚಿನಲ್ಲಿ ಹೆಬ್ಬಂಡೆಗಳ ನಡುವೆ ಸಾಹಸ ಪಡುತ್ತಾ ನಡೆಯುತ್ತಿದ್ದೆವು. ನಮ್ಮ ಗುರಿಯಿದ್ದದ್ದು ಆ ಟವರ್ರಿನ ಬಳಿಯಿರುವ ರಸ್ತೆ ಸೇರಿ ಅಲ್ಲಿಂದ ಅಂದಾಜು ೭ ಕಿ.ಮೀ ದೂರವನ್ನ ಕ್ರಮಿಸಿ ಬಾಬಾ ಬುಡನ್ ಗಿರಿಯನ್ನು ತಲುಪಬೇಕೆನ್ನುವುದು. ಅದಕ್ಕಾಗಿ ನಾವು ಹುಲ್ಲುಗಾವಲುಗಳು ಮತ್ತು ಹೆಬ್ಬಂಡೆಯಿಂದ ಕೂಡಿದ ಪರ್ವತಗಳನ್ನ ದಾಟಿ ಹೋಗಬೇಕಿತ್ತು.



ನಾವು ನಡೆಯುತ್ತಿದ್ದ ಹಾದಿಯಲ್ಲಿ ಯಾವುದೇ ಕಾಲುದಾರಿಯ ಕುರುಹುಗಳಿರದ ಕಾರಣ ನಮ್ಮ ದಾರಿಯನ್ನು ನಾವೇ ಕಂಡುಕೊಂಡು ಮುನ್ನಡೆಯಬೇಕಿತ್ತು. ಹೀಗಿರುವಾಗ ಮಾರ್ಗಮಧ್ಯದಲ್ಲಿ ನಮಗೆ ಹೆಬ್ಬಂಡೆಯೊಂದು ಎದುರಾಗಿ ಎತ್ತಕಡೆ ಹೋಗುವುದು ಎಂದು ಯೋಚಿಸುವಂತಾಯಿತು. ಸ್ವಲ್ಪ ವಾಲಿಕೊಂಡಿದ್ದ ಆ ಬಂಡೆಯನ್ನು ದಾಟಿ ಹೋಗಲು ಒಂದೋ ಅದರ ಕೆಳಗಿನಿಂದ ಇದ್ದ ಸ್ವಲ್ಪವೇ ಜಾಗದಲ್ಲಿ ನುಸುಳಿಕೊಂಡು ಹೋಗಬೇಕು, ಇಲ್ಲವಾದಲ್ಲಿ ಅದನ್ನ ಜಾಗ್ರತೆಯಿಂದ ಹತ್ತಿ ದಾಟಬೇಕಾಗಿತ್ತು. ಎರಡೂ ಕಷ್ಟವಾದ ಕೆಲಸಗಳೇ. ಮಂಜಿನಿಂದ ಸ್ವಲ್ಪ ಒದ್ದೆಯಾಗಿದ್ದ ಆ ಬಂಡೆಯ ಕೆಳಗೆ ನುಸುಳುವಾಗ ಅಥವಾ ಹತ್ತಿ ದಾಟುವಾಗ ಆಯತಪ್ಪಿದಲ್ಲಿ ಪರ್ವತದಿಂದ ನೇರವಾಗಿ ಕೆಳಗೆ ಬೀಳುವುದೇ !!!! ನಮ್ಮಲ್ಲಿ ಕೆಲವರು ಆ ಬಂಡೆಯ ಕೆಳಗಿನಿಂದ ನುಸುಳಿದರೆ ಮಿಕ್ಕವರು ಅದನ್ನು ಏರಿಕೊಂಡು ಹಾಗೂ ಹೀಗೂ ದಾಟಿ ಬಂದರು. ಕೆಲವು ಬಂಡೆಗಳು ಮಂಜಿನ ನೀರಿಗೆ ಒದ್ದೆಯಾದ್ದರಿಂದ ನಮ್ಮ ಕಾಲುಗಳು ಜಾರುತ್ತಲಿದ್ದವು. ಇಂತಹಾ ಸಮಯದಲ್ಲಿ ನಿಮ್ಮ ಅನುಭವ ಮತ್ತು ತಾಳ್ಮೆಯೇ ನಿಮಗೆ ಶ್ರೀರಕ್ಷೆ. ಒಂದು ಹಂತದಲ್ಲಿ ನಮ್ಮೊಂದಿಗೆ ಬಂದಿದ್ದ ಪ್ರವೀಣ್ ಆ ಬಂಡೆಗಳನ್ನು ಹತ್ತಲಾಗದೇ ನಮ್ಮ Lunch Point ಗೆ ಮರಳಿ ಅಲ್ಲಿಂದ ಇದ್ದ ರಸ್ತೆಯಲ್ಲಿ ಯಾವುದಾದರೂ ಬಸ್ ಹಿಡಿದು ಬಾಬಾ ಬುಡನ್ ಗಿರಿಗೆ ಬರುವುದಾಗಿ ಹೇಳಿದರೂ ನಂತರ ಪ್ರಯಾಸದಿಂದ ನಮ್ಮ ಮಾರ್ಗದಲ್ಲೇ ಬಂದದ್ದು ನಮಗೂ ಮತ್ತು ಅವನಿಗೂ ಖುಷಿತಂದಿತ್ತು.


ಬಂಡೆಗಳನ್ನ ದಾಟಿ ನಂತರ ಹುಲ್ಲುಗಾವಲಿನ ಚಾರಣ ಆರಂಭವಾಯಿತು. ಇಷ್ಟು ಹೊತ್ತಿಗೆ ನಮ್ಮನ್ನಾವರಿಸಿದ್ದ ಮಂಜು ಕರಗಿದ್ದದ್ದರಿಂದ ನಮಗೆ ದೂರದಲ್ಲಿ ನಿಂತಿದ್ದ ಟವರ್ ಕಾಣುತ್ತಿತ್ತು. ಬಂಡೆಗಳನ್ನ ಹತ್ತುವ ಸಾಹಸವಿಲ್ಲದ್ದರಿಂದ ಎಲ್ಲಾ ಹುಲ್ಲುಗಾವಲಿನಲ್ಲಿ ಸ್ವಲ್ಪ ಸುಧಾರಿಸಿಕೊಂಡು ನಡೆಯುತ್ತಿದ್ದೆವು. ಇದೇ ಜಾಗದ ಸಪೀಪದಲ್ಲಿ ಇರುವುದೇ "ಮಾಣಿಕ್ಯಧಾರಾ". ನಾವೆಲ್ಲಾ ಸುಮಾರು ೧೬:೦೦ ರ ಹೊತ್ತಿಗೆ BSNL ಟವರ್ರಿನ ಹತ್ತಿರವಿರುವ ಪಾಳುಬಿದ್ದಿದ್ದ ಪೋಲೀಸ್ ಚೆಕ್ ಪೋಸ್ಟ್ ಬಳಿ ಬಂದೆವು. ಅಲ್ಲಿ ಕೆಲವರು ಕುಳಿತುಕೊಂಡು ಸುಧಾರಿಸಿಕೊಂಡರೆ ಮಿಕ್ಕವರು ಆ ಟವರ್ರನ್ನು ಹತ್ತುವ ಸಾಹಸ ಮಾಡುತ್ತಿದ್ದರು. :D


ಅಲ್ಲಿಂದ ನಮ್ಮ ಚಾರಣ ೧೪:೩೦ಕ್ಕೆ ಮತ್ತೆ ಪ್ರಾರಂಭವಾಗಿ ಡಂಬಾರು ರಸ್ತೆಯ ಮೂಲಕ ಬಾಬಾ ಬುಡನ್ ಗಿರಿಯತ್ತ ಹೊರಟಿತ್ತು. ಮಾರ್ಗಮಧ್ಯದಲ್ಲಿ ನಮಗೆ ಕೆಲವು ಸುಂದರವಾದ Photoಗಳು ಸೆರೆ ಸಿಕ್ಕವು. ನಾವಲ್ಲಿಂದ ಹೋಗುತ್ತಿದ್ದಂತೆಯೇ ನಮ್ಮನ್ನ ಗಾಳೀಕೆರೆಗೆ ಕರೆದೊಯ್ಯಲು ಜೀಪ್ ಡ್ರೈವರ್ ಗಳು ಪೈಪೋಟಿ ನಡೆಸುತ್ತಿದ್ದರು. ಕೊನೆಗೆ ಒಂದು ಜೀಪ್ ಚಾಲಕನ ಹತ್ತಿರ ಹರ್ಷ ಮಾತನಾಡಿ ಚರ್ಚೆ ಮಾಡಿ ಅವನಿಗೆ ನಮ್ಮ ಲಘು ಉಪಹಾರವನ್ನು ಮುಗಿಸುವ ವರೆಗೆ ಕಾಯುವಂತೆ ಹೇಳಿ ಹೊಟೇಲಿನ ಕಡೆಗೆ ನಡೆದೆವು, ಸಮಯ ಸುಮಾರು ೧೭:೧೫ ಆಗಿರಬಹುದು. ನಾನು, ಹರ್ಷ, ಪ್ರವೀಣ್ ಮತ್ತೆ ವಿಶ್ವನಾಥ್ ಸಸ್ಯಾಹಾರಿಗಳಾದ್ದರಿಂದ ಪರೋಟ ಮತ್ತು ದಾಲ್ ತಿಂದರೆ ಮಿಕ್ಕವರು ಆಮ್ಲೇಟನ್ನು ಸವಿದರು. ಅಲ್ಲಿಂದ ಕೇವಲ ೧೦ ನಿಮಿಷದ ದಾರಿಕ್ರಮಿಸಿದ ನಂತರ ನಮ್ಮ ಮುಂದಿನ ಗುರಿ ಸಿಕ್ಕಿಬಿಟ್ಟಿತು, ಅದೇ ಗಾಳೀಕೆರೆ. ಇಷ್ಟು ಹೊತ್ತಿಗೇ ಸಂಜೆ ೧೮:೩೦ರ ಸಮಯ, ಮಂಜು ನಮ್ಮನ್ನು ಸ್ವಲ್ಪ ಸ್ವಲ್ಪವಾಗೇ ನುಂಗುತ್ತಿತ್ತು.


ಸಂಜೆ ಅಲ್ಲಿಯೇ Camping ಆದ್ದರಿಂದ ನಾವೆಲ್ಲಾ ನಮ್ಮ ಬೆನ್ನ ಮೇಲಿದ್ದ ಹೊರೆಯನ್ನು ಕೆಳಗಿಳಿಸಿ ಸ್ವಲ್ಪ ವಿಶ್ರಾಂತಿ ಪಡೆದೆವು. ಪರ್ವತಗಳಿಂದ ಮೂರೂಕಡೆಗಳಿಂದ ಆವರಿಸಲ್ಪಟ್ಟ ಪ್ರದೇಶವಿದು. ಮತ್ತೊಂದೆಡೆ ದೊಡ್ಡ ಕಣಿವೆ, ಅಲ್ಲಿಯೇ ಒಂದು ಪುಟ್ಟ ಕೆರೆ. ಆ ಕೆರೆ ಎಷ್ಟು ದೊಡ್ಡದೆಂದು ನೋಡಲಾಗಲಿಲ್ಲ, ಎತ್ತನೋಡಿದರೂ ಅಲ್ಲಿ ಬರೀ ಮಂಜನ್ನು ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ. ಆ ಸ್ಥಳದಲ್ಲಿ ಒಂದು ಗುಡಿಸಲಿನ ಅಳಿದುಳಿದ ಕಂಬಗಳಿದ್ದವು. ಅಲ್ಲಿ ೩ Tentಗಳನ್ನು ಹಾಕಲು ಸ್ಥಳಾವಕಾಶವಿಲ್ಲದ್ದರಿಂದ ಅಲ್ಲಿಂದ ಸ್ವಲ್ಪ ಮುಂದೆ ಸಮತಟ್ಟಾದ ಪ್ರದೇಶದಲ್ಲಿ ನಮ್ಮ Tentಗಳನ್ನ ಹಾಕುವುದಾಗಿ ನಿರ್ಧರಿಸಿ Tentಗಳನ್ನ ಹಾಕಲು ಶುರುಮಾಡಿದೆವು. ಸಂಜೆ ಮಂಜು ಮುಸುಕಿದ್ದರಿಂದ ಬಹಳ ಬೇಗ ಕತ್ತಲು ಆವರಿಸುತ್ತಿತ್ತು. ಅನೀಸ್ ಮತ್ತು ತಂಡ ಬಿಸಿನೀರಿನ ವ್ಯವಸ್ಥೆಮಾಡಲು ಶುರುಮಾಡಿದರೆ ನಾವೆಲ್ಲಾ ಟೆಂಟ್ ಗಳನ್ನ ಹಾಕುತ್ತಿದ್ದೆವು.

ಟೆಂಟ್ ಹಾಕಿದನಂತರ ನಾವೆಲ್ಲಾ ಊಟಕ್ಕೆ ಹಾಜರಾದೆವು. ಅಂದಿನ ಊಟ MTRರವರ Ready to eat Rice items ಆಗಿತ್ತು. ತಯಾರಿಸಲು ಬಹಳ ಸುಲಭವಾದ ಆ ಪ್ಯಾಕೇಟುಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿ ೫ ನಿಮಿಷಗಳಕಾಲ ಬಿಟ್ಟರೆ ಬಿಸಿ ಬಿಸಿಯಾದ ರುಚಿ ರುಚಿಯಾದ ಅಡುಗೆ ಸಿದ್ದ. ಆದರೆ ಆ ಮಂಜು ಮುಸುಕಿದ್ದ ಬೆಟ್ಟದಲ್ಲಿ ಕುದಿಯುವ ನೀರನ್ನು ಸಿದ್ದಪಡಿಸುವುದೇ ಒಂದು ಸಾಹಸ. ಅಂತೂ ಇಂತೂ ಅನೀಸ್ ಮತ್ತವನ ತಂಡದಿಂದ ನಮ್ಮೆಲ್ಲರ ಊಟದ ಕಾರ್ಯಕ್ರಮ ಮುಗಿದಿತ್ತು.

ಕತ್ತಲು ಬೇಗನೇ ಆವರಿಸಿದ್ದರಿಂದ ಸುಮಾರು ೮.೩೦ಕ್ಕೆ ನಾವೆಲ್ಲಾ ನಮ್ಮ ನಮ್ಮ ಟೆಂಟಿನಲ್ಲಿ ಮಲಗಿದ್ವಿ. ನಾನು ಮತ್ತು ಪ್ರವೀಣ್ ಒಂದು ಟೆಂಟಿನಲ್ಲಿ ಮಲಗಿದ್ವಿ. ನಮ್ಮ ಟೆಂಟ್ ಸ್ವಲ್ಪ ಮಧ್ಯದಲ್ಲಿ ಇದ್ದದ್ದರಿಂದ ನಮಗೇನೂ ತೊಂದರೆ ಆಗಲಿಲ್ಲ. ಆದರೆ ಮಿಕ್ಕ ೨ ಟೆಂಟ್ ಗಳಲ್ಲಿದ್ದವರಿಗೆ ನಿದ್ರೆ ಇರಲಿಲ್ಲ ಅಂತ ಬೆಳಗ್ಗೆ ನಾನು ಎದ್ದಮೇಲೆ ತಿಳಿದದ್ದು. ರಾತ್ರಿ ರಭಸದಿಂದ ಬೀಸಿದ ಗಾಳಿ ಎರಡರಲ್ಲಿ ಒಂದು ಟೆಂಟಿನ ಮೇಲ್ಚಾವಣಿಯನ್ನ ಹಾರಿಸಿತ್ತಂತೆ. ನಂತರ ಅವರೆಲ್ಲಾ ಬೇರೆಕಡೆಗಳಲ್ಲಿ ಮತ್ತೆ ಟೆಂಟನ್ನ ಹಾಕಿ ಮಲಗಿದ್ರಂತೆ. ನಾವಿಬ್ಬರೂ ಚೆನ್ನಾಗಿ ನಿದ್ದೆ ಮಾಡಿದ್ವಿ :)

ಎರಡನೇ ದಿನ (ಭಾನುವಾರ) ನಮ್ಮ ಪಯಣ ಗಾಳೀಕೆರೆಯಿಂದ ಕೆಮ್ಮಣ್ಣುಗುಂಡಿಗೆ ಹೋಗಿ ಅಲ್ಲಿಂದ ಬೀರೂರಿನಲ್ಲಿರುವ ರೈಲ್ವೇನಿಲ್ದಾಣಕ್ಕೆಬಂದು ಅಲ್ಲಿಂದ ಬೆಂಗಳೂರಿನ ಕಡೆಗೆ.

ಬೆಳಗ್ಗೆ ೬.೩೦ಕ್ಕೆ ಎದ್ದು, ನಮ್ಮ ಎಲ್ಲಾಕೆಲಸವನ್ನೂ ಮುಗಿಸಿ ತಿಂಡಿ ತಿಂದು ಪಯಣ ಮುಂದುವರೆಸಿದೆವು. ಬೆಳಗಿನ ತಿಂಡಿಗೆ Cornflakes ಮತ್ತು ಹಾಲು.

ಮುರಿದು ಹೋಗಿದ್ದ ಗುಡಿಸಲಿನ ಮಧ್ಯದಲ್ಲಿ ಮೂರುಕಲ್ಲುಗಳನ್ನು ಇಟ್ಟು ಒಲೆ ಹತ್ತಿಸಿ ಹಾಲನ್ನು ಬಿಸಿಮಾಡಿಕೊಂಡು ಅದಕ್ಕೆ Cornflakes ಹಾಕಿ ತಿಂದೆವು. ನಾನು ಕೊಂಡೊಯ್ದಿದ್ದ ಸೌತೇಕಾಯಿಯನ್ನು ತಿನ್ನಲು ಇನ್ನೂ ಸಮಯ ಬಂದಿರದ ಕಾರಣ ಅದನ್ನು ಮತ್ತೆ ನನ್ನ ಬ್ಯಾಗಿಗೆ ಹಾಕಿಕೊಂಡು ಅಲ್ಲೇ ಕೆಲವು photo ಕ್ಲಿಕ್ಕಿಸಿ ಅಂದಾಜು ೮.೩೦ಕ್ಕೆ ನಮ್ಮ ಪಯಣ ಅಲ್ಲಿಂದ ಉತ್ತರದಿಕ್ಕಿನೆಡೆಗೆ ಮುಂದುವರೆಯಿತು. ದಟ್ಟವಾದ ಮಂಜು ಮುಸುಕಿದ್ದರಿಂದ ನಮ್ಮ ಎಲ್ಲಾ ಕಾರ್ಯಗಳೂ ನಿಧಾನಗತಿಯಲ್ಲಿ ಸಾಗುತ್ತಿತ್ತು.

ಅಂದಾಜು ೧೪ ಕಿಲೋಮೀಟರಿನ ಈ ಹಾದಿ ಕಠಿಣವಾದ ಹಾದಿಯೇನಲ್ಲ. ಮಾರ್ಗಮಧ್ಯದಲ್ಲಿ ನಮಗೆ ಹಲವಾರು ಶೋಲಾಗಳು (ಎರಡುಪರ್ವತಗಳು ಸೇರುವ ಮಧ್ಯದ ಕಾಡು) ಮತ್ತೆ ಕೆಲವು ಪರ್ವತದ ಅಂಚು ಮತ್ತೆ ಕೆಲವು ಝರಿಗಳು ಈ ಮಾರ್ಗದಲ್ಲಿ ಸಿಕ್ಕುತ್ತವೆ.


ಮಾರ್ಗ ಪೂರ್ಣವಾಗಿ ಮಂಜು ಮುಸುಕಿದ್ದರಿಂದ ಪ್ರತಿಯೊಬ್ಬರೂ ನಿರ್ಧಿಷ್ಟ ಅಂತರದಲ್ಲಿ ಮುಂದುವರೆಯುತ್ತಿದ್ದೆವು. ಹೆಚ್ಚುದೂರ ಬಂದರೆ ಇಬ್ಬರ ನಡುವೆ ಮಂಜು ಆವರಿಸಿ ದಾರಿ ಕಾಣಿಸುತ್ತಿರಲಿಲ್ಲ. ಗಾಳೀಕೆರೆಯಿಂದ ಕೆಮ್ಮಣ್ಣುಗುಂಡಿಯ ವರೆಗೂ ಇರುವ ಹಾದಿಯನ್ನ "ರಾಜ-ಹಾದಿ" ಎನ್ನುತ್ತಾರಂತೆ. ಹಿಂದೆ ರಾಜ ಮಹರಾಜರುಗಳು ಇದೇಹಾದಿಯಲ್ಲಿ ಕ್ರಮಿಸುತ್ತಿದ್ದರಂತೆ. ನಾವು ಚಾರಣ ಮಾಡುವಹೊತ್ತಿಗೆ ಆ ವಿಶಾಲವಾದ ಹಾದಿ ಬಹುತೇಕ ಗಿಡಗಂಟೆಗಳಿಂದ ಮುಚ್ಚಲ್ಪಟ್ಟಿತ್ತು. ನಮ್ಮೊಡನೆ GPS ಇಲ್ಲದಿದ್ದಲ್ಲಿ ಮಾರ್ಗಮಧ್ಯೆ ಕಳೆದುಹೋಗುವ ಸಂಭವ ಹೆಚ್ಚಿತ್ತು. ಚಾರಣದ ಮಧ್ಯೆ ಮಂಜಿಲ್ಲದ ದಿನಗಳಲ್ಲಿ ಹಾದಿ ಸುಗಮವಾಗಿರುತ್ತದೆ. ಮಾರ್ಗಮಧ್ಯೆ ನಮಗೆ ಅಂದಾಜು ೬-೭ ಶೋಲಾ ಕಾಡುಗಳು ಎದುರಾಗುತ್ತವೆ. ಅಲ್ಲೆಲ್ಲಾ ನಿಮ್ಮ ದಾರಿಯನ್ನು ನೀವೇ ಮಾಡಿಕೊಂಡು ಮುನ್ನಡೆಯಬೇಕು. ಸಹಚಾರಣಿಗರು ತಂದಿದ್ದ "ಖರ್ಜೂರ" ಮತ್ತು "ಟ್ಯಾಂಗ್" ಅನ್ನು ಸೇವಿಸುತ್ತಾ ಮಾರ್ಗ ಮಧ್ಯದಲ್ಲಿ ಜೋಫಿನ್ ಮತ್ತು ಸಂಗಡಿಗರ ನೃತ್ಯ ಕಾರ್ಯಕ್ರಮವನ್ನ ನೋಡಿಕೊಂಡು ಮುಂದುವರೆದೆವು. :) ಹರ್ಷ ಅದರ ವಿಡಿಯೋ ಚಿತ್ರಣ ಮಾಡಿದರು, ಮಂಜಿನ ಮಧ್ಯೆ ಹೇಗೆ ಮೂಡಿ ಬಂದಿತ್ತೂ... ನಾನು ನೋಡಲಾಗಲಿಲ್ಲ.

ಶೋಲಾ ಕಾಡುಗಳನ್ನೆಲ್ಲಾ ದಾಟಿ ಒಂದು ಬಯಲಿನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು. ಎಲ್ಲರಿಗೂ ದಣಿವಾದ್ದರಿಂದ ಮತ್ತೆ ನಮ್ಮ "ಟ್ಯಂಗ್" ಕುಡಿದು ಪಯಣ ಮುಂದುವರಿಸಿದೆವು. ಮಧ್ಯಹ್ನ ಅಂದಾಜು ೧೨.೦೦ ಘಂಟೆಗೆ ನಮ್ಮ ಮತ್ತೊಂದು ವಿರಾಮ. ಅಷ್ಟು ಹೊತ್ತಿಗಾಗಲೇ ಸೂರ್ಯ ನಮ್ಮನ್ನು ನೋಡಲು ತನ್ನ ಕಿರಣಗಳನ್ನ ಬೀರಿದ್ದ, ಮಂಜು ಕರಗುತ್ತಿತ್ತು.

ಆ ಸ್ಥಳದ ಎದುರಿನಲ್ಲಿ ದಟ್ಟವಾದ ಕಾಡಿನಿಂದಾವೃತವಾದ ಕಣಿವೆ, ಮತ್ತು ಭದ್ರಾ ಅಣೇಕಟ್ಟೆಯ ನಯನ ಮನೋಹರವಾದ ದೃಷ್ಯ ನಮ್ಮ ದಣಿವನ್ನು ಮರೆಯಾಗಿಸಿತ್ತು. ಅಲ್ಲಿ ನಮ್ಮ ಕಣ್ಣುಗಳಲ್ಲದೇ ಕ್ಯಾಮರಾ ಕಣ್ಣುಗಳೂ ಆ ಸೊಬಗನ್ನ ಸೆರೆಹಿಡಿಯುತ್ತಿದ್ದವು.



ಆ ವಿರಾಮದಲ್ಲಿ ನಮಗೆಲ್ಲಾ ಮೊದಲೇ ತಂದಿದ್ದ Dil-pasand ಮತ್ತು Cream-bun ನೀಡಲಾಯಿತು. ನನ್ನ ಬ್ಯಾಗಿನಲ್ಲಿ ಇಲ್ಲಿಯ ತನಕ ಜೊತೆಯಾಗಿ ಬಂದಿದ್ದ ಸೌತೇಕಾಯಿಯನ್ನು ಎಲ್ಲರಿಗೂ ನೀಡಿ ನನ್ನ ಭಾರವನ್ನ ಕಡಿಮೆ ಮಾಡಿಕೊಂಡೆ ;) ಅಲ್ಲಿಂದ ಕೆಳಗೆ ಕಣಿವೆಯ ಕಡೆಗೆ ಇಳಿದರೆ ಒಂದು ಗುಹೆ ಇದೆಯಂತೆ, ನಮ್ಮಲ್ಲಿ ಕೆಲವರು ಅತ್ತಕಡೆಗೆ ಹೊರಟರು. ಮಿಕ್ಕವರು ಕೆಮ್ಮಣ್ಣುಗುಂಡಿಯ ಹಾದಿ ಹಿಡಿದೆವು. ಹಾಗೆಯೇ ಮುಂದೆ ಸಾಗುವಾಗ ಅಲ್ಲಿ ಮಹಾರಾಜರು ಹಿಂದೆ ತಂಗಲು ಬಳಸುತ್ತಿದ್ದ ಮಹಲಿನ ಪಳಯುಳಿಕೆ ಇದೆ. ದಾರಿಯುದ್ದಕ್ಕೂ ಪ್ರಕೃತಿಯ ಸೊಬಗನ್ನ ಸಾಧ್ಯವಾದಷ್ಟೂ ನನ್ನ ಕ್ಯಾಮರದ ಒಳಗಡೆ ತುಂಬಿಸುವ ಪ್ರಯತ್ನ ಮಾಡುತ್ತಾ ನಮ್ಮ ಅಂತಿಮವಾದ ಮತ್ತು ಕಠಿಣವಾದ ಮಾರ್ಗದ ಮುಂದೆ ಬಂದು ನಿಂತಾಗ ಸಮಯ ಸುಮಾರು ೧.೩೦.

ಈ ದುರ್ಗಮವಾದ ಹಾದಿ ಎದುರಾಗುವಮುನ್ನ ನಮಗೆ ಕೆಮ್ಮಣ್ಣುಗುಂಡಿಯ ಕಟ್ಟಡಗಳು ಬರಿಗಣ್ಣಿಗೇ ಕಾಣುತ್ತವೆ, ಆದರೆ ಮಾರ್ಗಮಾತ್ರ ಕಾಣುವುದಿಲ್ಲ. ಹಾಗಾಗಿ ಆ ಹಾದಿಯನ್ನ ನಾವೇ ಮಾಡಿಕೊಂಡು ಕೆಳಗಿಳಿಯಬೇಕು. ಮನು ಮತ್ತು ಹರ್ಷ ಕೆಳಗಿಳಿಯುವ ಹಾದಿಯ ಪತ್ತೆಯಲ್ಲಿ ತೊಡಗಿ ವಿಫಲರಾದರು. ಕಾರಣ ಅಷ್ಟು ದಟ್ಟವಾದ ಆ ಕಾಡುಮರಗಳು ಮತ್ತು ಮುಳ್ಳಿನಿಂದ ಕೂಡಿದ ಪೊದೆಗಳು.

ಸುಮಾರು ೩೦ ನಿಮಿಷದ ಹಾದಿಯಲ್ಲಿ ೬ ಅಡಿಗೂ ಮೀರಿದ ಎತ್ತರದ ಪೊದೆಗಳನ್ನು ಸರಿಸುತ್ತಾ ನಾವೆಲ್ಲಾ ಯುದ್ದಕ್ಕೆ ಹೊರಟ ಸೈನಿಕರಂತೆ ಮುನ್ನುಗ್ಗುತ್ತಿದ್ದೆವು. ನಮ್ಮ ಗುರಿಇದ್ದದ್ದು ಕೆಮ್ಮಣ್ಣುಗುಂಡಿಯೊಂದೇ. ಮಾರ್ಗಮಧ್ಯದಲ್ಲಿ ನಮ್ಮನ್ನು ದಾರಿ ತಪ್ಪಿಸುವ ಹಾದಿಗಳು ಹಲವಾರು, ಆದರೆ ನಾವು ಕೇವಲ GPSನ ಮಾತನ್ನು ಮಾತ್ರ ಕೇಳುತ್ತಾ ಮುನ್ನಡೆದೆವು. ಮಾರ್ಗಮಧ್ಯದಲ್ಲಿ ಮತ್ತೊಮ್ಮೆ ಕಡಿದಾದ ಪರ್ವತವನ್ನು ಹತ್ತಬೇಕಾಯಿತು, ಆದರೆ ಹತ್ತಲು ಯಾವುದೇ ಆಧಾರವಿರಲಿಲ್ಲ, ಇದ್ದದ್ದು ಅಲ್ಲಿ ಬೆಳೆದು ನಿಂತಿದ್ದ ಮುಳ್ಳಿನ ಪೊದೆಗಳಷ್ಟೇ. ನಾನು ನನ್ನ ಕೈಗಳಿಗೆ Glove ಹಾಕಿದ್ದರಿಂದ ಆ ಪೊದೆಗಳನ್ನ ಸರಿಸಲು ಅನುಕೂಲವಾಯಿತು. ಮುಳ್ಳಿನ ಪೊದೆಗಳು ನಮ್ಮ ಮೈ ಮೇಲೆ ಮಾಡಿದ್ದ ಗಾಯಗಳು ನಮ್ಮ ಮುಖ್ಯಹಾದಿ ದೊರೆತ ಸಂಭ್ರಮದಲ್ಲಿ ಮರೆಯಾಗಿದ್ದವು. ಅಂತೂ ಇಂತೂ ನಾವೆಲ್ಲಾ ಸುರಕ್ಷಿತವಾಗಿ ಮುಖ್ಯ ರಸ್ತೆಯಲ್ಲಿದ್ದೆವು... ಹುರ್ರೇ..... :D

ನಾವೆಲ್ಲಾ ಕೆಮ್ಮಣ್ಣುಗುಂಡಿ ತಲುಪಿ ವಿಶ್ರಮಿಸಿಕೊಳ್ಳುತ್ತಿರುವಾಗ ಹರ್ಷ ಮತ್ತವನ ಸಂಗಡಿಗರು ಅಲ್ಲಿಂದ ಬೀರೂರಿಗೆ ಹೊರಡಲು ನಮಗೆ ಜೀಪಿನ ವ್ಯವಸ್ಥೆ ಮಾಡಲು ಹೊರಟಿದ್ದರು. ನಾವೆಲ್ಲಾ ಎರಡು ಜೀಪಿನಲ್ಲಿ ಬೀರೂರಿನ ಕಡೆಗೆ ಪಯಣ ಬೆಳೇಸಿದೆವು.

ಮಾರ್ಗಮಧ್ಯದಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು ನಮ್ಮನ್ನೆಲ್ಲಾ ಬೀಳ್ಗೊಟ್ಟಿತು. ಬೀರೂರಿನಿಂದ ನಮ್ಮ ರೈಲ್ವೇ ಪ್ರಯಾಣ ೫.೪೫ಕ್ಕೆ ಶುರುವಾಗಿ ೯.೨೦ಕ್ಕೆ ಬೆಂಗಳೂರನ್ನು ತಲುಪಿದೆವು. ಅಲ್ಲಿಂದ ನಾನು ನನ್ನ ಮನೆಯಕಡೆ ಹೊರಡುವ BMTC ಹತ್ತಿ ಮನೆಗೆ ಬಂದೆ.


ನಿಸರ್ಗಮಾತೆಯ ಮಡಿಲಿನಲ್ಲಿ ಕಳೆದ ಆ ೨ ದಿನ ಅವಿಸ್ಮರಣೀಯ.... :)